ಏ.23ರಿಂದ CET ಪರೀಕ್ಷೆ: 3.3 ಲಕ್ಷ ಅಭ್ಯರ್ಥಿಗಳು ನೋಂದಣಿ; 745 ಕೇಂದ್ರಗಳಲ್ಲಿ ವಸ್ತ್ರಸಂಹಿತೆ ನಿರ್ವಹಣೆಗೆ ಅಧಿಕಾರಿಗಳ ನಿಯೋಜನೆ

ಈ ಬಾರಿ ಮೊದಲ ಬಾರಿಗೆ ಪ್ರತಿಯೊಂದು ಪರೀಕ್ಷಾ ಕೇಂದ್ರದಲ್ಲೂ ವಸ್ತ್ರಸಂಹಿತೆ ಪಾಲನೆ ನೋಡಿಕೊಳ್ಳಲು ಡ್ರೆಸ್ ಕೋಡ್ ಅಧಿಕಾರಿ ನೇಮಕ ಮಾಡಲಾಗಿದೆ. ರಾಜ್ಯಾದ್ಯಂತ ಒಟ್ಟು 745 ಅಧಿಕಾರಿಗಳನ್ನು ನಿಯೋಜಿಸಲಾಗಿದೆ
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಲಿರುವ ಸಾಮಾನ್ಯ ಪ್ರವೇಶ ಪರೀಕ್ಷೆ (CET)ನಾಳೆ ಗುರುವಾರ ಮತ್ತು ನಾಡಿದ್ದು ಶುಕ್ರವಾರ ನಡೆಯಲಿದ್ದು, ಒಟ್ಟು 3,30,479 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಇದರಲ್ಲಿ 1,44,380 ವಿದ್ಯಾರ್ಥಿಗಳು ಮತ್ತು 1,86,099 ವಿದ್ಯಾರ್ಥಿನಿಯರು ಸೇರಿದ್ದಾರೆ.

ಈ ಬಾರಿ ಮೊದಲ ಬಾರಿಗೆ ಪ್ರತಿಯೊಂದು ಪರೀಕ್ಷಾ ಕೇಂದ್ರದಲ್ಲೂ ವಸ್ತ್ರಸಂಹಿತೆ ಪಾಲನೆ ನೋಡಿಕೊಳ್ಳಲು ಡ್ರೆಸ್ ಕೋಡ್ ಅಧಿಕಾರಿ ನೇಮಕ ಮಾಡಲಾಗಿದೆ. ರಾಜ್ಯಾದ್ಯಂತ ಒಟ್ಟು 745 ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ವಿದ್ಯಾರ್ಥಿಗಳು ಅರ್ಧತೋಳು ಉಡುಪು ಧರಿಸಬೇಕು ಮತ್ತು ಕಾಲರ್ ಇಲ್ಲದ ಬಟ್ಟೆಗಳನ್ನು ಧರಿಸುವುದು ಉತ್ತಮ ಎಂದು ಸೂಚಿಸಲಾಗಿದೆ. ಗಂಡುಮಕ್ಕಳು ಜೇಬಿಲ್ಲದ ಸರಳ ಪ್ಯಾಂಟ್ ಧರಿಸಲು ಅನುಮತಿ ಇದೆ. ಕುರ್ಥಾ-ಪೈಜಾಮಾ, ಜೀನ್ಸ್ ಹಾಗೂ ಶೂಗಳನ್ನು ನಿಷೇಧಿಸಲಾಗಿದೆ.

Representational image
ದ್ವಿತೀಯ ಪಿಯುಸಿ ದಾಖಲೆ ಫಲಿತಾಂಶ: ಉತ್ತರ ಪತ್ರಿಕೆ ಸ್ಕ್ಯಾ‌ನ್‌ ಪ್ರತಿ, ಮರುಮೌಲ್ಯಮಾಪನ, ಪಿಯುಸಿ ಪರೀಕ್ಷೆ-2 ನೋಂದಣಿಗೆ ದಿನಾಂಕ ನಿಗದಿ

ಮೊಬೈಲ್ ಫೋನ್‌ಗಳು, ಬ್ಲೂಟೂತ್ ಸಾಧನಗಳು, ಇಯರ್‌ಫೋನ್‌ಗಳು, ಮೈಕ್ರೋಫೋನ್‌ಗಳು ಮತ್ತು ಎಲ್ಲಾ ವಿಧದ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ವಿದ್ಯಾರ್ಥಿಗಳು ಪರೀಕ್ಷೆಗೆ ಬರುವ ಮೊದಲು KEA ವೆಬ್‌ಸೈಟ್‌ನಲ್ಲಿ ನೀಡಿರುವ ವಸ್ತ್ರಸಂಹಿತೆಯನ್ನು ತಿಳಿದುಕೊಳ್ಳಬೇಕು ಎಂದು KEA ತಿಳಿಸಿದೆ.

ಸಿಇಟಿ ಪರೀಕ್ಷೆಯನ್ನು ಇಂಜಿನಿಯರಿಂಗ್, ಕೃಷಿ ವಿಜ್ಞಾನ ಮತ್ತು ಪಶುವೈದ್ಯಕೀಯ ವಿಜ್ಞಾನಗಳಂತಹ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ನಡೆಸಲಾಗುತ್ತದೆ. ಗಡಿಭಾಗ ಮತ್ತು ಇತರ ರಾಜ್ಯಗಳ ಅಭ್ಯರ್ಥಿಗಳು ಏಪ್ರಿಲ್ 22ರಂದು ಬೆಂಗಳೂರು, ಮಂಗಳೂರು, ವಿಜಯಪುರ ಮತ್ತು ಬೆಳಗಾವಿ ಸೇರಿದಂತೆ ಐದು ಕೇಂದ್ರಗಳಲ್ಲಿ ಕನ್ನಡ ಭಾಷಾ ಪರೀಕ್ಷೆ ಬರೆಯಲಿದ್ದಾರೆ. ಏಪ್ರಿಲ್ 23ರಂದು ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪರೀಕ್ಷೆಗಳು ನಡೆಯಲಿದ್ದು, ಏಪ್ರಿಲ್ 24ರಂದು ಗಣಿತ ಮತ್ತು ಜೀವಶಾಸ್ತ್ರ ಪರೀಕ್ಷೆಗಳು ನಡೆಯಲಿವೆ.

