

ಮಂಗಳೂರೂ: 2025-26ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಬಸ್ ಕಂಡಕ್ಟರ್ ಮಗ ಪ್ರೀತಮ್ ಜಿ ಪೂಜಾರಿ ಅವರು ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯ ಕುಂದಾಪುರದ ಶಂಕರನಾರಾಯಣ ಮದರ್ ಥೆರೆಸಾ ಮೆಮೋರಿಯಲ್ ಪ್ರೌಢಶಾಲೆಯ ವಿದ್ಯಾರ್ಥಿ ಪ್ರೀತಮ್, 625 ಅಂಕಗಳಿಗೆ 625 ಅಂಕಗಳನ್ನು ಗಳಿಸುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ.
ಬಡ ಕುಟುಂಬದಿಂದ ಬಂದಿರುವ ಪ್ರೀತಮ್, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸಿದ ಏಳು ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದಾರೆ.
ಪ್ರೀತಮ್, ಬಿದ್ದಲಟ್ಟೆ ನಿವಾಸಿ ಗಣಪತಿ ಪೂಜಾರಿ ಮತ್ತು ನಾಗರತ್ನಾ ಪೂಜಾರಿ ದಂಪತಿಯ ಮಗನಾಗಿದ್ದು, ಅವರ ತಂದೆ ಗಣಪತಿ ಖಾಸಗಿ ಬಸ್ನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ಗೃಹಿಣಿ. ಪ್ರೀತಂ ಎಲ್ಕೆಜಿಯಿಂದ ಮದರ್ ಥೆರೆಸಾ ಶಾಲೆಯಲ್ಲಿ ಓದುತ್ತಿದ್ದಾರೆ.
ತನ್ನ ಸಾಧನೆ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಜೊತೆ ಮಾತನಾಡಿದ ಪ್ರೀತಮ್, ತಾನು ಪ್ರತಿದಿನ ಪಾಠಗಳನ್ನು ಓದುತ್ತಿದ್ದೆ ಮತ್ತು ಪಠ್ಯಕ್ರಮವನ್ನು ಪೂರ್ಣಗೊಳಿಸಲು ಮತ್ತು ಪರೀಕ್ಷೆಗೆ ತಯಾರಿ ನಡೆಸಲು ಒಂದು ತಿಂಗಳ ಗಡುವನ್ನು ಇಟ್ಟುಕೊಂಡಿದ್ದೆ ಎಂದು ಹೇಳಿದ್ದಾರೆ.
"ನನ್ನ ಪೋಷಕರು ಮತ್ತು ನನ್ನ ಶಾಲೆಯ ಮಾರ್ಗದರ್ಶನ ಹಾಗೂ ಬೆಂಬಲ ನನಗೆ ಈ ಸಾಧನೆ ಮಾಡಲು ಸಹಾಯ ಮಾಡಿದೆ". ಪಿಯುಸಿಯಲ್ಲಿ ವಿಜ್ಞಾನ(ಪಿಸಿಎಂಸಿಎಸ್) ಆಯ್ಕೆ ಮಾಡಿಕೊಂಡು ಜೆಇಇ ಪರೀಕ್ಷೆ ತೆಗೆದುಕೊಳ್ಳುವುದಾಗಿ ಪ್ರೀತಮ್ ತಿಳಿಸಿದ್ದಾರೆ.
ಕುಂದಾಪುರದ ಶಂಕರನಾರಾಯಣದಲ್ಲಿರುವ ಮದರ್ ಥೆರೆಸಾ ಸ್ಮಾರಕ ಶಾಲೆಯ ಸಂಸ್ಥಾಪಕಿ ಶಮಿತಾ ರೈ ಬಲ್ಮಟ್ಟ ಮತ್ತು ರೆನಿತಾ ಲೋಬೊ ಅವರು ಪ್ರೀತಮ್ನ ಸಾಧನೆಯ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.
"ಅವನು ಕ್ರಿಯಾಶೀಲ ಮತ್ತು ಅದ್ಭುತ ವಿದ್ಯಾರ್ಥಿ. ಅವನು ಪೂರ್ಣ ಅಂಕಗಳನ್ನು ಗಳಿಸುತ್ತಾನೆ ಎಂದು ನಾವು ನಿರೀಕ್ಷಿಸಿದ್ದೆವು. ಸಮರ್ಪಣೆ ಮತ್ತು ಕಠಿಣ ಪರಿಶ್ರಮದ ಜೊತೆಗೆ, ಅವನು ಪೋಷಕರು ಹಾಗೂ ಶಿಕ್ಷಕರೊಂದಿಗೆ ವಿನಮ್ರನಾಗಿದ್ದನು. ಅವನು ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದಿದ್ದನು" ಎಂದು ಅವರು ಹೇಳಿದ್ದಾರೆ.
Advertisement