

ಮಂಗಳೂರು: ಕೇರಳದಲ್ಲಿ ನಡೆಯಲಿರುವ ಚುನಾವಣೆಯ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಕಾಸರಗೋಡಿನಲ್ಲಿ ಪ್ರಚಾರ ನಡೆಸಲಿದ್ದಾರೆ.
ಕನ್ನಡಿಗರ ಪ್ರಾಬಲ್ಯವಿರುವ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರು ಪ್ರಚಾರ ನಡೆಸಲಿದ್ದು, ಜನತೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಸಿಎಂ ಅವರು ಇಂದೆ ಸಂಜೆ 4 ಗಂಟೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಅಲ್ಲಿಂದ ನೇರವಾಗಿ ಮಂಜೇಶ್ವರಕ್ಕೆ ತೆರಳಿ ಪ್ರಚಾರಗಳಲ್ಲಿ ಭಾಗವಹಿಸಲಿದ್ದಾರೆ.
ಸಿದ್ದರಾಮಯ್ಯ ಅವರು ಮೊದಲ ವೊರ್ಕಾಡಿಯಲ್ಲಿ ಸಂಜೆ 5 ಗಂಟೆಗೆ ಪ್ರಚಾರ ನಡೆಯಲಿದ್ದು, ನಂತರ ಮುಲ್ಲೇರಿಯಾದಲ್ಲಿ ಸಂಜೆ 6.30ಕ್ಕೆ ಮತ್ತೊಂದು ರ್ಯಾಲಿ ನಡೆಸಲಿದ್ದಾರೆ. ಪ್ರಚಾರ ಕಾರ್ಯ ಮುಗಿಸಿದ ನಂತರ ಅವರು ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.
ಈ ನಡುವೆ, ಗಡಿ ಪ್ರದೇಶವಾದ ಮಂಜೇಶ್ವರ ಕ್ಷೇತ್ರದಲ್ಲಿ ಕಳೆದ ಕೆಲವು ದಿನಗಳಿಂದ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ದಕ್ಷಿಣ ಕನ್ನಡದ ನಾಯಕರು ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಭಾರೀ ಪ್ರಚಾರ ನಡೆಸುತ್ತಿದ್ದು, ಈ ಕ್ಷೇತ್ರ ಇದೀಗ ರಾಜಕೀಯ ಪಕ್ಷಗಳಿಗೆ ಪ್ರತಿಷ್ಟೆಯ ಕಣವಾಗಿ.ಮಾರ್ಪಟ್ಟಿದೆ.
ಹಾಲಿ ಶಾಸಕ ಎಕೆಎಂ ಅಶ್ರಫ್ ಮರು ಆಯ್ಕೆಗಾಗಿ ಕಣಕ್ಕಿಳಿದಿದ್ದರೆ, ಬಿಜೆಪಿಯಿಂದ ಕೆ. ಸುರೇಂದ್ರನ್ ಸ್ಪರ್ಧಿಸುತ್ತಿದ್ದಾರೆ. ಹಲವಾರು ಬಾರಿ ಸೋಲು ಕಂಡಿರುವ ಸುರೇಂದ್ರನ್ ಈ ಬಾರಿ ಗೆಲುವಿಗಾಗಿ ತೀವ್ರ ಹೋರಾಟ ನಡೆಸುತ್ತಿದ್ದಾರೆ.
ಬಿಜೆಪಿ ಪರವಾಗಿ ಮಂಗಳೂರು ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಸಕ್ರಿಯವಾಗಿ ಪ್ರಚಾರ ನಡೆಸುತ್ತಿದ್ದು, ಕಾಂಗ್ರೆಸ್ ಪರವಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕೂಡ ಪಕ್ಷದ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ.
ಅಶೋಕ್ ಕುಮಾರ್ ರೈ ಅವರು ಬಿಜೆಪಿ ಪ್ರಚಾರ ಶೈಲಿಯನ್ನು ಟೀಕಿಸಿ, “ಧರ್ಮದ ಆಧಾರದ ಮೇಲೆ ಮತ ಕೇಳುವುದಕ್ಕಿಂತ ಸಾಧನೆ ಆಧಾರದಲ್ಲಿ ಮತ ಕೇಳಲಿ” ಎಂದು ಸವಾಲು ಹಾಕಿದ್ದಾರೆ.
ಕೇರಳವು ಶಾಂತಿಯುತ ರಾಜ್ಯವಾಗಿದ್ದು, ಜನರನ್ನು ವಿಭಜಿಸುವ ಪ್ರಯತ್ನಗಳನ್ನು ತಡೆಯಬೇಕು ಎಂದು ಅವರು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಡಿ ವೇದವ್ಯಾಸ ಕಾಮತ್ ಅವರು, ಕೇರಳದಲ್ಲಿ ಎನ್ಡಿಎ ಸರ್ಕಾರದ ಅಗತ್ಯವಿದೆ ಎಂದು ಹೇಳಿ, ಪ್ರಸ್ತುತ ಆಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಜನರು ಬಿಜೆಪಿ ಕಡೆಗೆ ಒಲವು ತೋರಿಸುತ್ತಿದ್ದಾರೆ ಎಂದೂ ವಿಶ್ವಾಸವನ್ನು ವ್ಯಕ್ತಪಡಿಸಿದರು.
Advertisement