ಪರೀಕ್ಷಾ ಹಾಲ್‌ಗಳಲ್ಲಿ ಅಕ್ರಮಗಳನ್ನು ತಡೆಯಲು ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ನೇಮಕಾತಿ ಪರೀಕ್ಷೆಗಳಂತೆ ಸಿಸಿಟಿವಿ ಕ್ಯಾಮೆರಾ ನಿಗಾವಹಣೆ ಇರುತ್ತದೆ. ಎಲ್ಲಾ 745 ಕೇಂದ್ರಗಳನ್ನು ವೆಬ್‌ಕಾಸ್ಟಿಂಗ್ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿಇಒಗಳು ಜಿಲ್ಲಾ ಮಟ್ಟದಲ್ಲಿ ವ್ಯವಸ್ಥೆಗಳನ್ನು ನೋಡಿಕೊಳ್ಳಲಿದ್ದಾರೆ.

ಬೆಂಗಳೂರಲ್ಲಿ 163 ಕೇಂದ್ರಗಳಲ್ಲಿ 77,604 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಮಲ್ಲೇಶ್ವರದಲ್ಲಿರುವ KEA ಕಚೇರಿಯಲ್ಲಿ ಕೇಂದ್ರ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ. ಕಠಿಣ ತಪಾಸಣೆ ಪ್ರಕ್ರಿಯೆ ಇರುವುದರಿಂದ ಅಭ್ಯರ್ಥಿಗಳು ಕನಿಷ್ಠ ಎರಡು ಗಂಟೆಗಳ ಮುಂಚಿತವಾಗಿ ಕೇಂದ್ರಕ್ಕೆ ಆಗಮಿಸಬೇಕು. ಒಟ್ಟು 970 ದಿವ್ಯಾಂಗ ಅಭ್ಯರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಶ್ರವಣ ಸಾಧನ ಬಳಸುವವರು ಹೆಚ್ಚುವರಿ ಪರಿಶೀಲನೆಗಾಗಿ ಎರಡು ಗಂಟೆಗಳ ಮುಂಚಿತವಾಗಿ ಹಾಜರಾಗಬೇಕು. ಸಂವೇದನಾಶೀಲ ಕೇಂದ್ರಗಳಲ್ಲಿ ಮೊಬೈಲ್ ಸಿಗ್ನಲ್ ಜಾಮರ್‌ಗಳನ್ನು ಅಳವಡಿಸಲಾಗಿದೆ.

ಅಭ್ಯರ್ಥಿಗಳ ಬದಲು ಇತರರು ಪರೀಕ್ಷೆ ಬರೆಯುವುದನ್ನು ತಡೆಯಲು ಮುಖ ಗುರುತು (facial recognition) ಮತ್ತು QR ಕೋಡ್ ಪರಿಶೀಲನಾ ವ್ಯವಸ್ಥೆಯನ್ನು ಕೆಇಎ ಅಳವಡಿಸಿದೆ. ಇದೇ ವ್ಯವಸ್ಥೆಯನ್ನು ಕಾಲೇಜು ಪ್ರವೇಶ ಸಮಯದಲ್ಲೂ ಬಳಸಲಾಗುತ್ತದೆ.

ದ್ವಿತೀಯ ಪಿಯುಸಿ ಪರೀಕ್ಷೆ-1ರಲ್ಲಿ ಕಡಿಮೆ ಅಂಕ ಪಡೆದವರು ಅಥವಾ ಅನುತ್ತೀರ್ಣರಾದವರಿಗೆ ಇನ್ನೂ ಅವಕಾಶ ಇದೆ. ಎರಡನೇ ಪರೀಕ್ಷೆಯ ಅಂಕಗಳನ್ನು ಸಿಇಟಿ ಫಲಿತಾಂಶದಲ್ಲಿ ಪರಿಗಣಿಸಲಾಗುತ್ತದೆ. ಅಭ್ಯರ್ಥಿಗಳು ಒಎಂಆರ್ ಶೀಟ್ ನ್ನು ಜಾಗ್ರತೆಯಿಂದ ತುಂಬಬೇಕು. ತಮ್ಮ ಸಿಇಟಿ ನೋಂದಣಿ ಸಂಖ್ಯೆ, ಪ್ರಶ್ನೆಪತ್ರಿಕೆಯ ಆವೃತ್ತಿ ಕೋಡ್ ಹಾಗೂ ಸರಣಿ ಸಂಖ್ಯೆಯನ್ನು ಸರಿಯಾಗಿ ದಾಖಲಿಸಬೇಕು. ಈ ವಿವರಗಳಲ್ಲಿ ತಪ್ಪುಗಳು ಹಿಂದೆಯೂ ಫಲಿತಾಂಶದ ಸಮಸ್ಯೆಗಳಿಗೆ ಕಾರಣವಾಗಿವೆ, ಆದ್ದರಿಂದ ಎಚ್ಚರಿಕೆಯಿಂದಿರಬೇಕು ಎಂದು ತಿಳಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com