ದೊಡ್ಡಬಳ್ಳಾಪುರ: "ಹೃದಯವಂತ ಆರ್.ಎಲ್.ಜಾಲಪ್ಪ ಜೀವನ‌ ಪಥ"; ಕೃತಿ ಲೋಕಾರ್ಪಣೆಗೊಳಿಸಿದ ಸಿಎಂ ಸಿದ್ದರಾಮಯ್ಯ!

ನಾನು ಮೊದಲ ಬಾರಿ ಸಚಿವನಾಗಲು ರಾಚಯ್ಯನವರಷ್ಟೇ ಜಾಲಪ್ಪನವರೂ ಕಾರಣ. ಜಾಲಪ್ಪನವರಿಗೆ ಹಿಂದುಳಿದವರ ಏಳಿಗೆಯ ವಿಚಾರದಲ್ಲಿ ದೂರದೃಷ್ಟಿ ಇತ್ತು. ಹೀಗಾಗಿ ಆಗಲೇ ವೈದ್ಯಕೀಯ ಕಾಲೇಜು ಸ್ಥಾಪಿಸಿದ್ದರು
R.L. Jalappa's Life Journey' book released
ಹೃದಯವಂತ ಆರ್.ಎಲ್.ಜಾಲಪ್ಪ ಜೀವನ‌ ಪಥ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಕೆ.ಹೆಚ್. ಮುನಿಯಪ್ಪ, ಮಧು ಬಂಗಾರಪ್ಪ, ಲೇಖಕ ಪ್ರೊಫೆಸರ್ ಕೆ.ಆರ್. ರವಿಕಿರಣ್ ಮತ್ತಿತರರು
Updated on

ದೊಡ್ಡಬಳ್ಳಾಪುರ: ಹಿರಿಯ ರಾಜಕೀಯ ಮುತ್ಸದ್ದಿ ಹಾಗೂ ಮಾಜಿ ಕೇಂದ್ರ ಸಚಿವ ಆರ್.ಎಲ್. ಜಾಲಪ್ಪ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ದೊಡ್ಡಬಳ್ಳಾಪುರ ನಗರದ ಆರ್. ಎಲ್. ಜಾಲಪ್ಪ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.

ಇದೇ ವೇಳೆ ಪ್ರೊಫೆಸರ್ ಕೆ.ಆರ್. ರವಿಕಿರಣ್ ಹಾಗೂ ಲಕ್ಷ್ಮಣ ಕೊಡಸೆ ಅವರು ಬರೆದಿರುವ 'ನೇರ ನಿಷ್ಠುರ ನಡೆಯ ಹೃದಯವಂತ ಆರ್.ಎಲ್. ಜಾಲಪ್ಪ ಜೀವನ ಪಥ' ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು.

ಬಳಿಕ ಮಾತನಾಡಿದ ಮುಖ್ಯಮಂತ್ರಿ, ಆರ್.ಜಾಲಪ್ಪ ಅವರ ವ್ಯಕ್ತಿತ್ವ ನೇರ-ನಿಷ್ಠುರ ಮತ್ತು ಹೃದಯವಂತಿಕೆಯಿಂದ ಕೂಡಿತ್ತು. ಜಾಲಪ್ಪನವರಿಗೆ ಸಮಯ ಪ್ರಜ್ಞೆ ಇತ್ತು. ಒಬ್ಬ ದಕ್ಷ ಆಡಳಿತಗಾರರಾಗಿದ್ದ ಜಾಲಪ್ಪ ಅವರು ನಿರ್ವಹಿಸಿದ ಎಲ್ಲಾ ಖಾತೆಗಳಲ್ಲೂ ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ದಾಖಲಿಸಿದ್ದು ಮಾತ್ರವಲ್ಲ, ರೈತರಿಗೆ, ಕೃಷಿಗೆ ಅತ್ಯಂತ ಮಹತ್ವದ ಕೊಡುಗೆ ನೀಡಿದ್ದರು ಎಂದು ಸ್ಮರಿಸಿದರು.

ನಾನು ಮೊದಲ ಬಾರಿ ಸಚಿವನಾಗಲು ರಾಚಯ್ಯನವರಷ್ಟೇ ಜಾಲಪ್ಪನವರೂ ಕಾರಣ. ಜಾಲಪ್ಪನವರಿಗೆ ಹಿಂದುಳಿದವರ ಏಳಿಗೆಯ ವಿಚಾರದಲ್ಲಿ ದೂರದೃಷ್ಟಿ ಇತ್ತು. ಹೀಗಾಗಿ ಆಗಲೇ ವೈದ್ಯಕೀಯ ಕಾಲೇಜು ಸ್ಥಾಪಿಸಿದ್ದರು. ಮೊದಲಿಗೆ 150 ವಿದ್ಯಾರ್ಥಿಗಳಿಂದ ಆರಂಭವಾದ ಸಂಸ್ಥೆ ಈಗ 40 ಸಾವಿರದಷ್ಟು ವಿದ್ಯಾರ್ಥಿಗಳು ನಾನಾ ವಿಭಾಗಗಳಲ್ಲಿ ಓದುತ್ತಿರುವುದು ಶ್ಲಾಘನೀಯ ಎಂದರು.

