
ಮೈಸೂರು: ಜಂಬೂ ಸವಾರಿ ಆರಂಭಕ್ಕೂ ಮುನ್ನ ನಡೆದ ವೈಭವದ ದಸರಾ ಮೆರವಣಿಗೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಂಪುಟ ಸಚಿವರೊಂದಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರ ಮೊಮ್ಮಗ ಕಾಣಿಸಿಕೊಂಡ ನಂತರ ವಿವಾದ ಭುಗಿಲೆದ್ದಿದೆ.
ಸಾಂಪ್ರದಾಯಿಕವಾಗಿ ಸಾಂವಿಧಾನಿಕ ಹುದ್ದೆಗಳನ್ನು ಅಲಂಕರಿಸುವ ಗಣ್ಯರಿಗೆ ಮೀಸಲಾಗಿರುವ ವಿಜಯದಶಮಿ ಮೆರವಣಿಗೆಯಲ್ಲಿ, ಕಪ್ಪು ಸನ್ ಗ್ಲಾಸ್ ಧರಿಸಿದ ಯುವಕ ತೆರೆದ ವಾಹನದಲ್ಲಿ ರಾಜ್ಯದ ಉನ್ನತ ನಾಯಕರ ಜೊತೆಗೆ ಪ್ರಮುಖವಾಗಿ ಸ್ಥಾನಪಡೆದಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರಿ ಕಾರ್ಯಕ್ರಮದಲ್ಲಿ ಮಹಾದೇವಪ್ಪ ಮೊಮ್ಮಗನ ಉಪಸ್ಥಿತಿ ರಾಜಕೀಯ ಬಿರುಗಾಳಿ ಹುಟ್ಟುಹಾಕಿದೆ.
ಮೈಸೂರು ಜಿಲ್ಲಾಡಳಿತದಿಂದ ತೆರೆದ ಜೀಪ್ನಲ್ಲಿ ಪರೇಡ್ ಸಿಎಂ ಪ್ರೋಟೋಕಾಲ್ ಆಗಿದ್ದರೆ ಆ ಬಾಲಕ ಭಾಗಿಯಾಗಿದ್ದು ನಿಯಮ ಉಲ್ಲಂಘನೆ ಅಲ್ಲವೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಅಷ್ಟೇ ಅಲ್ಲದೆ, ಪ್ರೋಟೋಕಾಲ್ ಅಲ್ಲ ಎಂದಾದರೆ ಆ ಬಾಲಕನಿಗೆ ಮಾತ್ರ ಯಾಕೆ ಅವಕಾಶ ಎಂಬ ಟೀಕೆಗಳು ಕೂಡ ಜೋರಾಗಿವೆ.
ರಾಜ್ಯದ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಕೌಟುಂಬಿಕ ವ್ಯವಹಾರಗಳಾಗಿ ಪರಿವರ್ತಿಸುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಅಧಿಕೃತ ಸಾಂಸ್ಕೃತಿಕ ಆಚರಣೆಯ ಸಮಯದಲ್ಲಿ ಸಚಿವರ ಸಂಬಂಧಿಕರು ಅತ್ಯುನ್ನತ ಚುನಾಯಿತ ಅಧಿಕಾರಿಗಳೊಂದಿಗೆ ಇದ್ದದ್ದು ಎಷ್ಟು ಸರಿ ಎಂದು ಬಿಜೆಪಿ ನಾಯಕರು ಪ್ರಶ್ನಿಸಿದ್ದಾರೆ.
ಸಿಎಂ ಪರೇಡ್ನಲ್ಲಿ ಬಾಲಕ ಕಾಣಿಸಿಕೊಂಡ ಬಗ್ಗೆ ಮೈಸೂರು ಜಿಲ್ಲಾಡಳಿತ ಆಗಲಿ, ಸಿಎಂ ಕಛೇರಿಯಿಂದ ಆಗಲಿ ಉಸ್ತುವಾರಿ ಸಚಿವರಾಗಲಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಪ್ರೋಟೋಕಾಲ್ ಇರಲಿಲ್ಲ ಎಂದು ಹೇಳಿಲ್ಲ ಮತ್ತು ಉಲ್ಲಂಘನೆಯ ಬಗ್ಗೆಯೂ ಉತ್ತರ ನೀಡಿಲ್ಲ.
ಇನ್ನು ಈ ವಿಷಯ ಕಾಂಗ್ರೆಸ್ ಹೈ ಕಮಾಂಡ್ ನಾಯಕರ ಕಣ್ಣು ಕೆಂಪಗಾಗುವಂತೆ ಮಾಡಿದೆ. ಪರೇಡ್ನಲ್ಲಿ ಭಾಗಿಯಾಗಿದ್ದ ಬಾಲಕ ಯಾರು? ಆತ ಯಾಕೆ ನಾಯಕರ ಜೊತೆ ಪರೇಡ್ನಲ್ಲಿ ಭಾಗಿಯಾದ? ಪ್ರೋಟೋಕಾಲ್ ಅವನಿಗೆ ಇತ್ತಾ ಎಂಬ ಬಗ್ಗೆ ಕಾಂಗ್ರೆಸ್ ನಾಯಕರು ಕರ್ನಾಟಕದ ಎರಡನೇ ಹಂತದ ನಾಯಕರ ಬಳಿ ಮಾಹಿತಿ ಕೇಳಿದ್ದಾರೆ.
ಕಾಂಗ್ರೆಸ್ ಒಳಗಿನಿಂದಲೇ ಈ ವಿವಾದಕ್ಕೆ ಮತ್ತಷ್ಟು ಬಲ ತುಂಬುವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೈಕಮಾಂಡ್ ಅತೃಪ್ತಿ ವ್ಯಕ್ತಪಡಿಸಿದೆ ಮತ್ತು ನಾಯಕತ್ವದಿಂದ ಸ್ಪಷ್ಟೀಕರಣವನ್ನು ಕೋರಿದೆ ಎಂದು ಪಕ್ಷದ ಒಳಗಿನವರು ಬಹಿರಂಗಪಡಿಸಿದ್ದಾರೆ. ಕುಟುಂಬದ ಸದಸ್ಯರಿಗೆ ಮೆರವಣಿಗೆಯಲ್ಲಿ ಭಾಗವಹಿಸಲು ಹೇಗೆ ಅನುಮತಿ ನೀಡಲಾಯಿತು ಎಂಬುದರ ಕುರಿತು ಕೇಂದ್ರ ನಾಯಕತ್ವ ವಿವರಣೆಯನ್ನು ಕೋರುತ್ತಿದೆ ಎಂದು ವರದಿಯಾಗಿದೆ.
ಮಹಾದೇವಪ್ಪ ಈ ವಿಷಯದ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಆದರೆ ಸಾಮಾಜಿಕ ಮಾಧ್ಯಮಗಳು ಪಾಸ್ಗಳನ್ನು ಹೊಂದಿರುವ ಜನರು ಜಂಬೂ ಸವಾರಿಗಾಗಿ ಅರಮನೆಗೆ ಪ್ರವೇಶ ಪಡೆಯಲು ಹರಸಾಹಸ ಪಡುತ್ತಿರುವ ವೀಡಿಯೊಗಳಿಂದ ತುಂಬಿವೆ.
Advertisement