
ಸಾಗರ: ಮದ್ದೂರಿನಲ್ಲಿ ಗಣಪತಿ ವಿಸರ್ಜನೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣ ಹಸಿರಾಗಿರುವಂತೆಯೇ ಇತ್ತ ಸಾಗರದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಇಬ್ಬರು ಬಾಲಕರು ಉಗುಳಿದ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.
ಹೌದು.. ಗಣಪತಿ ಮೂರ್ತಿಯ ವಿಸರ್ಜನಾ ಮೆರವಣಿಗೆ ವೇಳೆ ಅನ್ಯಕೋಮಿನ ಇಬ್ಬರು ಬಾಲಕರು ಗಣಪತಿ ಮೂರ್ತಿಯ ಮೇಲೆ ಉಗುಳಿದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ಪಟ್ಟಣದಲ್ಲಿ ಭಾನುವಾರ ನಡೆದಿದ್ದು, ಇದು ಕೆಲಕಾಲ ನಗರದಲ್ಲಿ ಉದ್ವಿಗ್ನಪರಿಸ್ಥಿತಿ ನಿರ್ಮಾಣವಾಗಿತ್ತು.
ಸಾಗರ ತಾಲೂಕಿನ ಅತಿಸೂಕ್ಷ್ಮ ಪ್ರದೇಶವಾದ ಜನ್ನತ್ ಗಲ್ಲಿಯಲ್ಲಿ ಜೈಭುವನೇಶ್ವರಿ ಯುವಕ ಸಂಘವು ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆ ಮಾರ್ಕೆಟ್ ರಸ್ತೆಯಲ್ಲಿ ಸಾಗುತ್ತಿರುವಾಗ ಪಕ್ಕದ ಕಟ್ಟಡದ ಮೇಲೆ ನಿಂತಿದ್ದ ಅನ್ಯ ಕೋಮಿನ ಇಬ್ಬರು ಬಾಲಕರು ಗಣಪತಿ ಮೂರ್ತಿಯ ಮೇಲೆ ಉಗುಳಿದ್ದಾರೆ. ಇದನ್ನು ಸ್ಥಳೀಯರೊಬ್ಬರು ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಿಸಿದ್ದು ಈ ವಿಚಾರ ಬಯಲಾಗುತ್ತಲೇ ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಮಕ್ಕಳು ಪೊಲೀಸ್ ವಶಕ್ಕೆ
ಘಟನೆ ಸಂಬಂಧ ಪೊಲೀಸರು ಬಾಲಕರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಈ ವಿಚಾರ ತಿಳಿಯುತ್ತಲೇ ಸ್ಥಳಕ್ಕೆ ಆಗಮಿಸಿದ ಎಎಸ್ಪಿ ಡಾ.ಬೆನಕಪ್ರಸಾದ್ ಅವರು, ಬಾಲಕರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆಂದು ಭರವಸೆ ನೀಡಿದ ಬಳಿಕ ಮೆರವಣಿಗೆ ಮುಂದುವರೆಯಿತು. ಈ ಕುರಿತು ಸಾಗರ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಕ್ಷಮೆಯಾಚಿಸಿದ ತಾಯಿ!
ಈ ಘಟನೆಗೆ ಸಂಬಂಧಿಸಿದಂತೆ ಬಾಲಕರ ತಾಯಿ ಖೈರುನ್ನೀಸಾ ಅವರು, ಹಿಂದೂ ಧರ್ಮದವರಿಗೆ ಕ್ಷಮೆಯಾಚಿಸುತ್ತೇನೆ. ನಮ್ಮ ಮಕ್ಕಳು ಈ ರೀತಿ ಮಾಡಬಾರದಾಗಿತ್ತು. ಗಣಪತಿ ಮೇಲೆ ಉಗಳಿದ್ದು ನನಗೆ ಬೇಜಾರಾಗಿದೆ. ಈ ರೀತಿ ಮಾಡದಂತೆ ಮಕ್ಕಳಿಗೆ ಬುದ್ದಿ ಮಾತು ಹೇಳುತ್ತೇನೆ ಎಂದಿದ್ದಾರೆ.
Advertisement