

ಬಳ್ಳಾರಿ: ಬಳ್ಳಾರಿ ಜೀನ್ಸ್ ಉದ್ಯಮಕ್ಕೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಶಾಕ್ ನೀಡಿದ್ದು, ಮಂಡಳಿಯು 36 ಜೀನ್ಸ್ ವಾಷಿಂಗ್ ಯೂನಿಟ್ಗಳನ್ನು ಮುಚ್ಚಲು ಆದೇಶಿಸಿದೆ.
ಕಲುಷಿತ ನೀರನ್ನು ನಾಲೆಗೆ ಹರಿಸುತ್ತಿದ್ದ ಕಾರಣ ಮಾಲಿನ್ಯ ನಿಯಂತ್ರಣ ಮಂಡಳಿಯು 36 ಜೀನ್ಸ್ ವಾಷಿಂಗ್ ಯೂನಿಟ್ಗಳನ್ನು ಮುಚ್ಚಲು ಆದೇಶಿಸಿದೆ. ಈ ಕ್ರಮದಿಂದಾಗಿ ನಗರದ ಜೀನ್ಸ್ ಉದ್ಯಮವು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸಾವಿರಾರು ಜನರ ಉದ್ಯೋಗಕ್ಕೆ ಕುತ್ತು ಬಂದಿದೆ.
ಇದೀಗ ಈ ಘಟಕಗಳ ಮಾಲೀಕರು ರಾಜ್ಯ ಸರ್ಕಾರವು ತಕ್ಷಣ ಮಧ್ಯಪ್ರವೇಶಿಸಿ, ಕೆಎಸ್ಪಿಸಿಬಿಯೊಂದಿಗೆ ಮಾತುಕತೆ ನಡೆಸಿ ಮಾನದಂಡಗಳನ್ನು ಪಾಲಿಸಲು ಹೆಚ್ಚುವರಿ ಸಮಯವನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ.
ಜೀನ್ಸ್ ಘಟಕದ ಮಾಲೀಕ ಮಲ್ಲಿಕಾರ್ಜುನ್ ಅವರು ಮಾತನಾಡಿ, ಬಳ್ಳಾರಿಯಲ್ಲಿ 500 ಕ್ಕೂ ಹೆಚ್ಚು ರೆಡಿಮೇಡ್ ಉಡುಪು ಘಟಕಗಳಿದ್ದು, ಅವು ಪ್ರತಿದಿನ 50,000 ಕ್ಕೂ ಹೆಚ್ಚು ಜೀನ್ಸ್ ಉತ್ಪಾದಿಸುತ್ತವೆಯ ಹಬ್ಬಗಳ ಸಮಯದಲ್ಲಿ ಉತ್ಪಾದನೆ ಮಟ್ಟ ದ್ವಿಗುಣಗೊಳ್ಳುತ್ತದೆ. ಒಂದು ಕಾಲದಲ್ಲಿ ಈ ಉದ್ಯಮವು ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ನೇಮಿಸಿಕೊಂಡಿತ್ತು, ಆದರೆ, ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ, ನೀರಿನ ಕೊರತೆ, ವಿದ್ಯುತ್ ಸಮಸ್ಯೆಗಳು ಮತ್ತು ಕಾರ್ಮಿಕರ ನಿರ್ಬಂಧಗಳಿಂದಾಗಿ ಉದ್ಯಮ ಸಂಕಷ್ಟದಲ್ಲಿದೆ. ಡೆನಿಮ್ ಉತ್ಪನ್ನಗಳಿಗೆ ಈ ಘಟಕಗಳು ನಿರ್ಣಾಯಕವಾಗಿವೆ. ಇವುಗಳನ್ನೇ ಬಂದ್ ಮಾಡಿದೆ ಉದ್ಯಮವೇ ಸ್ಥಗಿತಗೊಳ್ಳಲಿದೆ ಎಂದು ಹೇಳಿದ್ದಾರೆ.
