
ಬೆಂಗಳೂರು: ಜಾತಿ ಸಮೀಕ್ಷೆಗೆ ಸಂಬಂಧಪಟ್ಟಂತೆ ಹಿಂದುಳಿದ ವರ್ಗಗಳ ಆಯೋಗ ಪ್ರಕಟಿಸಿದ 1,400 ಜಾತಿಗಳ ಪಟ್ಟಿಯಲ್ಲಿ 107 ಹೊಸ ಜಾತಿಗಳನ್ನು ಸೇರಿಸಲಾಗಿದೆ. ಇದುವರೆಗಿನ ಯಾವುದೇ ಜಾತಿ ಪಟ್ಟಿಯಲ್ಲಿ ಇಲ್ಲದ, ಯಾವುದೇ ಆಯೋಗದ ಜಾತಿ ಪಟ್ಟಿಯಲ್ಲಿ ಇಲ್ಲದ ಹೊಸ ಜಾತಿಗಳನ್ನು ಸೃಷ್ಟಿಸಿದ್ದಾರೆ.
ಕುರುಬ ಕ್ರಿಶ್ಚಿಯನ್, ಮಡಿವಾಳ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್ ಎಂದು ಹೆಸರಿಸಲಾಗಿದೆ; ಇದನ್ನು ಒಪ್ಪಲಾಗದು ಎಂದು ಬಿಜೆಪಿ ನಿಯೋಗ ಹೇಳಿದೆ ಜಾತಿ ಸಮೀಕ್ಷೆಗೆ ಸಂಬಂಧಿಸಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಿರುವ ಬಿಜೆಪಿ, ಹಿಂದುಳಿದ ವರ್ಗಗಳ ನಿಯೋಗವು ತರಾತುರಿಯಲ್ಲಿ ಸಮೀಕ್ಷೆ ಪೂರ್ಣಗೊಳಿಸುವ ಹಠ ಬೇಡ ಎಂದು ಆಗ್ರಹಿಸಿದೆ. ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಹೊಸ ಜಾತಿಗಳು ಮತಾಂತರಕ್ಕೆ ಪ್ರೇರಣೆ ನೀಡುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದೆ.
ಆಯೋಗದ ಅಧ್ಯಕ್ಷ ಮಧುಸೂದನ್ ಆರ್. ನಾಯಕ್ ಜತೆಗೆ ಸುದೀರ್ಘ ಚರ್ಚೆ ನಡೆಸಿದ ಮಾಜಿ ಸಚಿವ, ಶಾಸಕ ಸುನಿಲ್ಕುಮಾರ್, ಸಂಸದ ಪಿ.ಸಿ. ಮೋಹನ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ, ವಿಧಾನಸಭಾ ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಬಿಜೆಪಿ ರಾಜ್ಯ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್, ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಅವರನ್ನು ಒಳಗೊಂಡ ನಿಯೋಗವು ಈ ಹಿಂದಿನ ಯಾವುದೇ ಆಯೋಗ ಹೆಸರಿಸದ ಹೊಸ ಜಾತಿಗಳನ್ನು ಜಾತಿ ಪಟ್ಟಿಯಲ್ಲಿ ಸೇರಿಸಿರುವ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದೆ.
