

ಈ ವರ್ಷದ ಬೇಸಿಗೆಯ ಮೊದಲ ಮಳೆಗೆ ರಾಜಧಾನಿ ಬೆಂಗಳೂರಿನಲ್ಲಿ ಅನಾಹುತ ನಡೆದುಹೋಗಿದೆ. ನಗರದ ಹೃದಯ ಭಾಗದ ಬೌರಿಂಗ್ ಸರ್ಕಾರಿ ಆಸ್ಪತ್ರೆಯ ಕಂಪೌಂಡ್ ಕುಸಿದು 7 ಮಂದಿ ನಾಗರಿಕರು ಮೃತಪಟ್ಟಿದ್ದಾರೆ. ತೀವ್ರ ಗಾಳಿ, ಮಳೆಗೆ ನಗರದ ಹಲವು ಭಾಗಗಳಲ್ಲಿ ಮರದ ರೆಂಬೆ ಕೊಂಬೆ ಮುರಿದು ಬಿದ್ದಿದೆ. ರಸ್ತೆಗಳಲ್ಲೆಲ್ಲಾ ಪ್ರವಾಹದಂತೆ ಕಳೆದ ರಾತ್ರಿಯಿಡೀ ನೀರು ತುಂಬಿಕೊಂಡಿತ್ತು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಥಳಕ್ಕೆ ಧಾವಿಸಿ ಅನಾಹುತವನ್ನು ಪರಿಶೀಲಿಸಿದರು. ಮಳೆಯಿಂದ ತಪ್ಪಿಸಿಕೊಳ್ಳಲು ಹಲವರು ಗೋಡೆಯ ಸಮೀಪ ಸೇರಿಕೊಂಡಿದ್ದರು, ಆಗ ಗೋಡೆ ಮುರಿದುಬಿದ್ದು ಸಾವು ಉಂಟಾಯಿತು ಎಂದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿ ಕೆ ಶಿವಕುಮಾರ್, ಈ ಘಟನೆ ಕುರಿತು ತಿಳಿದು ನನಗೆ ತುಂಬಾ ದುಃಖವಾಗಿದೆ. ಇಂತಹ ಘಟನೆಗಳು ನಡೆಯಬಾರದು. ಹಲವು ಕಡೆಗಳಲ್ಲಿ ಮರಗಳು ಉರುಳಿದ್ದು, ವಾಹನಗಳು ಹಾನಿಗೊಳಗಾಗಿವೆ. ಮಳೆಗಾಲದಲ್ಲಿ ಇಂತಹ ದುರಂತಗಳು ಮರುಕಳಿಸುವ ಅಪಾಯ ಇರುವುದರಿಂದ ದುರ್ಬಲ ಮರಗಳನ್ನು ಕಡಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಹೇಳಿದರು.
ಮೃತರಲ್ಲಿ ಇಬ್ಬರು ಕೇರಳ ಮೂಲದ ಪ್ರವಾಸಿಗರು
ಮೃತಪಟ್ಟವರಲ್ಲಿ ಇಬ್ಬರು ಕೇರಳದಿಂದ ಪ್ರವಾಸ ಬಂದವರಾಗಿದ್ದರು. ಮರಣೋತ್ತರ ಪರೀಕ್ಷೆ ನಡೆಸಲು ಮತ್ತು ಮೃತದೇಹಗಳನ್ನು ಸಾಗಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಇನ್ನೊಂದೆಡೆ, ಪ್ರತಿಪಕ್ಷ ನಾಯಕ ಆರ್. ಅಶೋಕ್, ಸರ್ಕಾರದ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ಟೀಕಿಸಿದರು. ಮೂಲಸೌಕರ್ಯ ಮತ್ತು ನಾಗರಿಕ ಸೌಕರ್ಯ ನಿರ್ಲಕ್ಷ್ಯದ ಬೆಲೆಗಾಗಿ ಇನ್ನೆಷ್ಟು ಜೀವಗಳು ಬಲಿಯಾಗಬೇಕು? ‘ಬ್ರ್ಯಾಂಡ್ ಬೆಂಗಳೂರು’ ಎಂದು ಕಾಂಗ್ರೆಸ್ ಸರ್ಕಾರ ದೊಡ್ಡ ದೊಡ್ಡ ಹೇಳಿಕೆಗಳನ್ನು ನೀಡುತ್ತಿರುವಾಗ, ನಗರದ ಹೃದಯಭಾಗದಲ್ಲಿರುವ ಪ್ರಮುಖ ಸರ್ಕಾರಿ ಆಸ್ಪತ್ರೆಯ ಕುಸಿಯುತ್ತಿರುವ ಗೋಡೆಗಳು ಇನ್ನಷ್ಟು ಭಯಾನಕ ಕಥೆಯನ್ನು ಹೇಳುತ್ತಿವೆ. ಈ ಕಾಂಗ್ರೆಸ್ ಸರ್ಕಾರಕ್ಕೆ ಬಡವರ ಮತ್ತು ಸಾಮಾನ್ಯ ಜನರ ಜೀವಗಳು ಅಲ್ಪವೆನಿಸುತ್ತಿವೆ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸರ್ಕಾರವು ಹೊಣೆಗಾರಿಕೆ ವಹಿಸಿ, ಸಂತ್ರಸ್ತರಿಗೆ ಸೂಕ್ತ ಪರಿಹಾರ ಮತ್ತು ಚಿಕಿತ್ಸೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಸಚಿವ ಜಮೀರ್ ಭೇಟಿ
ಡಿಸಿಎಂ ಜೊತೆ ವಸತಿ ಸಚಿವ ಜಮೀರ್ ಅಹ್ಮದ್ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮೃತಪಟ್ಟವರೆಲ್ಲಾ ಬಡ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ನಾಲ್ವರು ಕೇರಳ ಮೂಲದ ಪ್ರವಾಸಿಗರಾಗಿದ್ದಾರೆ. ಮೃತರ ಕುಟುಂಬಸ್ಥರಿಗೆ ವೈಯಕ್ತಿಕವಾಗಿ ನನ್ನ ಕಡೆಯಿಂದ ಕೈಲಾದ ಸಹಾಯ ಮಾಡುತ್ತೇನೆ ಎಂದರು.
Advertisement