

ಬೆಂಗಳೂರು: ಐಟಿ-ಬಿಟಿ ಇಲಾಖೆ ವತಿಯಿಂದ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ(ಬಿಇಐಸಿ) ಆಯೋಜಿಸಲಾಗಿರುವ ಏಷ್ಯಾದ ಅತಿದೊಡ್ಡ ಟೆಕ್ ಸಮ್ಮಿಟ್ 'ಬೆಂಗಳೂರು ಟೆಕ್ ಸಮ್ಮಿಟ್ 2025' ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಐಟಿ, ಬಿಟಿ ಸಚಿವರಾದ ಪ್ರಿಯಾಂಕ್ ಖರ್ಗೆ, ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ್, ಕಿಯೋನಿಕ್ಸ್ ಅಧ್ಯಕ್ಷರಾದ ಶರತ್ ಬಚ್ಚೇಗೌಡ ಸೇರಿದಂತೆ ದೇಶ ವಿದೇಶಗಳಿಂದ ಆಗಮಿಸಿದ್ದ ತಂತ್ರಜ್ಞಾನ ವಲಯದ ಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ 28ನೇ ಆವೃತ್ತಿಯ ಟೆಕ್ ಸಮ್ಮಿಟ್ನಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಡೀಪ್ ಟೆಕ್, ಎಐ, ಸೆಮಿಕಾನ್, ಡಿಜಿ-ಆರೋಗ್ಯ ಮತ್ತು ಜೈವಿಕ ತಂತ್ರಜ್ಞಾನ, ನವೋದ್ಯಮ ಪರಿಸರ, ರಕ್ಷಣೆ ಮತ್ತು ಬಾಹ್ಯಾಕಾಶ ಹೀಗೆ 9 ವಿಭಿನ್ನ ಪರಿಕಲ್ಪನೆಗಳ ಅಡಿಯಲ್ಲಿ ಪ್ರದರ್ಶನಗಳು ಮತ್ತು ಗೋಷ್ಠಿಗಳನ್ನು ಆಯೋಜಿಸಲಾಗಿದೆ.
ಈ ಬಾರಿಯ ಸಮ್ಮಿಟ್ನಲ್ಲಿ 'ಫ್ಯೂಚರ್ ಮೇಕರ್ಸ್ ಕಾನ್ಕ್ಲೇವ್' ಪ್ರಮುಖ ಆಕರ್ಷಣೆಯಾಗಲಿದೆ. ಇದು ನವೋದ್ಯಮಿಗಳಿಗೆ ಬೃಹತ್ ವೇದಿಕೆಯಾಗಲಿದೆ.
1,200ಕ್ಕೂ ಅಧಿಕ ಮಳಿಗೆಗಳಲ್ಲಿ ಪ್ರದರ್ಶನಗಳು ನಡೆಯಲಿದ್ದು, ನವೋದ್ಯಮಗಳು, ಸಂಶೋಧಕರು ಮತ್ತು ಹೂಡಿಕೆದಾರರನ್ನು ಒಂದೆಡೆ ಸೇರಿಸುವ ವಿವಿಧ ವೇದಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಸ್ಟಾರ್ಟ್ಅಪ್, ತಂತ್ರಜ್ಞಾನ ಉದ್ಯಮಗಳು ತಮ್ಮ ಉತ್ಪನ್ನಗಳನ್ನು ಅನಾವರಣಗೊಳಿಸಲು ಮತ್ತು ಮಾರುಕಟ್ಟೆಗೆ ಬಿಡುಗಡೆ ಮಾಡಲು 'ಬೆಂಗಳೂರು ಟೆಕ್ ಸಮ್ಮಿಟ್ 2025' ಅವಕಾಶ ಕಲ್ಪಿಸಿದೆ.
ಪ್ರಮುಖ ತಂತ್ರಜ್ಞಾನ ರಾಷ್ಟ್ರಗಳಾದ ಅಮೆರಿಕ, ಕ್ಯೂಬಾ, ಉರುಗ್ವೆ, ರಷ್ಯಾ, ಯುಕೆ, ಇಸ್ರೇಲ್, ಬೆಲ್ಜಿಯಂ, ಫಿನ್ಲ್ಯಾಂಡ್, ಫ್ರಾನ್ಸ್, ಇಯು, ದುಬೈ, ಶಾರ್ಜಾ, ದಕ್ಷಿಣ ಕೊರಿಯಾ, ಜಪಾನ್, ಸಿಂಗಾಪುರ ಮತ್ತು ಥೈಲ್ಯಾಂಡ್ ಸೇರಿದಂತೆ ಸುಮಾರು 60 ದೇಶಗಳ ಪ್ರತಿನಿಧಿಗಳು, ತಂತ್ರಜ್ಞಾನ ಕ್ಷೇತ್ರದ 10,000ಕ್ಕೂ ಅಧಿಕ ತಜ್ಞರು, 50,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಂತ್ರಜ್ಞಾನದ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಗಲಿದ್ದಾರೆ.
Advertisement