
ಗದಗ: ನಿತ್ಯ ಜನಜಂಗುಳಿಯಿಂದ ಕಂಗೊಳಿಸುತ್ತಿದ್ದ ತಿಮ್ಮಾಪುರ ಗ್ರಾಮ ಶನಿವಾರ ಜನರಲ್ಲದೆ ಬಿಕೋ ಎನ್ನುತ್ತಿತ್ತು. ಇದಕ್ಕೆ ಕಾರಣ ತಮ್ಮ ನೆಚ್ಚಿನ ನಾಯಕ ಸಿದ್ದರಾಮಯ್ಯ ಅವರನ್ನು ನೋಡುವ ಗ್ರಾಮದ ಜನರು ಹೊರಬಂದಿದ್ದು.
ತಿಮ್ಮಾಪುರ ಗ್ರಾಮದ ಪ್ರತಿಯೊಂದು ಮನೆಯಲ್ಲಿರುವ ಜನರೂ ಸಿದ್ದರಾಮಯ್ಯ ಅವರಿಗೆ ಅಭಿಮಾನಿಗಳಾಗಿದ್ದಾರೆ. ಹೀಗಾಗಿಯೇ ಈ ಗ್ರಾಮವನ್ನು ಸಿದ್ದರಾಮಯ್ಯ ಗ್ರಾಮ ಎಂದೂ ಕರೆಯಲಾಗುತ್ತದೆ.
ಗದಗದ ಮುಳಗುಂದ ರಸ್ತೆಯಲ್ಲಿರುವ ಕನಕ ಭವನದಲ್ಲಿ ನಡೆದ ಸಿದ್ದರಾಮಯ್ಯ ಅವರು ಶನಿವಾರ ಭಾಗವಹಿಸಿದ್ದರು. ಹೀಗಾಗಿ ತಮ್ಮ ನೆಚ್ಚಿನ ನಾಯಕನ ನೋಡಲು ಇಡೀ ಗ್ರಾಮದ ಜನರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಇದರಿಂದ ಗ್ರಾಮ ಬಿಕೋ ಎನ್ನುತ್ತಿರುವಂತೆ ಕಂಡು ಬಂತಿತ್ತು.
ಶನಿವಾರ ಬೆಳಿಗ್ಗೆ ನೂರಾರು ಗ್ರಾಮಸ್ಥರು ಟ್ರ್ಯಾಕ್ಟರ್ಗಳು, ಬಸ್ಗಳು ಮತ್ತು ಇತರ ಸಾರಿಗೆ ವಿಧಾನಗಳ ಮೂಲಕ ಗ್ರಾಮದಿಂದ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ಬಂದಿದ್ದರು.
ತಿಮ್ಮಾಪುರವು ಗದಗ ಪಟ್ಟಣದಿಂದ 26 ಕಿ.ಮೀ ದೂರದಲ್ಲಿದೆ. ಗ್ರಾಮಸ್ಥರು ಒಂದು ವಾರದ ಹಿಂದೆಯೇ ಸಿದ್ದರಾಮಯ್ಯ ಅವರನ್ನು ನೋಡಲು ಯೋಜಿಸಿದ್ದರು. ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಶನಿವಾರ ತಮ್ಮ ಕೃಷಿ ಕೆಲಸಗಳನ್ನು ನಿಲ್ಲಿಸಿದರು.
90ರ ದಶಕದಲ್ಲಿ ಸಿದ್ಧರಾಮಯ್ಯ ಅವರು ಕೊಪ್ಪಳದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದಾಗ ಗ್ರಾಮಕ್ಕೆ ಭೇಟಿ ನೀಡಿದ್ದರು. ಚುನಾವಣಾ ಪ್ರಚಾರದ ಭಾಗವಾಗಿ ಅವರು ತಿಮ್ಮಾಪುರಕ್ಕೆ ಭೇಟಿ ನೀಡಿ ಇಲ್ಲಿನ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದ್ದರು. ಅವರು ಗೆಲ್ಲದಿದ್ದರೂ ಅವರ ಅನೇಕ ಸಮಸ್ಯೆಗಳನ್ನು ಪರಿಹರಿಸಿದರು. ಈ ಮೂಲಕ ಗ್ರಾಮದ ಜನರ ಮನಗೆದ್ದರು.
2023 ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ಇಡೀ ಗ್ರಾಮವು ತಮಗೇ ವಿಜಯ ಲಭಿಸಿದೆ ಎಂಬಂತೆ ಹಬ್ಬದಂತೆ ಸಂಭ್ರವನ್ನಾಚರಿಸಿದರು. ಗ್ರಾಮದ ದೇವಾಲಯಗಳಲ್ಲಿ ಪೂಜೆಗಳನ್ನು ಸಲ್ಲಿಸಿದರು.
ಕಳೆದ ಫೆಬ್ರವರಿಯಲ್ಲಿ, ತಿಮ್ಮಾಪುರದ ಗ್ರಾಮಸ್ಥರೊಬ್ಬರು ಸಿದ್ದರಾಮಯ್ಯ ಅವರ ಫೋಟೋ ಹಿಡಿದು ಪ್ರಯಾಗರಾಜ್ನಲ್ಲಿ ಪವಿತ್ರ ಸ್ನಾನ ಮಾಡಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕೆಂದು ಪ್ರಾರ್ಥಿಸಿದ್ದರು.
ತಿಮ್ಮಾಪುರದ ರೈತ ನಾಯಕ ಯಲ್ಲಪ್ಪ ಬಾಬಾರಿ ಎಂಬುವವರು ಮಾತನಾಡಿ, ಶನಿವಾರ ಗ್ರಾಮ ಬಹುತೇಕ ಖಾಲಿಯಾಗಿತ್ತು. ಸಾವಿರಾರು ಜನರು ಸಿಎಂ ಅವರನ್ನು ನೋಡಲು ಗದಗಕ್ಕೆ ಹೋಗಿದ್ದರು. ದಿನಸಿ ಅಂಗಡಿಗಳು, ಟೀ ಅಂಗಡಿಗಳು ಮತ್ತು ಪಾನ್ ಬೀಡಾ ಅಂಗಡಿಗಳು ಬೆಳಿಗ್ಗೆ 9 ಗಂಟೆಯ ಹೊತ್ತಿಗೆ ಬಂದ್ ಮಾಡಲಾಗಿತ್ತು. ಕೆಲವು ಪ್ರದೇಶಗಳು ಲಾಕ್ಡೌನ್ ರೀತಿಯ ಪರಿಸ್ಥಿತಿಯನ್ನು ನೆನಪಿಸಿತ್ತು. ನಮ್ಮ ಗ್ರಾಮದಲ್ಲಿ ಪಕ್ಷ, ಜಾತಿ ಮತ್ತು ಧರ್ಮವನ್ನು ಲೆಕ್ಕಿಸದೆ ಅನೇಕರು ಸಿದ್ದರಾಮಯ್ಯ ಅವರ ಅಭಿಮಾನಿಗಳಾಗಿದ್ದಾರೆಂದು ಹೇಳಿದ್ದಾರೆ.
Advertisement