

ಬೆಂಗಳೂರು: ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿಯಲ್ಲಿ ನೂತನ ಐಟಿ ನಗರ ನಿರ್ಮಾಣಕ್ಕೆ ಆಲೋಚಿಸಲಾಗಿದೆ. ಬೆಂಗಳೂರಿನಲ್ಲಿ ಬಿಲಿಯನ್ ಡಾಲರ್ ಗಟ್ಟಲೆ ಬಂಡವಾಳ ಹೂಡಿಕೆಗೆ ನಾನಾ ದೇಶದ ನಾಯಕರುಗಳು ಮುಂದೆ ಬಂದಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಟೆಕ್ ಸಮ್ಮಿಟ್ ಉದ್ಘಾಟನೆ ಮುನ್ನ ತಮ್ಮ ಸದಾಶಿವನಗರದ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಜಗತ್ತಿನ ನಾನಾ ದೇಶದ ನಾಯಕರುಗಳು ಪ್ರತಿದಿನ ನನ್ನನ್ನು ಭೇಟಿ ಮಾಡುತ್ತಿರುತ್ತಾರೆ.
ಅನೇಕರು ಬೆಂಗಳೂರಿನಲ್ಲಿ ಉದ್ದಿಮೆ ಆರಂಭಕ್ಕೆ ಉತ್ಸುಕರಾಗಿದ್ದಾರೆ. ನಾವು ಎಷ್ಟು ಸಾಧ್ಯವೋ ಅಷ್ಟು ಅವರೆಲ್ಲರ ಬೆಂಬಲಕ್ಕೆ ನಿಂತಿದ್ದೇವೆ. 60 ದೇಶಗಳ ಪ್ರತಿನಿಧಿಗಳು, ದೇಶದ ಎಲ್ಲಾ ರಾಜ್ಯಗಳ ಪ್ರಮುಖರು ಸುಮಾರು 50 ಸಾವಿರ ಮಂದಿ ಇದರಲ್ಲಿ ಭಾಗವಹಿಸಲಿದ್ದಾರೆ. 1,500 ದೊಡ್ದ ಕಂಪೆನಿಗಳು ಭಾಗವಹಿಸುತ್ತಿವೆ. ಇವರುಗಳು ಉದ್ಯೋಗ ನೀಡಬೇಕು, ಸಂಪಾದನೆ ಮಾಡಬೇಕು. ಅದಕ್ಕೆ ನಮ್ಮ ಪ್ರೋತ್ಸಾಹ ಎಂದರು.
ಪ್ರತಿಭೆ ಮತ್ತು ವಿಶ್ವದ ಭವಿಷ್ಯದಿಂದ ತುಂಬಿರುವ ನಗರದಲ್ಲಿ ಕರ್ನಾಟಕ ಸರ್ಕಾರ ಇಂದು ತಂತ್ರಜ್ಞಾನ ಶೃಂಗಸಭೆಯನ್ನು ಆಯೋಜಿಸುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. 60 ಕ್ಕೂ ಹೆಚ್ಚು ದೇಶಗಳು ಭಾಗವಹಿಸಿವೆ. 1,000 ಭಾಷಣಕಾರರು ನಾಳೆಯ ಕಲ್ಪನೆಗಳನ್ನು ರೂಪಿಸುತ್ತಿದ್ದಾರೆ ಮತ್ತು 25 ಲಕ್ಷಕ್ಕೂ ಹೆಚ್ಚು ಐಟಿ ವೃತ್ತಿಪರರು ಇಲ್ಲಿ ಕೆಲಸ ಮಾಡುತ್ತಿದ್ದಾರೆ, ಅನೇಕರು ಬೆಂಗಳೂರಿನಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ, ಐಟಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಶರತ್ ಬಚ್ಚೇಗೌಡ ಅವರ ನೇತೃತ್ವದಲ್ಲಿ ನಾವು ಅವರಿಗೆ ವ್ಯವಹಾರವನ್ನು ಸುಲಭಗೊಳಿಸಲು ಬೆಂಬಲ ನೀಡುತ್ತೇವೆ. ಸ್ಟಾರ್ಟ್ಅಪ್ಗಳಿಂದ ನಾವೀನ್ಯತೆಯು ಸೈಬರ್ ಅಪರಾಧಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ ಎಂದರು.
