

ವಿಜಯಪುರ: ಕರ್ತವ್ಯ ನಿರತ ಸಾರಿಗೆ ಇಲಾಖೆ ಬಸ್ ನಿರ್ವಾಹಕನ ಮೇಲೆ ಇಬ್ಬರು ದುಷ್ಕರ್ಮಿಗಳು ಹಲ್ಲೆ ನಡೆಸಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗಿದೆ.
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಲಹಳ್ಳಿ ಸಮೀಪ ಶನಿವಾರ ಈ ಘಟನೆ ನಡೆದಿದ್ದು, ರಸ್ತೆ ಅಡ್ಡಲಾಗಿ ನಿಂತಿದ್ದ ಆಟೋವನ್ನು ಪಕಕ್ಕೆ ಸರಿಸುವಂತೆ ಹೇಳಿದ ಕಾರಣಕ್ಕೇ ಕಂಡಕ್ಟರ್ ಮೇಲೆ ಭೀಕರ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಮೂಲಗಳ ಪ್ರಕಾರ ಮದರಿ-ಕನ್ನೊಳ್ಳಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸಾರಿಗೆ ಬಸ್ನ್ನು ಆರೋಪಿಗಳು ಅಡ್ಡಗಟ್ಟಿ ನಿರ್ವಾಹಕ ಮಲ್ಲಪ್ಪ ಲಮಾಣಿ ಅವರೊಂದಿಗೆ ಜಗಳ ಆರಂಭಿಸಿದ್ದಾರೆ.
ಮಾತಿನ ಚಕಮಕಿ ತೀವ್ರಗೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪಿಗಳು ಏಕಾಏಕಿ ಹಲ್ಲೆಗೆ ಮುಂದಾದರು. ನಿರ್ವಾಹಕ ಪ್ರತಿರೋಧ ವ್ಯಕ್ತಪಡಿಸಿದಾಗ ಇಬ್ಬರೂ ಸೇರಿ ಮನಬಂದಂತೆ ಥಳಿಸಿದರು.
ಬಳಿಕ ಆರೋಪಿಗಳು ನಿರ್ವಾಹಕನ ಕುತ್ತಿಗೆಯನ್ನು ಬಲವಾಗಿ ಹಿಸುಕಿದ ಪರಿಣಾಮ ಅವರು ಅರೆಪ್ರಜ್ಞಾಹೀನರಾಗಿ ಬಸ್ನಲ್ಲೇ ಕುಸಿದುಬಿದ್ದರು.
ಘಟನೆಯಿಂದ ಪ್ರಯಾಣಿಕರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಬಸ್ನಲ್ಲಿದ್ದ ಪ್ರಯಾಣಿಕರು ತಕ್ಷಣ ಮಧ್ಯಪ್ರವೇಶಿಸಿ ಹಲ್ಲೆ ತಡೆದು ನಿರ್ವಾಹಕರಿಗೆ ಪ್ರಾಥಮಿಕ ಚಿಕಿತ್ಸೆ ಒದಗಿಸಿದರು.
ಗಾಯಾಳು ನಿರ್ವಾಹಕ ಮಲ್ಲಪ್ಪ ಲಮಾಣಿ ಅವರನ್ನು ತಕ್ಷಣ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಘಟನೆಯ ದೃಶ್ಯವನ್ನು ಪ್ರಯಾಣಿಕರೊಬ್ಬರು ಮೊಬೈಲ್ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಆಟೋ ತೆಗಿ ಎಂದಿದ್ದಕ್ಕೇ ಹಲ್ಲೆ
ಪ್ರಾಥಮಿಕ ಮಾಹಿತಿಯ ಪ್ರಕಾರ, ರಮೇಶ್ ಸೇರಿದಂತೆ ಇಬ್ಬರು ಆರೋಪಿಗಳು ಈ ಕೃತ್ಯ ಎಸಗಿದ್ದು, ಹಿಂದಿನ ದಿನ ಆಟೋ ರಿಕ್ಷಾ ತೆರವು ವಿಚಾರವಾಗಿ ಉಂಟಾಗಿದ್ದ ವೈಮನಸ್ಸಿನ ಹಿನ್ನೆಲೆಯಲ್ಲಿ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.
ಘಟನೆ ಆಲಮೇಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಸಾರ್ವಜನಿಕ ಸೇವೆಯಲ್ಲಿ ನಿರತರಾಗಿರುವ ಸಾರಿಗೆ ಸಿಬ್ಬಂದಿಯ ಮೇಲಿನ ಇಂತಹ ಅಮಾನುಷ ಹಲ್ಲೆ ಖಂಡನೀಯವಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಸಾರಿಗೆ ಸಿಬ್ಬಂದಿಗೆ ಸೂಕ್ತ ಭದ್ರತೆ ಕಲ್ಪಿಸಬೇಕೆಂದು ಕೆಎಸ್ಆರ್ಟಿಸಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.