

ಬೆಂಗಳೂರು: ಬೆಂಗಳೂರಿನ ಮೂಲಸೌಕರ್ಯ ಸುಧಾರಿಸಲು ಮತ್ತು ಪ್ರಪಂಚದಾದ್ಯಂತ ಹೂಡಿಕೆಗಳನ್ನು ಆಕರ್ಷಿಸಲು ಹೆಚ್ಚಿನ ಪ್ರಯತ್ನಗಳು ನಡೆಯುತ್ತಿವೆ. ಹೀಗಾಗಿ ಜನರು ಸರ್ಕಾರವನ್ನು ಟೀಕಿಸಬಾರದು, ಬದಲಿಗೆ ತಾಳ್ಮೆಯಿಂದಿದ್ದು ಅಭಿವೃದ್ಧಿಯಲ್ಲಿ ಸಹಕರಿಸಬೇಕೆಂದು ಡಿಸಿಎಂ ಹೇಳಿದ್ದಾರೆ.
ಬೆಂಗಳೂರಿನ ಎರಡನೇ ಏರ್ ಪೋರ್ಟ್ ಯಾವ ಸ್ಥಳದಲ್ಲಿ ನಿರ್ಮಾಣವಾಗುತ್ತೆ ಎಂಬ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸುಳಿವು ನೀಡಿದ್ದಾರೆ. ಬೆಂಗಳೂರಿನ ಎರಡನೇ ಏರ್ ಪೋರ್ಟ್ ಅನ್ನು ದಕ್ಷಿಣ ಭಾಗದ ಕನಕಪುರ ರಸ್ತೆಯ ಬಳಿ ನಿರ್ಮಿಸಲಾಗುತ್ತೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಟೆಕ್ ಸಮ್ಮಿಟ್ ನಲ್ಲಿ ಭಾಗವಹಿಸಿ ಮಾತನಾಡುವಾಗ ಡಿಸಿಎಂ ಡಿ.ಕೆ.ಶಿವಕುಮಾರ್ , ಬೆಂಗಳೂರಿನ ದಕ್ಷಿಣ ಭಾಗದಲ್ಲಿ 2ನೇ ಏರ್ ಪೋರ್ಟ್ ನಿರ್ಮಿಸಲಾಗುತ್ತೆ ಎಂದಿದ್ದಾರೆ.
ನಿಮ್ಮ ಸಮಸ್ಯೆ ನಮಗೆ ತಿಳಿದಿದೆ ಮತ್ತು ನಾವು ಅದರ ಸಂಬಂಧ ಕೆಲಸ ಮಾಡುತ್ತಿದ್ದೇವೆ. ಡಬಲ್ ಡೆಕ್ಕರ್ ಫ್ಲೈಓವರ್ಗಳು, ಅವಳಿ ಸುರಂಗ ರಸ್ತೆಗಳು ಮತ್ತು 132 ಕಿ.ಮೀ. ವ್ಯಾಪ್ತಿಯ ಇತರ ಯೋಜನೆಗಳೊಂದಿಗೆ ನಗರದ ಮೂಲಸೌಕರ್ಯವನ್ನು ಸುಧಾರಿಸಲು 1.5 ಲಕ್ಷ ಕೋಟಿ ರೂ.ಗಳನ್ನು ಹೂಡಿಕೆ ಮಾಡಲಾಗುತ್ತಿದೆ. ನಮ್ಮ ಮೇಲೆ ವಿಶ್ವಾಸವಿಡಿ.
ಬಿಡದಿಯಲ್ಲಿ ವಿಶ್ವ ದರ್ಜೆಯ ನಗರವನ್ನು ರಚಿಸಲಾಗುತ್ತಿದೆ ಮತ್ತು ದಕ್ಷಿಣ ಬೆಂಗಳೂರಿನಲ್ಲಿ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬರಲಿದೆ. ಇದೆಲ್ಲವೂ ನಗರದ ದಟ್ಟಣೆಯನ್ನು ಕಡಿಮೆ ಮಾಡುತ್ತದೆ, ಎಂದು ಅವರು ಹೇಳಿದರು.
ಮುಂಬೈನ ಉದಾಹರಣೆ ಉಲ್ಲೇಖಿಸಿದ ಶಿವಕುಮಾರ್, ಸುರಂಗ ರಸ್ತೆಗಳ ನಿರ್ಮಾಣ ಸೇರಿದಂತೆ ಮುಂಬೈನಲ್ಲಿ ಮೂಲಸೌಕರ್ಯಗಳನ್ನು ಸುಧಾರಿಸಲು ಕೇಂದ್ರ ಮತ್ತು ಮಹಾರಾಷ್ಟ್ರ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದು ಹೇಳಿದರು. ಇದನ್ನು ಕರ್ನಾಟಕದಲ್ಲಿಯೂ ಮಾಡಬೇಕು ಎಂದರು.
ಜಗತ್ತಿನಾದ್ಯಂತ ಜನರು ಕರ್ನಾಟಕದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಅವರು ಕರ್ನಾಟಕವನ್ನು ವಿಶ್ವದ ಭವಿಷ್ಯದ ತಂತ್ರಜ್ಞಾನ ರಾಜಧಾನಿಯಾಗಿ ನೋಡುತ್ತಾರೆ. ಅವರಿಗೆ ಕರ್ನಾಟಕದ ಜನರ ಮೇಲೆ ವಿಶ್ವಾಸವಿದೆ. ಬೆಂಗಳೂರಿನ ಮೂಲಸೌಕರ್ಯ ಸುಧಾರಿಸುತ್ತಿದೆ ಮತ್ತು ಜನಸಂಖ್ಯೆಯೂ ಹೆಚ್ಚುತ್ತಿದೆ. ನಾವೆಲ್ಲರೂ ಬೆಂಗಳೂರಿನ ಬೆಳವಣಿಗೆಯನ್ನು ಬೆಂಬಲಿಸಬೇಕು ಮತ್ತು ಅದನ್ನು ಟೀಕಿಸಬಾರದು" ಎಂದು ಅವರು ಹೇಳಿದರು.
ರಾಜ್ಯ ಸರ್ಕಾರವು ಪ್ರತ್ಯೇಕ NRI ಹೂಡಿಕೆ ಕೋಶವನ್ನು ರಚಿಸಲು ಕೆಲಸ ಮಾಡುತ್ತಿದೆ, ಆದರೆ ಗ್ರಾಮೀಣ ಮಕ್ಕಳ ಶಿಕ್ಷಣವನ್ನು ಬಲಪಡಿಸಲು ವಿಶೇಷ ನೀತಿಯನ್ನು ರಚಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
Advertisement