

ಬೆಂಗಳೂರು: ಮಾನವ-ವನ್ಯಜೀವಿ ಸಂಘರ್ಷ ಮತ್ತು ಸಾವುಗಳ ಹೆಚ್ಚಳದ ನಡುವೆ, ಆಯ್ದ ಕಾಡುಪ್ರಾಣಿಗಳ ಸ್ಟೆರಿಲೈಸೇಶನ್ (ಬಂಜೆತನ ಸಂತಾನೋತ್ಪತ್ತಿ ನಿಯಂತ್ರಣ ಕ್ರಮ) ಬಗ್ಗೆ ಚಿಂತನೆ ಮಾಡುವ ಅಗತ್ಯವಿದೆ ಎಂದು ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.
ಪ್ರಾಣಿಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದರಿಂದ ಅವುಗಳು ಅರಣ್ಯದಿಂದ ಆಚೆ ಬಂದು ಮಾನವರ ಮೇಲೆ ದಾಳಿ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳುವ ಅಗತ್ಯವಿದೆ ಎಂದ ಅವರು, ಅಂತಿಮ ನಿರ್ಧಾರ ಕೈಗೊಳ್ಳುವ ಮೊದಲು ಸಮಗ್ರ ಚರ್ಚೆ ಮತ್ತು ಸಾರ್ವಜನಿಕ ಅಭಿಪ್ರಾಯ ತೆಗೆದುಕೊಳ್ಳುವುದು ಅಗತ್ಯ ಎಂದು ತಿಳಿಸಿದ್ದಾರೆ.
ಈ ಕ್ರಮ ತಾತ್ಕಾಲಿಕವಾಗಿದ್ದು, ಸುಮಾರು 1–2 ವರ್ಷಗಳ ಮಟ್ಟಿಗೆ ಮಾತ್ರ ಇರಬಹುದು ಎಂದು ಹೇಳಿದ್ದಾರೆ. ಈ ವಿಷಯ ಈಗಾಗಲೇ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಯಲ್ಲಿರುವುದರಿಂದ, ನ್ಯಾಯಾಲಯಕ್ಕೆ ಸಲ್ಲಿಸಲು ಸಮಗ್ರ ವರದಿ ಸಿದ್ಧಪಡಿಸಲಾಗುತ್ತದೆ ಎಂದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಖಂಡ್ರೆ, ಇದು ಇನ್ನೂ ಆರಂಭಿಕ ಹಂತದ ಕಲ್ಪನೆ (germ of an idea) ಮಾತ್ರ. ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನಜಾತಿ ಹಾಗೂ ಅರಣ್ಯ ನಿವಾಸಿಗಳ ಸ್ವಯಂಪ್ರೇರಿತ ಸ್ಥಳಾಂತರ ಕುರಿತು ಸರ್ಕಾರ ಗಂಭೀರವಾಗಿ ಯೋಚಿಸುತ್ತಿದೆ ಎಂದರು. ಸ್ಥಳಾಂತರಕ್ಕೆ ಆಸಕ್ತಿ ತೋರಿದವರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದ್ದು, ಆರ್ಥಿಕ ನೆರವು ಅಗತ್ಯವಾಗಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಯಲಿದೆ. ಈ ಯೋಜನೆ ಪ್ರಾಣಿಗಳಿಗೆ ಹೆಚ್ಚಿನ ಅರಣ್ಯ ಪ್ರದೇಶ ಒದಗಿಸುವುದರ ಜೊತೆಗೆ ಸಂಘರ್ಷವನ್ನು ಕಡಿಮೆ ಮಾಡಲು ಸಹಾಯವಾಗಲಿದೆ ಎಂದರು.
ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ, ಇಮ್ಯುನೋ-ಕಾಂಟ್ರಸೆಪ್ಷನ್ (immuno-contraception) ಯೋಜನೆಯನ್ನು ಕಾಡಿನ ಹೊರಭಾಗದಲ್ಲಿ ಕಾಣಿಸಿಕೊಳ್ಳುವ ಆನೆಗಳು ಮತ್ತು ಚಿರತೆಗಳಿಗೆ ಮಾತ್ರ ಪರಿಗಣಿಸಲಾಗುತ್ತಿದೆ.
