
ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 1 ಮೆಗಾವ್ಯಾಟ್ ಕ್ಯಾಪ್ಟಿವ್ ಸೌರ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲಾಗುತ್ತಿದ್ದು, ಇಲ್ಲಿ ಉತ್ಪಾದಿಸಿದ ವಿದ್ಯುತ್'ನ್ನು ಉದ್ಯಾನವನವನ್ನು ನಿರ್ವಹಿಸಲು ಬಳಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ಅವರು ಬುಧವಾರ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಉಪಸ್ಥಿತಿಯಲ್ಲಿ 71ನೇ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗೆ 2024ನೇ ಸಾಲಿನ ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಮಾನವ-ಪ್ರಾಣಿ ಸಂಘರ್ಷವನ್ನು ಕಡಿಮೆ ಮಾಡಲು ಮತ್ತು ಜಾಗೃತಿ-ಸಹಬಾಳ್ವೆಯ ಅಗತ್ಯವನ್ನು ಹೆಚ್ಚಿಸಲು ಪ್ರಯತ್ನಗಳು ನಡೆಯುತ್ತಿವೆ, ಅತಿಕ್ರಮಣಗೊಂಡ ಭೂಮಿಯನ್ನು ಮರಳಿ ಪಡೆಯಲು, ಹಸಿರು ಹೊದಿಕೆಯನ್ನು ಹೆಚ್ಚಿಸಲು ಮತ್ತು ಅರಣ್ಯೀಕರಣವನ್ನು ವೇಗಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು.
ಇದೇ ವೇಳೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 1 ಮೆಗಾವ್ಯಾಟ್ ಕ್ಯಾಪ್ಟಿವ್ ಸೌರ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲಾಗುತ್ತಿದ್ದು, ಇಲ್ಲಿ ಉತ್ಪಾದಿಸಿದ ವಿದ್ಯುತ್'ನ್ನು ಉದ್ಯಾನವನವನ್ನು ನಿರ್ವಹಿಸಲು ಬಳಸಲಾಗುವುದು. ಉದ್ಯಾನದ ಇಂದಿನ ಮತ್ತು ಭವಿಷ್ಯದ ಇಂಧನ ಅಗತ್ಯವನ್ನು ಸೌರ ವಿದ್ಯುತ್ ನಿಂದಲೇ ಪೂರೈಸಲು ತೀರ್ಮಾನಿಸಲಾಗಿದೆ. ದೇಶದಲ್ಲೇ ಪ್ರಥಮ ಪರಿಸರ ಸ್ನೇಹಿ ವಿದ್ಯುತ್ ಸೌಲಭ್ಯದ ಜೈವಿಕ ಉದ್ಯಾನಕ್ಕೆ ಮುಂದಿನ ವಾರ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಸೌರ ವಿದ್ಯುತ್ ಸ್ಥಾವರ ಸ್ಥಾಪನೆ ಕುರಿತು ಮಾತನಾಡಿದ ಬನ್ನೇರುಘಟ್ಟ ಜೈವಿಕ ಉದ್ಯಾನವನ ಅಧಿಕಾರಿಯೊಬ್ಬರು, ಉದ್ಯಾನವನದಲ್ಲಿ ವಾರ್ಷಿಕವಾಗಿ ವಿದ್ಯುತ್ ಬಿಲ್ಗಳಿಗಾಗಿ 35-40 ಲಕ್ಷ ರೂ.ಗಳನ್ನು ಖರ್ಚು ಮಾಡಲಾಗುತ್ತಿದ್ದು, ಸುಮಾರು 600 ಕಿ.ವ್ಯಾಟ್ ವಿದ್ಯುತ್ ಬಳಸಲಾಗುತ್ತಿರುವುದರಿಂದ ಇದು ಅಗತ್ಯವಾಗಿತ್ತು. 1 ಮೆಗಾವ್ಯಾಟ್ಗಿಂತ ಕಡಿಮೆ ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರವನ್ನು ಮೃಗಾಲಯದ ಬಳಕೆಯಾಗದ ಪ್ರದೇಶದಲ್ಲಿ ಕಲ್ಲಿನ ಮೇಲೆ ಸ್ಥಾಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇಂಧನ ಸ್ವಾವಲಂಬನೆಯನ್ನು ಬೆಳೆಸುವುದು ಮತ್ತು ಹೆಚ್ಚುವರಿ ವಿದ್ಯುತ್ ಮಾರಾಟ ಮಾಡುವುದು ಇದರ ಉದ್ದೇಶವಾಗಿದೆ. ಇದನ್ನು ಸಿಎಸ್ಆರ್ ನಿಧಿಯೊಂದಿಗೆ ಸ್ಥಾಪಿಸಲಾಗುತ್ತಿದೆ. ಪವರ್ ಗ್ರಿಡ್ ಮತ್ತು ನೆಟ್ ಮೀಟರಿಂಗ್ ಸ್ಥಾಪಿಸುವ ಕುರಿತು ಬೆಸ್ಕಾಂನೊಂದಿಗೆ ಶೀಘ್ರದಲ್ಲೇ ಚರ್ಚೆಗಳು ನಡೆಯಲಿದ್ದು, ಮಾರ್ಚ್ 2026 ರಿಂದ ಸೌರ ವಿದ್ಯುತ್ ಸ್ಥಾಪನೆ ಕಾರ್ಯಾಚರಣೆ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ಯೋಜನಾ ವೆಚ್ಚ ಸುಮಾರು 3.5 ಕೋಟಿ ರೂ.ಗಳೆಂದು ಅಂದಾಜಿಸಿದೆ. ವಿದ್ಯುತ್ ಕೆಲಸ, ಉಪಕೇಂದ್ರಗಳು ಮತ್ತು ಕೇಬಲ್ಗಳಿಗಾಗಿ ಹೆಚ್ಚುವರಿ 1 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುವುದು ಎಂದು ತಿಳಿಸಿದ್ದಾರೆ.
Advertisement