

ಟಾಕ್ಸಿಕ್ ಚಿತ್ರದ ಚಿತ್ರೀಕರಣ, ಫ್ಯಾಮಿಲಿ ಟೈಂ ಎಂದು ರಾಕಿಂಗ್ ಸ್ಟಾರ್ ಯಶ್ (Yash) ಇತ್ತೀಚೆಗೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು ಕಡಿಮೆ. ಆದರೆ ನಿನ್ನೆ ಅವರು ಆದಾಯ ತೆರಿಗೆ ಇಲಾಖೆಯ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪತ್ನಿ ರಾಧಿಕಾ ಪಂಡಿತ್ ಜೊತೆ ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಕನ್ನಡ ಭಾಷೆ ಬಗ್ಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಇರುವ ಎಲ್ಲರಿಗೂ ಕನ್ನಡ ಕಲಿಸೋಣ, ಹಾಗೆಂದು ಬಲವಂತವಾಗಿ ನಾವು ಯಾರಿಗೂ ಕನ್ನಡ ಕಲಿಸೋದು ಬೇಡ ಎಂದರು.
ಕನ್ನಡ ಭಾಷೆ ಹಾಗೂ ಕನ್ನಡಿಗರ ಬಗ್ಗೆ ಹಾಡಿ ಹೊಗಳಿದ ಯಶ್ ಅವರು ನಮ್ಮ ಜನರ ಬಗ್ಗೆ ಹಾಗೂ ವಾತಾವರಣ ಬಗ್ಗೆ ಎಲ್ಲಾ ಮಾತಾಡ್ತಾರೆ. ನಾವೆಲ್ಲ ಕನ್ನಡವನ್ನು ಎಲ್ಲರಿಗೂ ಕಲಿಸಿ ಬೆಳೆಸುವ ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಅನ್ಯಭಾಷಿಕರು ಹೆಚ್ಚು ಇದ್ದ ಕಾರಣ ಕನ್ನಡ ಹಾಗೂ ಇಂಗ್ಲೀಷ್ ಸೇರಿಸಿ ನಟ ಯಶ್ ಮಾತನಾಡಿದ್ದರು. ಹೆಚ್ಚು ಟ್ಯಾಕ್ಸ್ ಕಟ್ಟುವ ವಿಚಾರದಲ್ಲಿ ನಮ್ಮ ರಾಜ್ಯ 2ನೇ ಸ್ಥಾನದಲ್ಲಿದೆ ಎಂದು ಕೇಳಿ ಖುಷಿಯಾಯಿತು. ಆದಷ್ಟು ಬೇಗ ಮೊದಲ ಸ್ಥಾನಕ್ಕೆ ಏರುವುದು ನಮ್ಮ ಗುರಿಯಾಗಬೇಕು ಅನ್ನಿಸುತ್ತದೆ.
ಭಾಷೆಯ ವಿಚಾರಕ್ಕೆ ಬಂದರೆ ಕನ್ನಡ ಬರದವರಿಗೆ ಕೂಡ ಇಲ್ಲಿ ಸ್ಪರ್ಧೆ ಇಟ್ಟು ಕನ್ನಡ ಕಲಿಸುವ ಪ್ರಯತ್ನ ಮಾಡಿದ್ದಾರೆ. ಇಲ್ಲಿ ಬಹಳ ಜನಕ್ಕೆ ಕನ್ನಡ ಗೊತ್ತಿಲ್ಲ ಅನ್ಸತ್ತೆ. ನನಗೆ ಅನ್ನಿಸುವುದು ಏನು ಅಂದ್ರೆ ಎಲ್ಲಿಗೆ ಹೋದ್ರು, ಅಲ್ಲಿನ ಭಾಷೆ, ಸಂಸ್ಕೃತಿಗೆ ಗೌರವ ಕೊಟ್ಟರೆ ಅದರ ಹತ್ತು ಪಟ್ಟು ತಿರುಗಿ ಬರುತ್ತದೆ. ಅದೇ ಕರ್ನಾಟಕ, ಕನ್ನಡ ನನಗೆ ಕಲಿಸಿದೆ. ನೀವೆಲ್ಲಾ ಕನ್ನಡ ಕಲಿಯಲು ಯತ್ನಿಸಿದ್ದು ಖುಷಿಯಿದೆ ಎಂದರು.
ಕರ್ನಾಟಕಕ್ಕೆ ಬೇರೆ ಕಡೆಗಳಿಂದ ಬಂದವರು ಇಲ್ಲಿನ ಜನರ ಬಗ್ಗೆ ಒಳ್ಳೆ ಮಾತುಗಳನ್ನಾಡುತ್ತಾರೆ. ಅದು ನಮ್ಮ ಸಂಸ್ಕೃತಿ. ನಾವೆಲ್ಲರೂ ಬೇರೆಯವರಿಗೆ ಕನ್ನಡ ಕಲಿಸೋಣ. ಎಲ್ಲರಲ್ಲಿ ಒಂದು ಮನವಿ ಬಲವಂತವಾಗಿ ಯಾರಿಗೆ ಏನೂ ಕಲಿಸೋಕೆ ಆಗಲ್ಲ. ಬೇರೆಯವರು ಕನ್ನಡ ಕಲಿಯಬೇಕು ಎಂದು ಗಲಾಟೆ ಮಾಡುವ ಬದಲು ಕನ್ನಡ ಗೊತ್ತಿಲ್ಲದಿದ್ದರೆ ಇಲ್ಲಿ ಕಷ್ಟ ಎನ್ನುವ ಭಾವನೆ ಬರುವಂತೆ ಮಾಡಬೇಕು. ನನ್ನ ಪ್ರಕಾರ ಯಾವುದೇ ಭಾಷೆ ಹೊಟ್ಟೆ ತುಂಬಿಸುತ್ತದೆ. ಎಲ್ಲಾ ಕಡೆ ಕನ್ನಡಕ್ಕೆ ಪ್ರಾಮುಖ್ಯತೆ ಬರುವಂತೆ ಮಾಡಬೇಕು ಅಂದ್ರೆ ನಾವು ಕನ್ನಡಿಗರಾಗಿ ಅಭಿವೃದ್ಧಿಯಾಗುವಂತೆ ಮಾಡಬೇಕು ಎಂದರು.
Advertisement