

ಮಂಡ್ಯ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವವು ಜಾಗತಿಕ ನಾಯಕತ್ವ ಆಗಿದ್ದು. ಅವರ ನೇತೃತ್ವದಲ್ಲಿ ಭಾರತ ಪರಿವರ್ತನಾತ್ಮಕ ಅಭಿವೃದ್ಧಿ ಕಾಣುತ್ತಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪದ್ಮಭೂಷಣ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಶ್ರೀ ಗುರು ಭೈರವೈಕ್ಯ ಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ಮೋದಿ ಅವರನ್ನು ಭಾರತದ ಹೆಮ್ಮೆಯ ಪುತ್ರ ಎಂದು ಬಣ್ಣಿಸಿದರು. ಅವರ ದೂರದೃಷ್ಟಿಯ ನಾಯಕತ್ವ, ಅಚಲ ಬದ್ಧತೆ ಮತ್ತು ದಣಿವರಿಯದ ಸಮರ್ಪಣೆ ರಾಷ್ಟ್ರದಾದ್ಯಂತ ಲಕ್ಷಾಂತರ ಜನರ ಆಳವಾದ ನಂಬಿಕೆ ಮತ್ತು ಪ್ರೀತಿಯನ್ನು ಗಳಿಸಿದೆ ಎಂದರು.
ಪರಮಪೂಜ್ಯ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ದಿವ್ಯ ಮಾರ್ಗದರ್ಶನದಲ್ಲಿ ಹಾಗೂ ಸೇವೆ, ಶಿಕ್ಷಣ, ಕರುಣೆಯ ಮೂಲಕ ಸಮಾಜವನ್ನು ಪರಿವರ್ತಿಸಿದ ಅತ್ಯುನ್ನತ ಅಧ್ಯಾತ್ಮಿಕ ಶಕ್ತಿಯಾದ ಪದ್ಮಭೂಷಣ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಹಾಕಿಕೊಟ್ಟ ಅನನ್ಯ ಪರಂಪರೆಗೆ ಮೀಸಲಾಗಿರುವ ಈ ಐತಿಹಾಸಿಕ ಸಮಾರಂಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರೊಂದಿಗೆ ನಾನು ಸಹ ಭಾಗಿಯಾಗಿದ್ದು ದಿವ್ಯಾನುಭೂತಿ ನೀಡಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಪ್ರಧಾನಿ ಮೋದಿಯವರು ವಿಶ್ವದಲ್ಲಿ ಯಾಕೆ ಇಷ್ಟು ಜನಪ್ರಿಯರಾಗಿದ್ದಾರೆ, ಯಾಕೆ ಭಾರತೀಯರು ಇವರನ್ನು ಗೌರವಿಸುತ್ತಾರೆ ಎನ್ನುವುದನ್ನು ಸಭಾ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ವಿವರಿಸಿದರು. ಅವರ ಸದೃಢ ನಾಯಕತ್ವ ಹಾಗೂ ರಾಷ್ಟ್ರ ನಿರ್ಮಾಣದಲ್ಲಿನ ಅವರ ಸಮರ್ಪಣ ಭಾವವು ಸಮಸ್ತ ಭಾರತೀಯರ ಹೃದಯಾಂತರಂಗದಲ್ಲಿ ಆಳವಾಗಿ ನೆಲಸಿದೆ. ಲಕ್ಷಾಂತರ ಭಾರತೀಯರ ಹೃದಯದಲ್ಲಿ ಅವರ ನಾಯಕತ್ವದ ಶ್ರೇಷ್ಠತೆಯು ಆಳವಾಗಿ ಬೇರೂರಿದೆ ಎಂದು ಕುಮಾರಸ್ವಾಮಿ ಬಣ್ಣಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ದಣಿವರಿಯದ ಸಮರ್ಪಣೆ ಮತ್ತು ಆಡಳಿತದಲ್ಲಿ ಭಾರತೀಯರು ಶಕ್ತಿ, ಸಾಮರ್ಥ್ಯವನ್ನು ವೃದ್ಧಿಸಿಕೊಂಡಿದ್ದಾರೆ. ಎಲ್ಲಾ ಆಯಾಮಗಳಲ್ಲಿಯೂ ಭಾರತವು ಸರ್ವಶಕ್ತ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಹಿರಿಯ ಗುರುಗಳಿಗೆ ಪ್ರಧಾನಿಗಳು ಗೌರವ ಸಲ್ಲಿಸುತ್ತಿರುವುದು ನನಗೆ ಅತಿವ ಸಂತೋಷ ಉಂಟು ಮಾಡಿದೆ" ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸ್ಫೂರ್ತಿದಾಯಕ ನಾಯಕತ್ವದಲ್ಲಿ ರಾಷ್ಟ್ರವು ಶಕ್ತಿ, ಪ್ರಗತಿ ಮತ್ತು ಸಾಂಸ್ಕೃತಿಕ ಪುನರುತ್ಥಾನದ ಹೊಸಯುಗಕ್ಕೆ ಸಾಕ್ಷಿಯಾಗುತ್ತಿದೆ. ಆಧ್ಯಾತ್ಮಿಕತೆ ಮತ್ತು ಅಭಿವೃದ್ಧಿ ಪರಸ್ಪರ ಪೂರಕವಾಗಿದ್ದು, ಸೇವೆ ಮತ್ತು ಏಕತೆಯ ಮೌಲ್ಯಗಳನ್ನು ಚೈತನ್ಯಶೀಲತೆಯಿಂದ ಬಲಪಡಿಸಲಾಗುತ್ತಿದೆ. ಈ ಕ್ಷಣವು ಶ್ರೀಗಳ ಆದರ್ಶಗಳಿಂದ ಮಾರ್ಗದರ್ಶಿಸಲ್ಪಟ್ಟ ಮತ್ತು ರಾಷ್ಟ್ರದ ಚುಕ್ಕಾಣಿ ಹಿಡಿದಿರುವ ಕ್ರಿಯಾಶೀಲ, ಬಲಿಷ್ಠ ನಾಯಕತ್ವದಿಂದ ವಿಕಸಿತ ಭಾರತ ನಿರ್ಮಾಣಕ್ಕೆ ನಾವೆಲ್ಲರೂ ಸಂಕಲ್ಪ ತೊಟ್ಟಿದ್ದೇವೆ'' ಎಂದರು.
Advertisement