

ಶಿವಮೊಗ್ಗ: ಸಚಿವ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಇಂದು ಬೆಳಗ್ಗೆ 10 ಗಂಟೆಗೆ ರಾಜೀನಾಮೆ ನೀಡುವುದಾಗಿ ನಿನ್ನೆ ಘೋಷಿಸಿದ್ದರು. ಆದರೆ ಇದೀಗ ಬೇಳೂರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಟಾಂಗ್ ನೀಡುವುದರ ಜತೆಗೆ ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲ್ಲ ಎಂದು ಉಲ್ಟಾ ಹೊಡೆದಿದ್ದಾರೆ.
ಸಿದ್ದರಾಮಯ್ಯ ಅವರು ಈಗ ಖುಷಿ ಇದ್ದಾರಲ್ಲ. ಹಾಗೆ ನೂರು ವರ್ಷ ಖುಷಿಯಿಂದ ಇರಲಿ. ಅವರ ಅನುಯಯಿಗಳಿಗೆ ಸಿಕ್ಕಿದೆ ಅಲ್ವಾ ಇನ್ನೂ ನೂರು ವರ್ಷ ಚೆನ್ನಾಗಿರಲಿ, ನನಗೆ ಬೇಜಾರಾಗಿದೆ, ನನಗೆ ಕಣ್ಣೀರು ಬರ್ತಿದೆ. ಗ್ಲಾಸ್ ತೆಗೆದು ತೋರಿಸಲಾ ಎಂದು ಪರೋಕ್ಷವಾಗಿ ಮಾಜಿ ಸಿಎಂ ಮೇಲೆ ಬೇಳೂರು ಗೋಪಾಲಕೃಷ್ಣ ಅಸಮಾಧಾನ ಹೊರಹಾಕಿದ್ದಾರೆ.
ರಾಜೀನಾಮೆ ನೀಡುವವರದ್ದನ್ನು ತಕ್ಷಣವೇ ಪರಿಗಣಿಸಿ ಎಂದಿದ್ದಕ್ಕೆ ನಾನೇನು ಭಯಪಟ್ಟಿಲ್ಲ. ನಾನು ಭಯಪಡುವ ಮನುಷ್ಯ ಅಲ್ಲ. ನಾನೇ ಸಿಎಂ, ಹಾಗಾಗಿ ನಿಮ್ಮ ಜತೆ ಇದ್ದೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಅವರಿಗಾಗಿ ನಾನು ರಾಜೀನಾಮೆ ನಿರ್ಣಯವನ್ನು ವಾಪಾಸ್ ಪಡೆದುಕೊಂಡಿದ್ದೇನೆ. ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದಿಲ್ಲ ಎಂದು ಬೇಳೂರು ಗೋಪಾಲಕೃಷ್ಣ ಸ್ಪಷ್ಟಪಡಿಸಿದ್ದಾರೆ.
ಇನ್ನು ಮುಂದುವರೆದು, ಯಾರೂ ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು. ಇಂದು ಸಭೆಯಿದೆ. ಅಲ್ಲಿ ಯಾರೂ ರಾಜೀನಾಮೆ ಕೊಡಬೇಡಿ ಎಂದು ಹೇಳುತ್ತೇನೆ.
ಈಗಾಗಲೇ ಸುರ್ಜೇವಾಲಾ ಅವರು ಮಾತನಾಡಿದ್ದಾರೆ. ಅದೇ ರೀತಿ ಯಶವಂತರಾಯ ಗೌಡರ ಜತೆಯೂ ಸಹ ಮಾತನಾಡಿದ್ದಾರೆ. ನಾನು ಕ್ಷೇತ್ರದ ಜನರ ಜತೆ ಮಾತನಾಡುತ್ತೇನೆ. 2028ಕ್ಕೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಹೀಗಾಗಿ ಎಲ್ಲರಿಗೂ ರಾಜೀನಾಮೆ ವಾಪಾಸ್ ಪಡೆಯಲು ಹೇಳುತ್ತೇನೆ ಎಂದು ಬೇಳೂರು ಹೇಳಿದ್ದಾರೆ.