ಪ್ರೋತ್ಸಾಹ ನೀಡಿದರೆ ಇಲ್ಲಿನ ಪ್ರತಿಭೆಗಳು, ಹೊಸ ಆವಿಷ್ಕಾರ, ತಂತ್ರಜ್ಞಾನ, ಸ್ಟಾರ್ಟ್ ಅಪ್ ಗಳು ಕರ್ನಾಟಕವನ್ನು ಹೊಸ ದಿಕ್ಕಿನೆಡೆಗೆ ಕೊಂಡೊಯ್ಯಲಿವೆ. ನೀವು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬೇಕು ಎಂದು ನಮ್ಮ ಮುಂದಿನ ಪೀಳಿಗೆಗೆ ನಾನು ಸದಾ ಹೇಳುತ್ತಿರುತ್ತೇನೆ. ಹೊಸ ಆಲೋಚನೆಗಳು ಬಂದರೆ ಸ್ಟಾರ್ಟ್ ಅಪ್ ಮೂಲಕ ಬೆಳೆಯಲು ಸರ್ಕಾರ ಅವಕಾಶ ಕಲ್ಪಿಸಿ ನಿಮ್ಮ ಜೊತೆಗಿದೆ ಎಂದು ಹೇಳುತ್ತಿರುತ್ತೇನೆ. ನಮ್ಮನ್ನು ನಂಬಿ ಬಂದವರಿಗೆ ಉತ್ತಮ ಅವಕಾಶ ನೀಡುವುದು ನಮ್ಮ ಕೆಲಸ. ಉದ್ಯಮಸ್ನೇಹಿ ವಾತಾವರಣ ನಿರ್ಮಿಸಲಾಗುವುದು ಎಂದು ಎಂದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನದಿಂದ ಎಲ್ಲಾ ಕ್ಷೇತ್ರಗಳಿಗೆ ಅದರದೇ ಆದ ನೀತಿ ರೂಪಿಸಿ, ಪ್ರೋತ್ಸಾಹ ನೀಡುತ್ತಿದೆ. ರಸ್ತೆಗಳ ದುರಸ್ತಿ ಕಾರ್ಯಕ್ಕೆ ಹಲವಾರು ಕಂಪೆನಿಗಳು ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಾವು ನಮ್ಮ ಕೆಲಸ ಮಾಡಿದ್ದೇವೆ. ಟೀಕೆ ಮಾಡಿದರೂ ಸ್ವಾಗತ, ಹೊಗಳಿದರೂ ಸ್ವಾಗತ. ಜನಸೇವೆ ಮಾಡುವುದೇ ಮೊದಲ ಆದ್ಯತೆ ಎಂದು ಡಿಸಿಎಂ ಹೇಳಿದರು.
ಮೂರು ದಿನಗಳ ಬೆಂಗಳೂರು ಟೆಕ್ ಸಮಿಟ್ಗೆ (Bengaluru Tech Summit 2025) ಇಂದು ಚಾಲನೆ ಸಿಕ್ಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು 28ನೇ ಆವೃತ್ತಿಯ ಬೆಂಗಳೂರು ಟೆಕ್ ಸಮಿಟ್ ನ್ನು ಉದ್ಘಾಟಿಸಿದ್ದಾರೆ. ನವೆಂಬರ್ 18ರಿಂದ 20ರವರೆಗೆ ಮೂರು ದಿನಗಳ ಕಾಲ ಈ ತಂತ್ರಜ್ಞಾನ ಶೃಂಗಸಭೆ ನಡೆಯಲಿದೆ. 50ಕ್ಕೂ ಹೆಚ್ಚು ದೇಶಗಳ ತಂತ್ರಜ್ಞಾನ ಪರಿಣಿತರು, ನಾಯಕರು, ವಿವಿಧ ಕ್ಷೇತ್ರಗಳ ಉದ್ಯಮಪತಿಗಳು ಈ ಟೆಕ್ ಸಮಿಟ್ನಲ್ಲಿ ಪಾಲ್ಗೊಳ್ಳಲಿದ್ದಾರೆ.
Advertisement