
ಮೈಸೂರು: ಲೇಖಕಿ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟಿಸಲು ಆಹ್ವಾನಿಸಿರುವುದನ್ನು ವಿರೋಧಿಸಿ ಹಿಂದೂ ಜಾಗರಣ ವೇದಿಕೆ ಕರೆ ನೀಡಿರುವ ಚಾಮುಂಡಿ ಬೆಟ್ಟ ಚಲೋ ಮೆರವಣಿಗೆ ವೇಳೆ ಪೊಲೀಸರು ಮಾಜಿ ಸಂಸದ ಹಾಗೂ ಬಿಜೆಪಿ ನಾಯಕ ಪ್ರತಾಪ್ ಸಿಂಹ ಸೇರಿದಂತೆ ಹಲವು ನಾಯಕರನ್ನು ವಶಕ್ಕೆ ಪಡೆದಿದ್ದಾರೆ.
ಮಂಗಳವಾರ 'ಚಾಮುಂಡಿ ಬೆಟ್ಟದ ಚಲೋ' ಮೆರವಣಿಗೆ ನಡೆಸಲು ಯತ್ನಿಸಿದ ಬಿಜೆಪಿ ನಾಯಕರು ಮತ್ತು ಹಿಂದೂ ಜಾಗರಣ ವೇದಿಕೆ ಸದಸ್ಯರು ಸೇರಿದಂತೆ ಇತರರನ್ನು ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶಾಸಕ ಟಿ.ಎಸ್. ಶ್ರೀವತ್ಸ ಮತ್ತು ಮೈಸೂರು ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.
ಪೊಲೀಸರ ಪ್ರಕಾರ, ಚಾಮುಂಡಿ ಬೆಟ್ಟದ ರಸ್ತೆಯ ಕುರುಬರಹಳ್ಳಿ ವೃತ್ತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು ಬೆಟ್ಟದ ಮೇಲಿರುವ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗಿ ಅಲ್ಲಿ ಪ್ರತಿಭಟನೆ ಮಾಡಲು ಪ್ರಯತ್ನಿಸಿದಾಗ ಅವರನ್ನು ಪೊಲೀಸರು ತಡೆದರು. ಪರಿಸ್ಥಿತಿಯ ಸೂಕ್ಷ್ಮತೆ ಮತ್ತು ಕಾನೂನು ಸುವ್ಯವಸ್ಥೆ ಸಮಸ್ಯೆಗಳನ್ನು ಉಲ್ಲೇಖಿಸಿ ಈಗಾಗಲೇ ರ್ಯಾಲಿ ನಡೆಸಲು ಅನುಮತಿ ನಿರಾಕರಿಸಿದ್ದ ಪೊಲೀಸರು ಪ್ರತಿಭಟನಾಕಾರರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದರು ಎನ್ನಲಾಗಿದೆ.
ಅದೇ ರೀತಿ, 'ಚಾಮುಂಡಿ ಬೆಟ್ಟ ಚಲೋ' ಪ್ರತಿಭಟನೆಗೆ ಪ್ರತಿಯಾಗಿ ಮೆರವಣಿಗೆ ನಡೆಸಲು ಯತ್ನಿಸಿದ ದಲಿತ ಮಹಾಸಭಾದ ಸದಸ್ಯರನ್ನು ಸಹ ತಡೆದು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದರು.
ಕುರುಬಾರಹಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಆಗಮಿಸಿದ ಹಿಂದೂ ನಾಯಕರನ್ನು ತಡೆದು ಸಿಎಆರ್ ಹಾಗೂ ಆಲನಹಳ್ಳಿ ಠಾಣೆಗೆ ಕರೆದೊಯ್ದರು. ಅಲನಹಳ್ಳಿ ಠಾಣೆಯ ಮುಂಭಾಗ ಹಿಂದೂ ಕಾರ್ಯಕರ್ತರು ಭಜನೆ ಹಾಡಿದರು. ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಇದ್ದು, 300ಕ್ಕೂ ಹೆಚ್ಚು ಪೊಲೀಸರನ್ನ (Police) ನಿಯೋಜನೆ ಮಾಡಲಾಗಿತ್ತು.