15 ದಿನಗಳಲ್ಲಿ ಮತ್ತು ದಸರಾ ಸಂದರ್ಭದಲ್ಲಿ ಸಮೀಕ್ಷೆ ಮುಗಿಸುತ್ತೇವೆ ಎಂಬುದು ಸರಿಯಲ್ಲ. ಯಾವುದೋ ಒತ್ತಡಕ್ಕೆ ಒಳಗಾಗಿ ಸಮೀಕ್ಷೆ ಮಾಡುವುದು ಬೇಡ. ಸುಮಾರು 2 ಕೋಟಿ ಮನೆಗಳ ಸಮೀಕ್ಷೆಯನ್ನು ದಸರಾ ರಜೆಯಲ್ಲಿ ಮಾಡಿ ಮುಗಿಸುತ್ತೇವೆ ಎಂದು ಹಠ ಹಿಡಿಯುವುದು ಸರಿಯಲ್ಲ. ಹೀಗಾಗಿ ಬೇಸಗೆ ರಜಾ ಕಾಲದಲ್ಲಿ ಸಮೀಕ್ಷೆ ಮಾಡಲು ಆಗ್ರಹಿಸಿದ್ದೇವೆ ಎಂದು ಸಾಸಕ ಸುನೀಲ್ ಕುಮಾರ್ ತಿಳಿಸಿದರು.
1,400 ಜಾತಿಗಳ ಪಟ್ಟಿ ಪತ್ರಿಕೆಗಳಲ್ಲಿ ಪ್ರಕಟಿಸಿ ಅದರ ಸಂಬಂಧ ಆಕ್ಷೇಪಣೆಗಳನ್ನು ಕೇಳಿದ್ದಾರೆ. ಇದುವರೆಗಿನ ಯಾವುದೇ ಜಾತಿ ಪಟ್ಟಿಯಲ್ಲಿ ಇಲ್ಲದ, ಯಾವ ಆಯೋಗದ ಜಾತಿ ಪಟ್ಟಿಯಲ್ಲಿ ಇಲ್ಲದ ಹೊಸ ಜಾತಿಗಳನ್ನು ಸೃಷ್ಟಿಸಿದ್ದಾರೆ. ಕುರುಬ ಕ್ರಿಶ್ಚಿಯನ್ , ಮಡಿವಾಳ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್ ಎಂದು 107 ಕಡೆಗಳಲ್ಲಿ ಹೊಸ ಜಾತಿಗಳನ್ನು ಪ್ರಕಟಿಸಿದ್ದಾರೆ. ಅವುಗಳಿಗೆ ಕೋಡ್ ನಂಬರ್ ನೀಡಿದ್ದಾರೆ. ಇದನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು ಎಂದು ಆಕ್ಷೇಪಿಸಿದರು.
ಕ್ರಿಶ್ಚಿಯನ್ನರಲ್ಲಿ 2-3 ಉಪಜಾತಿ ಕೇಳಿದ್ದೆವು. ಮುಸ್ಲಿಮರಲ್ಲಿ ಕೆಲವು ಉಪಜಾತಿ ಕೇಳಿದ್ದೆವು. ಆದರೆ ಈಗ ಎಲ್ಲ ಹಿಂದೂ ಉಪಜಾತಿಗಳಿಗೆ ಕ್ರಿಶ್ಚಿಯನ್, ಮುಸ್ಲಿಂ ಎಂದು ಹಾಕಿ ಮತಾಂತರಕ್ಕೆ ಪ್ರೇರಣೆ ಕೊಡುವ ಹುನ್ನಾರವನ್ನು ಸರಕಾರ ಮಾಡಿದೆ.
ಇದು ಹಿಂದುಳಿದ ವರ್ಗದ ಹಕ್ಕು ಕಸಿಯುವ, ಮತ್ತೊಂದು ಮೀಸಲಾತಿಯ ಹುನ್ನಾರ ಎಂದು ಜನರಲ್ಲಿ ಅನುಮಾನಗಳಿವೆ. ಹೊಸದಾಗಿ ಸೃಷ್ಟಿಸಿದ ಜಾತಿಗಳನ್ನು ಪಟ್ಟಿಯಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.