ಹದಿನಾರು ಬಜೆಟ್ ಮಂಡಿಸುವಂತಾಗಲು ಜಾಲಪ್ಪ ಕಾರಣ:

ಬಹಳ ಸ್ವಾಭಿಮಾನಿ ಆಗಿದ್ದ ಜಾಲಪ್ಪನವರು ನನ್ನ ರಾಜಕೀಯ ಏಳಿಗೆಗೆ ಕಾರಣಕರ್ತರು‌. ನನ್ನನ್ನು ಮುಖ್ಯಮಂತ್ರಿ ಮಾಡಲೇಬೇಕು ಎಂದು ಜಾಲಪ್ಪನವರು ದೇವೇಗೌಡರ ಎದುರು ಹಠ ಹಿಡಿದು ಆಗ್ರಹ ಪೂರ್ವಕವಾಗಿ ಒತ್ತಾಯಿಸಿದ್ದರು. ನಾನು ಮತ್ತೆ ಜೆ.ಹೆಚ್.ಪಟೇಲರು ಇಬ್ಬರ ನಡುವೆ ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ಚರ್ಚೆ ನಡೆಯುತ್ತಿದ್ದಾಗ ನನ್ನ ಪರವಾಗಿ ಗಟ್ಟಿಯಾಗಿ ನಿಂತು ದೇವೇಗೌಡರಿಗೆ ನನ್ನನ್ನೇ ಸಿಎಂ ಮಾಡಬೇಕು ಎಂದು ಒತ್ತಾಯಿಸಿದ್ದರು. ನಾನು ಮೊದಲ ಬಾರಿ ಹಣಕಾಸು ಸಚಿವನಾಗುವಾಗಲೂ ಜಾಲಪ್ಪನವರ ಪ್ರಯತ್ನ‌ ಇದೆ ಎಂದು ತಿಳಿಸಿದರು.

ನಾನು ಕಂದಾಯ ಸಚಿವನಾಗಬೇಕು ಎಂದುಕೊಂಡಿದ್ದೆ. ಆದರೆ, ನಾನು ಹಣಕಾಸು ಸಚಿವ ಆಗಲೇಬೇಕು ಎಂದು ಸೂಚಿಸಿದರು. ಅವರ ಕಾರಣದಿಂದ ನಾನು ಇಂದು ಹದಿನಾರು ಬಜೆಟ್ ಗಳನ್ನು ಮಂಡಿಸುವಂತಾಯಿತು ಎಂದು ತಿಳಿಸಿದರು.

ಸಾಮಾಜಿಕ ನ್ಯಾಯದ ಪರವಾಗಿ ಜೀವನ ಮುಡುಪು:

ಇಂದು ನಾನು ರಾಜಕೀಯವಾಗಿ ಈ ಮಟ್ಟದ ಏಳಿಗೆ ಆಗಿದ್ದರೆ ಅದರಲ್ಲಿ ಜಾಲಪ್ಪನವರ ಪಾತ್ರ ದೊಡ್ಡದಿದೆ. ಅವರ ಋಣವನ್ನು ಮರೆಯಲು ಸಾಧ್ಯವೇ ಇಲ್ಲ. ಅತ್ಯಂತ ಹೃದಯವಂತರಾಗಿದ್ದ ಜಾಲಪ್ಪನವರು ಆತಿಥ್ಯದಲ್ಲೂ ಎತ್ತಿದ ಕೈ. ತುಪ್ಪದ ದೋಸೆ ಮಾಡಿ ಸ್ವತಃ ಬಡಿಸಿದ್ದರು. ಸಾಮಾಜಿಕ ನ್ಯಾಯದ ಪರವಾಗಿ ತಮ್ಮ ರಾಜಕೀಯ ಜೀವನವನ್ನು ಮುಡಿಪಾಗಿ ಇಟ್ಟಿದ್ದರು. ಅತ್ಯಂತ ಧೈರ್ಯವಂತರಾಗಿದ್ದ ಜಾಲಪ್ಪ ಅವರು ಸತ್ಯ ಹೇಳುವಾಗ ಮುಲಾಜಿಲ್ಲದೆ ಎದೆಗಾರಿಕೆ ಪ್ರದರ್ಶಿಸುತ್ತಿದ್ದರು ಎಂದು ಹೇಳಿದರು.

R.L. Jalappa's Life Journey' book released
ಜಾತಿ ಗಣತಿ: ಸಮೀಕ್ಷೆಯಲ್ಲಿ ಭಾಗಿಯಾದ್ರೆ 'ರೇಷನ್ ಕಾರ್ಡ್' ರದ್ದಾಗುತ್ತಾ? ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ..

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com