

ಬೆಂಗಳೂರು: ರೋಗಿಯೊಬ್ಬರಿಗೆ ಮರ್ಮಾಂಗ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಹೊಲಿಗೆ ಹಾಕುವುದನ್ನು ಮರೆತ ಪರಿಣಾಮ ರೋಗಿ ಶಾ ನವಾಜ್ ಸಾವನ್ನಪ್ಪಿರುವ ಘಟನೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವರದಿಯಾಗಿದೆ.
ಮರ್ಮಾಂಗಕ್ಕೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಹೊಲಿಗೆ ಹಾಕದೆ ರೋಗಿಯನ್ನ ಮನೆಗೆ ಕಳುಹಿಸಿದ್ದರು. ಮರ್ಮಾಂಗದ ಭಾದೆ ತಾಳಲಾರದೆ ರೋಗಿ ರಸ್ತೆ ನಡುವೆ ನರಳಿ ನರಳಿ ಸಾವನ್ನಪ್ಪಿದ್ದಾರೆ. ಶಾ ನವಾಜ್ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಶಾ ನವಾಜ್ (45) ಮರ್ಮಾಂಗದಲ್ಲಿ ಗಡ್ಡೆ ಬೆಳೆದ ಹಿನ್ನೆಲೆ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈತ ಖಾಸಗಿ ಸಂಸ್ಥೆಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಮನೆಗೆ ಆಧಾರವಾಗಿದ್ದ ನವಾಜ್ ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ.
ಮರ್ಮಾಂಗದಲ್ಲಿ ಗಡ್ಡೆ ಬೆಳೆದ ಕಳೆದ ಒಂದೂವರೆ ತಿಂಗಳ ಹಿಂದೆ ವಿಕ್ಟೋರಿಯಾ ಆಸ್ಪತ್ರೆಯ ಎಮರ್ಜೆನ್ಸಿ ವಿಭಾಗಕ್ಕೆ ಈತನನ್ನು ದಾಖಲಿಸಲಾಗಿತ್ತು. ಸೋಂಕು ತಗುಲಿದೆ ಎಂದು ಹೇಳಿದ್ದ ವೈದ್ಯರು ಮರ್ಮಾಂಗಕ್ಕೆ ಶಸ್ತ್ರಚಿಕಿತ್ಸೆ ನಡೆಸಿದ್ದರು.
ಕೆಲ ದಿನಗಳ ಬಳಿಕ ಪ್ಲಾಸ್ಟಿಕ್ ಸರ್ಜರಿ ವಿಭಾಗಕ್ಕೆ ಹೋಗುವಂತೆ ರೋಗಿಗೆ ಸೂಚಿಸಲಾಗಿತ್ತು. ಆದರೆ ಗಾಯ ಇನ್ನೂ ವಾಸಿಯಾಗಿಲ್ಲ ಎಂದು ಸರ್ಜರಿ ವಿಭಾಗ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದರು. ಅಪರೇಷನ್ ಹಾಗೂ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಸಿಬ್ಬಂದಿ ಸಮನ್ವಯತೆ ಕೊರತೆ ಕಾರಣ ರೋಗಿ ಗಂಭೀರ ಸ್ಥಿತಿಯಲ್ಲಿ ಇರುವಾಗಲೇ ಡಿಸ್ಚಾರ್ಜ್ ಆಗುವಂತೆ ಒತ್ತಡ ಹೇರಲಾಗಿದೆ. ಕೊನೆಗೆ ಕೊಯ್ದಿದ್ದ ಮರ್ಮಾಂಗಕ್ಕೆ ಹೊಲಿಗೆ ಕೂಡ ಮಾಡದೇ ಸಿಬ್ಬಂದಿಯೇ ರೋಗಿಯನ್ನ ಕಳುಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಶಾ ನವಾಜ್ ನ ಪತ್ನಿ 3 ದಿನ ಆಸ್ಪತ್ರೆಯ ಬಳಿ ಇರುವ ಫುಟ್ ಪಾತ್ ನಲ್ಲೇ ರೋಗಿಯನ್ನು ಇಟ್ಟುಕೊಂಡಿದ್ದರಂತೆ. ಎಷ್ಟೇ ಅಂಗಲಾಚಿದರೂ ಆಸ್ಪತ್ರೆ ಸಿಬ್ಬಂದಿ ಮತ್ತೆ ಆತನನ್ನು ದಾಖಲಿಸಿಕೊಂಡಿಲ್ಲ. ಮರ್ಮಾಂಗದಲ್ಲಿ ರಕ್ತ ಸುರಿಯುತ್ತಲೇ ಇದ್ದರೂ ವೈದ್ಯರು ಚಿಕಿತ್ಸೆ ನೀಡದೇ ನಿರ್ಲಕ್ಷ್ಯ ತೋರಿದ್ದಾರೆ ಎಂದು ಪತ್ನಿ ಹಾಗೂ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
Advertisement