
ಒಡಿಸ್ಸಾ: ಒಡಿಸ್ಸಾ ರಾಜ್ಯದಲ್ಲಿ ಜಿಲ್ಲಾ ಹಾಗೂ ಪ್ರತಿ ಬೂತ್ ಮಟ್ಟದಲ್ಲಿಯೂ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವುದು ಸೇರಿದಂತೆ ಜಿಲ್ಲಾ ಅಧ್ಯಕ್ಷರುಗಳ ಆಯ್ಕೆಯ ವಿಚಾರವಾಗಿ 'ಸಂಘಟನ್ ಶ್ರೀ ಜನ್ ಅಭಿಯಾನ್ʼ ನಡೆಸಲಾಗುತ್ತಿದೆ ಎಂದು ಒಡಿಸ್ಸಾ ವೀಕ್ಷಕ, ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಅವರು ಹೇಳಿದರು.
ಒಡಿಸ್ಸಾ ರಾಜ್ಯದ ಅಂಗುಲ್ ಜಿಲ್ಲಾ ಕೇಂದ್ರದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಸಭೆಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಹೈಕಮಾಂಡ್ ಆದೇಶದ ಮೇರೆಗೆ ಪ್ರತಿ ಜಿಲ್ಲೆಯ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಅಹವಾಲುಗಳನ್ನು ಅಲಿಸಲಾಗುತ್ತಿದೆ.
ಈ ಮೂಲಕ ಪಕ್ಷದ ಬಲವರ್ಧನೆಗೆ ಒತ್ತು ನೀಡಲಾಗುವುದು. ಪಕ್ಷದ ನಾಯಕರ ಸಲಹೆಗಳನ್ನು ಆಲಿಸಿ ಅದಕ್ಕೆ ಪರಿಹಾರ ನೀಡುವ ಮೂಲಕ ಸಂಘಟನೆಗೆ ಒತ್ತು ನೀಡಲಾಗುವುದು. ಪಕ್ಷದ ನಾಯಕರು ಹಾಗೂ ಕಾರ್ಯಕರ್ತರ ನಡುವೆ ಅಂತರ ಉಂಟಾಗಿದೆ. ಇದನ್ನು ಕಡಿಮೆ ಮಾಡುವುದು ನಮ್ಮ ಉದ್ದೇಶ. ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಒಡಿಸ್ಸಾದಲ್ಲಿ ಪಕ್ಷದ ಬಲವರ್ಧನೆಗೆ ಶ್ರಮಿಸಲಾಗುವುದು ಎಂದರು.
ಆಡಳಿತರೂಢ ಬಿಜೆಪಿ ಸರಕಾರದ ವೈಫಲ್ಯ ಸೇರಿದಂತೆ ಯಾವ ವಿಚಾರಗಳ ಮೂಲಕ ಜನರ ಗಮನ ಸೆಳೆಯಬೇಕು ಎಂಬುದನ್ನು ಚರ್ಚಿಸಲಾಗುತ್ತಿದೆ. ರಾಜ್ಯವು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ ಇದನ್ನು ಜನರಿಗೆ ಮನವರಿಕೆ ಮಾಡಬೇಕಾಗಿದೆ ಎಂದರು.
ಜಿಲ್ಲಾ ಅಧ್ಯಕ್ಷರುಗಳ ನೇಮಕಾತಿಗೆ ಮಾನದಂಡ ಹಾಗೂ ಅರ್ಹತೆಯ ಬಗ್ಗೆ ಕೇಳಿದಾಗ, ಎಐಸಿಸಿಯ ಮಾನದಂಡಗಳಿಗೆ ಅನುಗುಣವಾಗಿ ಆಯ್ಕೆ ಮಾಡಲಾಗುವುದು. ಪಕ್ಷಕ್ಕಾಗಿ ದುಡಿದಿರುವ, ಸಂಘಟನಾ ಸಾಮರ್ಥ್ಯವಿರುವ, ಪಕ್ಷದ ಸಿದ್ಧಾಂತಗಳಿಗೆ ಬದ್ಧವಾಗಿರುವ ನಾಯಕರು, ಜೊತೆಗೆ ಸಮಾಜದ ಎಲ್ಲ ಸಮುದಾಯದವರು ಹಾಗೂ ಅಲ್ಪಸಂಖ್ಯಾತರನ್ನು ಗುರುತಿಸಿ ಜವಾಬ್ದಾರಿ ನೀಡಲಾಗುವುದು ಎಂದು ಹೇಳಿದರು.
ಒಡಿಸ್ಸಾ ರಾಜ್ಯದ ಸಮಸ್ಯೆಗಳ ಬಗ್ಗೆ ಕೇಳಿದಾಗ, ಒಡಿಸ್ಸಾ ಹಾಗೂ ಕೇಂದ್ರದಲ್ಲಿ ಒಂದೇ ಪಕ್ಷದ ಡಬಲ್ ಎಂಜಿನ್ ಸರ್ಕಾರವಿದೆ. ಅಧಿಕಾರಕ್ಕೆ ಬಂದು 16 ತಿಂಗಳು ಕಳೆದರೂ ಸಹ ಜನರ ಜೀವನದ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸಿಲ್ಲ. ಆರೋಗ್ಯ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದ್ದು ಜನರು ಪರದಾಡುತ್ತಿದ್ದಾರೆ ಎಂದು ಹೇಳಿದರು.
Advertisement