ಸಚಿವ ಸ್ಥಾನ ಕಳೆದುಕೊಂಡರೂ ಡಿಸಿಸಿ ಬ್ಯಾಂಕ್​ ಚುನಾವಣೆಯಲ್ಲಿ ಸತತ 7ನೇ ಬಾರಿ ಕೆ.ಎನ್​​ ರಾಜಣ್ಣ ಗೆಲುವು

ಇಂದು ನಡೆದ ಚುನಾವಣೆಯಲ್ಲಿ, 14 ಜನ ನಿರ್ದೇಶಕರನ್ನು ಒಳಗೊಂಡ ಆಡಳಿತ ಮಂಡಳಿಯು ರಾಜಣ್ಣ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದು, ಅವರ ಅಭಿಮಾನಿಗಳ ಸಂಭ್ರಮ ಹೇಳ ತೀರದಾಗಿದೆ
KN Rajanna Casual Images
ಕೆಎನ್ ರಾಜಣ್ಣ ಸಾಂದರ್ಭಿಕ ಚಿತ್ರ
Updated on

ತುಮಕೂರು: ಇತ್ತೀಚಿಗೆ ಕಾಂಗ್ರೆಸ್ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿ ಸಚಿವ ಸ್ಥಾನ ಕಳೆದುಕೊಂಡಿದ್ದ ಕೆ.ಎನ್. ರಾಜಣ್ಣ, ತುಮಕೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ (DCC Bank) ಅಧ್ಯಕ್ಷ ಸ್ಥಾನಕ್ಕೆ 7ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇಂದು ನಡೆದ ಚುನಾವಣೆಯಲ್ಲಿ, 14 ಜನ ನಿರ್ದೇಶಕರನ್ನು ಒಳಗೊಂಡ ಆಡಳಿತ ಮಂಡಳಿಯು ರಾಜಣ್ಣ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದು, ಅವರ ಅಭಿಮಾನಿಗಳ ಸಂಭ್ರಮ ಹೇಳ ತೀರದಾಗಿದೆ. ರಾಜಣ್ಣ ಅವರ ಈ ಸಾಧನೆ ತುಮಕೂರು ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ಅವರ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಕೆ.ಎನ್. ರಾಜಣ್ಣ ಕರ್ನಾಟಕದ ಸಹಕಾರಿ ಕ್ಷೇತ್ರದಲ್ಲಿ 1972ರಿಂದಲೂ ತಮ್ಮ ಪ್ರಭಾವವನ್ನು ಸ್ಥಾಪಿಸಿದ್ದಾರೆ. ರಾಷ್ಟ್ರೀಯ ಕೃಷಿ ಸಹಕಾರ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾದ ನಿರ್ದೇಶಕರಾಗಿ ಮತ್ತು ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‌ನ ಅಧ್ಯಕ್ಷರಾಗಿ (2001-2005 ಮತ್ತು 2015-2020) ಎರಡು ಅವಧಿಗಳಲ್ಲಿ ಸೇವೆ ಸಲ್ಲಿಸಿದ ಅನುಭವವನ್ನು ಅವರು ಹೊಂದಿದ್ದಾರೆ.

ಈ ಹಿಂದೆ ಆರು ಬಾರಿ ಈ ಸ್ಥಾನವನ್ನು ಅಲಂಕರಿಸಿದ್ದ ರಾಜಣ್ಣ, ತಮ್ಮ ಅನುಭವ ಮತ್ತು ನಾಯಕತ್ವದ ಮೂಲಕ ಬ್ಯಾಂಕ್‌ನ ಕಾರ್ಯನಿರ್ವಹಣೆಯನ್ನು ಸುಧಾರಿಸಿದ್ದಾರೆ.

ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ (INC) ಕ್ಯಾತಸಂದ್ರ ತಾಲೂಕು ಘಟಕದ ಕಾರ್ಯದರ್ಶಿಯಾಗಿ 1972ರಲ್ಲಿ ತಮ್ಮ ರಾಜಕೀಯ ಜೀವನ ಆರಂಭಿಸಿದ ಕೆ.ಎನ್.ರಾಜಣ್ಣ 1998ರಲ್ಲಿ ಕರ್ನಾಟಕ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದರು. 2004ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದಾಗ ಜೆಡಿಎಸ್ ನಿಂದ ಬೆಳ್ಳಾವಿ ಕ್ಷೇತ್ರದಿಂದ ಗೆದ್ದಿದ್ದರು.

2013 ಮತ್ತು 2023ರಲ್ಲಿ ಮಧುಗಿರಿ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. 2023ರಲ್ಲಿ ಅವರು ಸಿದ್ದರಾಮಯ್ಯ ಸರ್ಕಾರದಲ್ಲಿ ಸಹಕಾರ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಆದರೆ ಆಗಸ್ಟ್ 2025ರಲ್ಲಿ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರ 'ಮತ ಕಳ್ಳತನ' ಆರೋಪದ ವಿರುದ್ಧ ಟೀಕೆ ಮಾಡಿದ್ದಕ್ಕೆ ಸಂಪುಟದಿಂದ ಕೈಬಿಡಲಾಯಿತು.

ತುಮಕೂರು ಡಿಸಿಸಿ ಬ್ಯಾಂಕ್ ಜಿಲ್ಲೆಯ ಗ್ರಾಮೀಣ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕೃಷಿಕರಿಗೆ, ಸಣ್ಣ ಉದ್ಯಮಿಗಳಿಗೆ ಮತ್ತು ಗ್ರಾಮೀಣ ಜನರಿಗೆ ಸಾಲ ಸೌಕರ್ಯ, ಠೇವಣಿ ಯೋಜನೆಗಳು ಮತ್ತು ಇತರ ಆರ್ಥಿಕ ಸೇವೆಗಳನ್ನು ಒದಗಿಸುವ ಈ ಬ್ಯಾಂಕ್, ರಾಜಣ್ಣ ಅವರ ನಾಯಕತ್ವದಲ್ಲಿ ಸ್ಥಿರತೆ ಮತ್ತು ವಿಶ್ವಾಸವನ್ನು ಗಳಿಸಿದೆ. ರಾಜಣ್ಣ ಅವರ ದೀರ್ಘಕಾಲೀನ ಅನುಭವವು ಬ್ಯಾಂಕ್‌ನ ಆಡಳಿತವನ್ನು ಸುಗಮಗೊಳಿಸಿದ್ದು, ಗ್ರಾಮೀಣ ಜನರಿಗೆ ಆರ್ಥಿಕ ಸಬಲೀಕರಣಕ್ಕೆ ಕೊಡುಗೆ ನೀಡಿದೆ. ಈ ಆಯ್ಕೆ ತುಮಕೂರು ಜಿಲ್ಲೆಯ ಸಹಕಾರಿ ಕ್ಷೇತ್ರಕ್ಕೆ ಹೊಸ ಚೈತನ್ಯ ತರಲಿದೆ ಎಂಬ ನಿರೀಕ್ಷೆಯಿದೆ.

KN Rajanna Casual Images
ಕೆಎನ್ ರಾಜಣ್ಣ ಬಿಜೆಪಿ ಸೇರ್ತಾರಾ? ಹೊಸ ಬಾಂಬ್ ಸಿಡಿಸಿದ ಮಾಗಡಿ ಶಾಸಕ HC ಬಾಲಕೃಷ್ಣ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com