ಮಹಾರಾಷ್ಟ್ರದಲ್ಲಿ ಮಾನವ-ಪ್ರಾಣಿ ಸಂಘರ್ಷ ಪ್ರದೇಶಗಳಲ್ಲಿ ಐದು ಚಿರತೆಗಳ ಸ್ಟೆರಿಲೈಸೇಶನ್ಗೆ ನ್ಯಾಯಾಲಯದಿಂದ ಅನುಮತಿ ಪಡೆದು ಪ್ರಾಯೋಗಿಕ ಯೋಜನೆ ರೂಪಿಸಲಾಗಿದೆ. ಆಫ್ರಿಕಾ ದೇಶಗಳಲ್ಲಿ ಆನೆಗಳ ಇಮ್ಯುನೋ-ಕಾಂಟ್ರಸೆಪ್ಷನ್ ಮೂಲಕ ಸಂಘರ್ಷ ನಿಯಂತ್ರಿಸಲಾಗುತ್ತಿದೆ. ಕರ್ನಾಟಕದಲ್ಲೂ ಇದೇ ರೀತಿಯ ಕ್ರಮಗಳನ್ನು ಪರಿಗಣಿಸಲಾಗುತ್ತಿದೆ. ರಾಜ್ಯದಲ್ಲಿ ಸುಮಾರು 6,800 ಆನೆಗಳು ಮತ್ತು 2,000 ಕ್ಕೂ ಹೆಚ್ಚು ಚಿರತೆಗಳು ಕಾಡಿನ ಹೊರಭಾಗದಲ್ಲಿ ಇವೆ. ಈ ವಿಷಯದಲ್ಲಿ ವೈಲ್ಡ್ಲೈಫ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಜೊತೆ ಚರ್ಚೆ ನಡೆಯುತ್ತಿದೆ ಎಂದು ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆನೆ ತಜ್ಞ ಕೆ. ಸುಕುಮಾರ್, ಇಮ್ಯುನೋ-ಕಾಂಟ್ರಸೆಪ್ಷನ್ ಜಾರಿಗೆ ತರಲು ವೈಜ್ಞಾನಿಕ ಮಾದರಿ ಮತ್ತು ವಿಶ್ಲೇಷಣೆ ಅಗತ್ಯವಿದೆ ಎಂದು ಹೇಳಿದ್ದಾರೆ. ಜೈವಿಕ, ಜನಸಂಖ್ಯಾ ಮತ್ತು ಭೌಗೋಳಿಕ ಅಂಶಗಳನ್ನೂ ಸಮಗ್ರವಾಗಿ ಅಧ್ಯಯನ ಮಾಡಬೇಕು. ಸಚಿವರು ಈ ವಿಷಯವನ್ನು ಮುಂದಿಟ್ಟಿರುವುದು ಸಂತೋಷಕರವಾದರೂ, ಜಾರಿಗೆ ಮುನ್ನ ಸಂಪೂರ್ಣ ವಿಶ್ಲೇಷಣೆ ಅಗತ್ಯ ಎಂದು ಹೇಳಿದರು.
ಹಿಂದೆ ಹಾಸನ ಮತ್ತು ಮಡಿಕೇರಿ ಪ್ರದೇಶಗಳಂತಹ ಸಂಘರ್ಷ ಪ್ರದೇಶಗಳಲ್ಲಿ ಆನೆಗಳಿಗೆ ತಾತ್ಕಾಲಿಕ ಬಂಜೆತನ ಮಾಡುವ ಪ್ರಸ್ತಾವನೆ ರೂಪಿಸಲಾಗಿದ್ದರೂ, ಅದು ಮುಂದುವರಿದಿಲ್ಲ. ಈ ವಿಷಯ ಇತ್ತೀಚಿನ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸಭೆಯಲ್ಲೂ ಚರ್ಚೆಗೆ ಬಂದಿತ್ತು.
ವೈಲ್ಡ್ಲೈಫ್ ಫಸ್ಟ್ ಟ್ರಸ್ಟಿ ಪ್ರವೀಣ್ ಭಾರ್ಗವ್, ರಕ್ಷಿತ ಅರಣ್ಯ ಪ್ರದೇಶಗಳೊಳಗೆ ಸಿಲುಕಿರುವ ಜನರನ್ನು ಪುನರ್ವಸತಿ ಮಾಡುವ ಬಗ್ಗೆ ಸಚಿವರ ಹೇಳಿಕೆ ಸ್ವಾಗತಾರ್ಹ. ಆದರೆ ಸಂಘರ್ಷವನ್ನು ಪರಿಹರಿಸಲು ಒಂದೇ ಒಂದು ಪರಿಹಾರ ಇರುವುದಿಲ್ಲ. ಅನೇಕ ಕ್ರಮಗಳನ್ನು ಒಟ್ಟಿಗೆ ಜಾರಿಗೆ ತರಬೇಕು. ವೈಜ್ಞಾನಿಕವಲ್ಲದ ವಾಸಸ್ಥಳ ಬದಲಾವಣೆ ಕ್ರಮಗಳನ್ನು ನಿಲ್ಲಿಸಬೇಕು. ಕಾಡು ಮಾರ್ಗಗಳನ್ನು ಅಧಿಕೃತಗೊಳಿಸುವುದು ಮತ್ತು ಪರಿಸರ ಸಂಪರ್ಕವನ್ನು ಸುಧಾರಿಸುವುದು ದೀರ್ಘಕಾಲೀನ ಪರಿಹಾರಕ್ಕೆ ಬಹಳ ಮುಖ್ಯ ಎಂದು ಹೇಳಿದರು.
Advertisement