ಪೊಲೀಸರ ಜೊತೆ ಮಾತಿನ ಚಕಮಕಿ
ಚಾಮುಂಡಿ ಚಲೋಗೆ ಬಿಜೆಪಿ ನಾಯಕರು ಸಾಥ್ ನೀಡಿದ್ದು, ಸ್ಥಳಕ್ಕೆ ಬಿಜೆಪಿ ಮಾಜಿ ಶಾಸಕ ಎಲ್.ನಾಗೇಂದ್ರ, ಶಾಸಕ ಶ್ರೀವತ್ಸ ಆಗಮಿಸಿದ್ರು. ಇದೇ ವೇಳೆ ಪೊಲೀಸರ ಜೊತೆ ಬಿಜೆಪಿ ನಾಯಕರ ಮಾತಿನ ಚಕಮಕಿ ನಡೆದಿದೆ. ಬಿಜೆಪಿ ಮುಖಂಡ ಶುಶ್ರುತ್ ಗೌಡ ಸೇರಿ ಅನೇಕರನ್ನ ಪೊಲೀಸರ ವಶಕ್ಕೆ ಪಡೆದಿದ್ದಾರೆ.
ಚಾಮುಂಡಿ ಚಲೋಗೆ ಅನುಮತಿ ಇಲ್ಲ. ದಯಮಾಡಿ ಹೊರಡಿ ಎಂದ ಪೊಲೀಸರು ಮನವಿ ಮಾಡಿದ್ರು. ಇದಕ್ಕೆ ಬಿಜೆಪಿ ಮುಖಂಡರು ಚಾಮುಂಡಿ ಚಲೋ ಮಾಡೇ ಮಾಡ್ತೀವಿ ಎಂದು ಪಟ್ಟು ಹಿಡಿದಿದ್ದಾರೆ. ಇದೇ ವೇಳೆ ಶಾಸಕರನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಮೈಸೂರಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಹೈಡ್ರಾಮಾ ಸೃಷ್ಟಿಯಾಗಿದೆ.
ವಿರೋಧಿಸಲು ಬಂದವರು ಕೂಡ ಪೊಲೀಸ್ ವಶಕ್ಕೆ
ಹಿಂದೂ ಜಾಗರಣ ವೇದಿಕೆಯಿಂದ ಚಾಮುಂಡಿ ಚಲೋ ನಡೆಸಲಾಗ್ತಿದೆ. ಚಾಮುಂಡಿ ಚಲೋ ವಿರೋಧಿಸಲು ಬಂದ ದಲಿತ ಮಹಾಸಭಾ ಅಧ್ಯಕ್ಷನನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತಾಪ ಸಿಂಹನ ನಡಿಗೆ ದ್ವೇಷದ ಕಡೆಗೆ , ಮಹದೇವಪ್ಪನ ನಡಿಗೆ ಸೌಹಾರ್ದದ ಕಡೆಗೆ ಎಂದು ಘೋಷಣೆ ಕೂಗಿದ ರಾಜೇಶ್ ನನ್ನು ಬಂಧಿಸಿ ಪೊಲೀಸರು ಕರೆದುಕೊಂಡು ಹೋಗಿದ್ದಾರೆ.
ಸೆಪ್ಟೆಂಬರ್ 22 ರಂದು ಚಾಮುಂಡಿ ಬೆಟ್ಟದ ಮೇಲೆ ನಡೆಯುವ ಈ ವರ್ಷದ ವಿಶ್ವಪ್ರಸಿದ್ಧ 'ಮೈಸೂರು ದಸರಾ - 2025' ಆಚರಣೆಯನ್ನು ಉದ್ಘಾಟಿಸಲು ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರಿಗೆ ಸರ್ಕಾರ ಆಹ್ವಾನ ನೀಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ಡಿಸಿಎಂ ಶಿವಕುಮಾರ್, ಮೈಸೂರಿನ ಚಾಮುಂಡಿ ಬೆಟ್ಟವು ಕೇವಲ ಹಿಂದೂಗಳ ಆಸ್ತಿಯಲ್ಲ ಎಂದು ಹೇಳಿದ್ದರು. ಈ ಹೇಳಿಕೆಯನ್ನು ವಿರೋಧಿಸಿ ಹಿಂದೂ ಜಾಗರಣ ವೇದಿಕೆಯು 'ಚಾಮುಂಡಿ ಬೆಟ್ಟ ಚಲೋ' ಮೆರವಣಿಗೆಗೆ ಕರೆ ನೀಡಿತ್ತು.
Advertisement