
ಮೈಸೂರು: ಬಿಜೆಪಿಯ ತೀವ್ರ ವಿರೋಧದ ನಡುವೆಯೂ ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಈ ಬಾರಿಯ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟಿಸುವುದು ಅಧಿಕೃತಗೊಂಡಿದೆ.
ಬಾನು ಮುಷ್ತಾಕ್ ಅವರನ್ನು ಬದಲಾಯಿಸಲು ಬಿಜೆಪಿ ಹೇರಿದ ಒತ್ತಡಕ್ಕೆ ರಾಜ್ಯ ಸರ್ಕಾರ ಮಣಿದಿಲ್ಲ. ಬದಲಿಗೆ ದಸರಾ ಉದ್ಘಾಟನೆಗೆ ಅಧಿಕೃತವಾಗಿ ಆಹ್ವಾನ ನೀಡಿದೆ.
ಈ ಮಧ್ಯೆ ಇಂದು ಮೈಸೂರಿನ ಶ್ರೀಕ್ಷೇತ್ರ ಚಾಮುಂಡಿಬೆಟ್ಟಕ್ಕೆ ಕೇಂದ್ರ ಸಚಿವ ವಿ. ಸೋಮಣ್ಣ ಭೇಟಿ ನೀಡಿ, ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿ. ಸೋಮಣ್ಣ, ನಂಬಿಕೆ, ಭಕ್ತಿ ಮತ್ತು ಇತಿಹಾಸಕ್ಕೆ ಮತ್ತೊಂದು ಹೆಸರೇ ಚಾಮುಂಡಿ ಬೆಟ್ಟ. ಸರ್ಕಾರವು ಉದ್ಘಾಟಕರಿಗೆ ತಾಯಿ ಚಾಮುಂಡಿ ಇತಿಹಾಸ, ಉತ್ಸವ, ಆರಾಧನೆ, ಸಂಪ್ರದಾಯವನ್ನು ಮೊದಲು ತಿಳಿಸಲಿ. ಈಗ ಉದ್ಘಾಟಕರಾಗಿ ಆಯ್ಕೆಯಾಗಿರುವವರು, ಈ ಸ್ಥಾನಕ್ಕೆ ಅರ್ಹರೋ ಅಥವಾ ಇಲ್ಲವೋ ಎಂಬ ಚರ್ಚೆ ಮಾಡುವುದಿಲ್ಲ ಎಂದರು.
ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಪದೇ ಪದೇ ಎಡವಟ್ಟು ಮಾಡುತ್ತಿದೆ. ಸರ್ಕಾರ ಯಾರನ್ನೋ ತೃಪ್ತಿಪಡಿಸುವ ಕೆಲಸ ಮಾಡುವುದು ಸರಿಯಲ್ಲ. ಚಾಮುಂಡಿ ತಾಯಿಯ ಮನಸ್ಸು ಗೆಲ್ಲುವ ಕೆಲಸ ಮಾಡಿದರೆ ದೇಶ ಮತ್ತು ರಾಜ್ಯಕ್ಕೆ ಒಳ್ಳೆಯದಾಗುತ್ತದೆ. ದಸರಾ ಉದ್ಘಾಟಕರು ನಮ್ಮ ಸಂಪ್ರದಾಯಕ್ಕೆ ಧಕ್ಕೆ ಆಗದಂತೆ ನಡೆದುಕೊಳ್ಳಲಿ ಎಂದು ಹೇಳಿದರು.
Advertisement