

ಮೈಸೂರು: ಸಿದ್ದರಾಮಯ್ಯ ಅವರೇ ಐದು ವರ್ಷಗಳ ಅವಧಿಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಾರೆ ಎಂದು ಘೋಷಿಸುವಂತೆ ಅಹಿಂದ ಸಂಘಟನೆಗಳು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಒತ್ತಾಯಿಸಿವೆ.
ನಾಯಕತ್ವ ಬದಲಾವಣೆಯ ಕುರಿತಾದ ಊಹಾಪೋಹಗಳಿಗೆ ಅಂತ್ಯ ಹಾಡಲು ತಕ್ಷಣವೇ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಿವಿಧ ಅಹಿಂದ ಸಂಘಟನೆಗಳ ಪ್ರತಿನಿಧಿಗಳು ಬುಧವಾರ ಪತ್ರಗಳನ್ನು ಬರೆದಿವೆ.
ನವೆಂಬರ್ನಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ಐದು ವರ್ಷಗಳ ಅವಧಿಯ ಅರ್ಧಭಾಗವನ್ನು ತಲುಪಿದಾಗ, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗಲಿದೆ ಎಂಬ ಊಹಾಪೋಹಗಳ ಹಿನ್ನೆಲೆಯಲ್ಲಿ ಅಹಿಂದಾ ಸಂಘಟನೆಗಳು ನಗರದ ರಾಮಸ್ವಾಮಿ ವೃತ್ತದಲ್ಲಿರುವ ಅಂಚೆ ಪೆಟ್ಟಿಗೆ ಬಳಿಕ ಪತ್ರ ಚಳವಳಿ ನಡೆಸಿದವು.
'2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅಹಿಂದ ನಾಯಕ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ 135 ಸ್ಥಾನಗಳನ್ನು ಗೆದ್ದಿತು. ಇದು ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ರಚನೆಗೆ ಕಾರಣವಾಯಿತು. ಈ ದೊಡ್ಡ ಮಟ್ಟದ ಗೆಲುವಿಗೆ ಸಿದ್ದರಾಮಯ್ಯ ಅವರ ನಾಯಕತ್ವ ಮತ್ತು ಅಹಿಂದ ಸಮುದಾಯಗಳ ಒಗ್ಗಟ್ಟು ಕಾರಣ' ಎಂದು ಅಹಿಂದ ಸಂಘಟನೆಗಳು ರಾಹುಲ್ ಗಾಂಧಿಗೆ ಬರೆದ ಪತ್ರದಲ್ಲಿ ತಿಳಿಸಿವೆ.
'ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ನೆಲೆ ತುಂಬಾ ಬಲಿಷ್ಠವಾಗಿದ್ದು, ಇದಕ್ಕೆ ಪ್ರಮುಖ ಕಾರಣ ಸಿದ್ದರಾಮಯ್ಯ ಅವರ ಆಡಳಿತ, ಅವರ ಜನಪರ ಖಾತರಿ ಯೋಜನೆ, ಅಹಿಂದ ಸಮುದಾಯಗಳ ಮೇಲಿನ ಅವರ ಪ್ರೀತಿ ಮತ್ತು ಕಾಳಜಿ, ಸಾಮಾಜಿಕ ನ್ಯಾಯದ ಸಿದ್ಧಾಂತ, ಶೋಷಿತ ಸಮುದಾಯಗಳ ಕಲ್ಯಾಣಕ್ಕೆ ಅವರ ಕೊಡುಗೆಗಳು ಮತ್ತು ಎಲ್ಲರಿಗೂ ಸಮಾನತೆಯ ತತ್ವದಲ್ಲಿ ಅವರ ನಂಬಿಕೆ' ಎಂದು ಅದು ಹೇಳಿದೆ.
2023 ರಲ್ಲಿ ಕಾಂಗ್ರೆಸ್ ಶಾಸಕರು ಐದು ವರ್ಷಗಳ ಕಾಲ ಸಿದ್ದರಾಮಯ್ಯ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ. ಆದರೆ, ಬಿಜೆಪಿಯಂತಹ ವಿರೋಧ ಪಕ್ಷಗಳು ಮುಖ್ಯಮಂತ್ರಿಗಳನ್ನು ಬದಲಾಯಿಸಲಾಗುತ್ತದೆ ಎಂಬ ತಪ್ಪು ಹೇಳಿಕೆಗಳ ಮೂಲಕ ಸಾರ್ವಜನಿಕರಲ್ಲಿ ಗೊಂದಲವನ್ನು ಸೃಷ್ಟಿಸುತ್ತಿವೆ. ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ಕೂಡ ಇದನ್ನು ಪ್ರತಿಧ್ವನಿಸಿದ್ದಾರೆ. ಇದು ಪಕ್ಷದ ಪ್ರಗತಿಗೆ ಅಡ್ಡಿಯಾಗಬಹುದು ಎನ್ನಲಾಗಿದೆ.
ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕಲಾಗುತ್ತದೆ ಎಂಬ ಅಪಪ್ರಚಾರವನ್ನು ಅಹಿಂದ ಸಮುದಾಯಗಳು ಸಹಿಸಲು ಅಸಾಧ್ಯ. ಹೀಗಾಗಿ ಈ ಕೂಡಲೇ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಮಧ್ಯೆಪ್ರವೇಶಿಸಿ, ಐದು ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಎಂದು ಘೋಷಿಸಬೇಕು ಮತ್ತು ಎಲ್ಲ ಗೊಂದಲಗಳಿಗೂ ತೆರೆ ಎಳೆಯಬೇಕು ಎಂದು ನಾವು ಈ ಮೂಲಕ ವಿನಂತಿಸುತ್ತೇವೆ' ಎಂದಿರುವ ಅಹಿಂದ ನಾಯಕರ ನಿಯೋಗವು ರಾಹುಲ್ ಗಾಂಧಿಯವರ ಭೇಟಿಗೆ ಸಮಯ ಕೇಳಿದೆ.
Advertisement