ಕೋವಿಡ್ಗೂ ಮೊದಲು ಬಳ್ಳಾರಿಯ ಹೊರವಲಯದಲ್ಲಿರುವ ಮುಂಡರಗಿ ಕೈಗಾರಿಕಾ ಪ್ರದೇಶದಲ್ಲಿ 83 ತೊಳೆಯುವ ಘಟಕಗಳು ಇದ್ದವು. ನಂತರದ ವರ್ಷಗಳಲ್ಲಿ ಕಂಡು ಬಂದ ಅನೇಕ ಬಿಕ್ಕಟ್ಟುಗಳು ಹಲವು ಘಟಕಗಳು ಬಂದ್ ಆಗುವಂತೆ ಮಾಡಿತ್ತು. ಈ ಸಂಖ್ಯೆ ಇದೀಗ 50 ಕ್ಕೆ ಇಳಿದಿದೆ. ಇದೀಗ 36 ಘಟಕಗಳನ್ನು ಮುಚ್ಚಿರುವುದರಿಂದ ನಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಘಟಕಗಳು ಬೋರ್ವೆಲ್ ಮತ್ತು ಟ್ಯಾಂಕರ್ ನೀರಿನ ಮೇಲೆ ಹೆಚ್ಚು ಅವಲಂಬಿತವಾಗಿವೆ. ಪದೇ ಪದೇ ಮನವಿ ಮಾಡಿದರೂ, ಸರ್ಕಾರವು ತ್ಯಾಜ್ಯವನ್ನು ಸುರಕ್ಷಿತವಾಗಿ ಹೊರಹಾಕಲು ಸರಿಯಾದ ಸ್ಥಳವನ್ನು ಹಂಚಿಕೆ ಮಾಡಿಲ್ಲ ಅಥವಾ ಸಾಮಾನ್ಯ ಸಂಸ್ಕರಣಾ ಸೌಲಭ್ಯಗಳನ್ನು ಸ್ಥಾಪಿಸಿಲ್ಲ ಎಂದು ಹೇಳಿದ್ದಾರೆ.
ಮತ್ತೊಬ್ಬ ಮಾಲೀಕ ಮಾತನಾಡಿ, ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ, ರಾಹುಲ್ ಗಾಂಧಿ ಅವರು ಉದ್ಯಮಕ್ಕೆ ಆಧುನಿಕ ಮೂಲಸೌಕರ್ಯಗಳನ್ನು ಒದಗಿಸುವ ಉದ್ದೇಶದಿಂದ ಬಳ್ಳಾರಿಯಲ್ಲಿ 5,000 ಕೋಟಿ ರೂ.ಗಳ ಜೀನ್ಸ್ ಜವಳಿ ಉಡುಪು ಉದ್ಯಾನವನವನ್ನು ಘೋಷಿಸಿದ್ದರು. ಈ ನಿಟ್ಟಿನಲ್ಲಿ ಭೂಮಿಯನ್ನು ಗುರುತಿಸಲಾಗಿದ್ದರೂ, ಯೋಜನೆಯು ಯಾವುದೇ ಪ್ರಗತಿಯನ್ನು ಕಂಡಿಲ್ಲ, ಇದು ನೀರು ಸಂಸ್ಕರಣೆ ಮತ್ತು ತ್ಯಾಜ್ಯ ವಿಲೇವಾರಿಯಂತಹ ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದು ಆಶಿಸಲಾಗಿತ್ತು.
ಇದೀಗ 36 ಘಟಕಗಳು ಸ್ಥಗಿತಗೊಳಿಸಿರುವುದರಿಂದ ಸಾವಿರಾರು ಕಾರ್ಮಿಕರು ರಾತ್ರೋರಾತ್ರಿ ನಿರುದ್ಯೋಗಿಗಳಾಗುತ್ತಿದ್ದಾರೆ. ಬಳ್ಳಾರಿ ಜೀನ್ಸ್ ಉದ್ಯಮವು ಸಂಕಷ್ಟದಲ್ಲಿದೆ. ಸರ್ಕಾರ ಮಧ್ಯಪ್ರವೇಶಿಸಿದಿದ್ದರೆ, ನಷ್ಟವನ್ನು ಎದುರಿಸಬೇಕಾಗುತ್ತದೆ. ಇದು ಭಾರತದ ಡೆನಿಮ್ ರಾಜಧಾನಿಯಾಗಿ ಬಳ್ಳಾರಿಯ ಗುರುತನ್ನು ಹಾನಿಗೊಳಿಸುತ್ತದೆ ಎಂದು ತಿಳಿಸಿದ್ದಾರೆ.
ಈ ನಡುವೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪರಿಸರ ಅಧಿಕಾರಿ ಡಾ. ಸಿದ್ದೇಶ್ವರ ಬಾಬು ಅವರು, ಜನವರಿಯಲ್ಲಿ ಮುಂಡರಗಿ ಕೈಗಾರಿಕಾ ಕ್ಲಸ್ಟರ್ ಅನ್ನು ಪರಿಶೀಲಿಸಿದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರ ನಿರ್ದೇಶನದ ಮೇರೆಗೆ ನೋಟಿಸ್ಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.
ಉಪ ಲೋಕಾಯುಕ್ತ ಸಂಸ್ಕರಿಸದ ತ್ಯಾಜ್ಯ ನೀರನ್ನು ಚರಂಡಿಗಳಿಗೆ ಬಿಡುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಅವರು ನೀಡಿದ ಸೂಚನೆಗಳ ಆಧಾರದ ಮೇಲೆ 36 ಘಟಕಗಳ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ನೋಟಿಸ್ಗಳನ್ನು ನೀಡಲಾಯಿತು ಎಂದು ತಿಳಿಸಿದ್ದಾರೆ.
Advertisement