

ಬೆಂಗಳೂರು: ರಾಜ್ಯದ 9 ಮೃಗಾಲಯಗಳ ಖಾಲಿ ಪಶುವೈದ್ಯರ ಹುದ್ದೆಗಳನ್ನು ಆದಷ್ಟು ಬೇಗ ಭರ್ತಿ ಮಾಡುವಂತೆ ಅರಣ್ಯ ಇಲಾಖೆ ಮತ್ತು ಎಲ್ಲಾ 9 ಮೃಗಾಲಯಗಳ ಮುಖ್ಯಸ್ಥರಿಗೆ ನಿರ್ದೇಶನ ನೀಡಲಾಗುವುದು ಎಂದು ಸಚಿವ ಈಶ್ವರ್ ಬಿ ಖಂಡ್ರೆ ಅವರು ಮಂಗಳವಾರ ಹೇಳಿದ್ದಾರೆ.
ಬೆಳಗಾವಿ ಕಿರು ಮೃಗಾಲಯದಲ್ಲಿ 31 ಕೃಷ್ಣಮೃಗಗಳು ಅಸಹಜವಾಗಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಒಂಬತ್ತೂ ಮೃಗಾಲಯಗಳ ಮುಖ್ಯಸ್ಥರೊಂದಿಗೆ ಮಂಗಳವಾರ ವಿಡಿಯೊ ಸಂವಾದ ಮೂಲಕ ಸಚಿವರು ಸಭೆ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತ್ಯೇಕ ಕೇಡರ್ ರಚಿಸಲು ಮತ್ತು 15 ವನ್ಯಜೀವಿ ಪಶುವೈದ್ಯರನ್ನು ನೇಮಿಸಲು ತಾತ್ವಿಕವಾಗಿ ಅನುಮೋದನೆ ನೀಡಿದ್ದಾರೆಂದು ಹೇಳಿದರು.
ಎಲ್ಲಾ ಮೃಗಾಲಯ ಪಾಲಕರು ಮತ್ತು ಸಿಬ್ಬಂದಿಗೆ ಅವರ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಮತ್ತು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ನಿರ್ದೇಶನಗಳನ್ನು ನೀಡಲಾಗಿದೆ. ಪ್ರಾಣಿಗಳ ಆರೋಗ್ಯದ ಬಗ್ಗೆ ನಿಕಟ ನಿಗಾ ಇಡಲು ಮತ್ತು ಯಾವುದೇ ಕಳವಳವನ್ನು ವರದಿ ಮಾಡಲು ಅವರಿಗೆ ನಿರ್ದೇಶಿಸಲಾಗಿದೆ ಎಂದು ತಿಳಿಸಿದರು.
ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವು ಪ್ರಕರಣಕ್ಕೆ ರೋಗ- ಬ್ಯಾಕ್ಟೀರಿಯಾ ಸೋಂಕು ಕಾರಣವಾಗಿದೆ ಎಂದು ವೈದ್ಯರು ದೃಢಪಡಿಸಿದ್ದು, ಈ ಸೋಂಕು ಗಾಳಿಯಿಂದ, ನೀರಿನಿಂದ, ಆಹಾರದಿಂದ ಅಥವಾ ಪ್ರಾಣಿ ಪಾಲಕರಿಂದ ಪಸರಿಸಿದೆಯೇ ಎಂಬ ಬಗ್ಗೆ ಅಧ್ಯಯನ ನಡೆಸುವಂತೆ ಮತ್ತು ಬೇರೆ ಪ್ರಾಣಿಗಳಿಗೆ ಪಸರಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಮೃಗಾಲಯಗಳಲ್ಲಿ ವನ್ಯಜೀವಿಗಳ ನಿರ್ವಹಣೆಯ ಕುರಿತಂತೆ ಮತ್ತು ಇಂತಹ ಸೋಂಕು ಕಾಣಿಸಿಕೊಂಡಾಗ ಹೇಗೆ ಕ್ರಮ ಕೈಗೊಳ್ಳಬೇಕು, ಏನೆಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಪ್ರಮಾಣಿತ ಮಾನದಂಡ (ಎಸ್ಓಪಿ) ರೂಪಿಸಿ, ಕಡ್ಡಾಯವಾಗಿ ಅನುಪಾಲನೆ ಮಾಡುವಂತೆ ನಿರ್ದೇಶಿಸಿದರು.
ಮೃಗಾಲಯ, ವನ್ಯಜೀವಿಧಾಮಗಳಲ್ಲಿ ಪ್ರಾಣಿಗಳು ಮೃತಪಟ್ಟರೆ ವಿಳಂಬ ಮಾಡದೆ ಲೆಕ್ಕ ಪರಿಶೋಧನೆ ಮಾಡಿಸಿ, ಸರ್ಕಾರಕ್ಕೆ ಮಾಹಿತಿ ನೀಡಬೇಕು. ಬೆಳಗಾವಿಯಲ್ಲಿ 31 ಕೃಷ್ಣ ಮೃಗಗಳ ಸಾವು ಎಚ್ಚರಿಕೆಯ ಗಂಟೆಯಾಗಿದ್ದು, ಉಳಿದ 7 ಕೃಷ್ಣಮೃಗಗಳಿಗೂ ಸೋಂಕಿರುವ ಕಾರಣ ಅವುಗಳಿಗೆ ಅಗತ್ಯ ಚಿಕಿತ್ಸೆ ನೀಡಲು ಹಾಗೂ ರಾಜ್ಯದ ಎಲ್ಲ ಮೃಗಾಲಯಗಳಲ್ಲೂ ಮುಂಜಾಗರೂಕತಾ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಇತ್ತ ಬನ್ನೇರುಘಟ್ಟದಿಂದ ನೆರೆ ರಾಜ್ಯಕ್ಕೆ ವನ್ಯಜೀವಿ ಸಾಗಿಸುವಾಗ ಅರವಳಿಕೆ ನೀಡಿದ್ದ ಕಾಡೆಮ್ಮೆ ಮೃತಪಟ್ಟಿರುವುದರಲ್ಲಿ ಅಧಿಕಾರಿ, ಸಿಬ್ಬಂದಿಯ ನಿರ್ಲಕ್ಷ್ಯ ಇದೆ ಎಂದು ದೂರುಗಳು ಬಂದಿದ್ದು, ಈ ಬಗ್ಗೆ ತಂಡ ರಚಿಸಿ ವರದಿ ನೀಡುವಂತೆ ಹಾಗೂ ವನ್ಯಜೀವಿಗಳ ನಿರ್ವಹಣೆಯ ಬಗ್ಗೆ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡುವಂತೆಯೂ ಸಚಿವರು ಸಭೆಯಲ್ಲಿ ಸೂಚನೆ ನೀಡಿದರು.
Advertisement