ಈ ಹಿಂದೆ, ಕಾಂತರಾಜು ಆಯೋಗವು 165 ಕೋಟಿ ರೂ. ವೆಚ್ಚದಲ್ಲಿ ಸಮೀಕ್ಷೆ ನಡೆಸಿತ್ತು. ನಂತರ, ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗವು 110 ಕೋಟಿ ರೂ. ವೆಚ್ಚದಲ್ಲಿ ಪರಿಶಿಷ್ಟ ಜಾತಿಗಳಲ್ಲಿ ಆಂತರಿಕ ಮೀಸಲಾತಿ ಕುರಿತು ಸಮೀಕ್ಷೆ ನಡೆಸಿತು. ಆದರೆ ಅದರ ಶಿಫಾರಸುಗಳನ್ನು ಮಾರ್ಪಡಿಸಲಾಯಿತು. ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗವು ತನ್ನ ಸಮೀಕ್ಷೆಯನ್ನು ತುರ್ತಾಗಿ ನಡೆಸದಂತೆ ನಾವು ಒತ್ತಾಯಿಸುತ್ತಿದ್ದೇವೆ. ನಾವು ಅಧ್ಯಕ್ಷರನ್ನು ಭೇಟಿಯಾಗಿ ಜನಸಂಖ್ಯೆಯಲ್ಲಿರುವ ಗೊಂದಲದ ಬಗ್ಗೆ ಚರ್ಚಿಸಿದ್ದೇವೆ" ಎಂದು ಅವರು ಹೇಳಿದರು.
ಸಮೀಕ್ಷೆಗೆ ಸ್ವೀಕೃತಿ ಪತ್ರವನ್ನು ಕಡ್ಡಾಯವಾಗಿ ಕೊಡಬೇಕು ಎಂದು ಕೋರಲಾಗಿದೆ. ಕನ್ನಡದ ವ್ಯಾಕರಣ ಮಾಲೆ ಪ್ರಕಾರ 1,400 ಜಾತಿ ಪಟ್ಟಿ ಮಾಡಿದ್ದಾರೆ. ಪ್ರವರ್ಗ ಪ್ರಕಾರ ಇದನ್ನು ಮಾಡಿ ಎಂದು ಕೋರಿದ್ದೇವೆ. ಎಲ್ಲವನ್ನೂ ಶಾಂತವಾಗಿ ಕೇಳಿಸಿಕೊಂಡಿದ್ದಾರೆ. ಆದರೆ 15 ದಿನದಲ್ಲೇ ಮಾಡುವ ಹಠಮಾರಿತನ ಅವರಲ್ಲಿ ಇದ್ದಂತಿದೆ. ತರಾತುರಿಯಲ್ಲಿ ಇದನ್ನು ಮಾಡಿ ವರದಿ ತಿರಸ್ಕಾರ ಆಗದಂತೆ ನೋಡಿಕೊಳ್ಳಬೇಕು ಎಂದರು.
ಈ ಹಿಂದೆ 165 ಕೋಟಿ ರೂ. ವೆಚ್ಚದಲ್ಲಿ ನಡೆಸಿದ ಜಾತಿ ಸಮೀಕ್ಷೆ ನಿರುಪಯುಕ್ತವಾಗಿತ್ತು. ಬಳಿಕ 110 ಕೋಟಿ ರೂ. ವೆಚ್ಚದಲ್ಲಿ ಒಳಮೀಸಲಾತಿ ಕುರಿತು ನ್ಯಾ.ನಾಗಮೋಹನ್ ದಾಸ್ ಆಯೋಗದ ಸಮೀಕ್ಷೆ ನಡೆಯಿತು. ಆದರೆ ಆಯೋಗದ ಶಿಫಾರಸನ್ನು ಮೀರಿ ಮೀಸಲು ವರ್ಗೀಕರಣ ನಡೆಸಲಾಗಿದೆ. ಮುಂದಿನ ಸಮೀಕ್ಷೆಯಾದರೂ ವೈಜ್ಞಾನಿಕವಾಗಿ ನಡೆಯಲಿ ಎಂದು ಆಯೋಗಕ್ಕೆ ಮನವಿ ಮಾಡಿದ್ದೇವೆ ಎಂದರು.
Advertisement