

ಚಿಕ್ಕಬಳ್ಳಾಪುರ: ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಮೊದಲ ಬಾರಿಗೆ ತಮ್ಮ ಅಸಮಾಧಾನ ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನದ ಆಸೆಯನ್ನು ಈಗ ಕೈಬಿಟ್ಟಿದ್ದೇನೆ. ಮುಂದಿನ ನಡೆ ಏನು ಎಂಬುದನ್ನು ಕಾದು ನೋಡೋಣ" ಎಂದು ಅವರು ಹೇಳಿದರು. ತಾವು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೂ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರೂ, ಕೊನೆಯ ಕ್ಷಣದಲ್ಲಿ ಸಚಿವ ಆಕಾಂಕ್ಷಿಗಳ ಪಟ್ಟಿಯಿಂದ ತಮ್ಮ ಹೆಸರನ್ನು ಕೈಬಿಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇದು ರಾಜಕಾರಣ. ಏನಾಯಿತು ಎಂಬುದನ್ನು ಎಲ್ಲರೂ ನೋಡಿದ್ದಾರೆ. ಕಳೆದ ಮೂರು ದಿನಗಳಿಂದ ಕ್ಷೇತ್ರದ ಜನರಿಗೆ ಉತ್ತರಿಸಲಾಗದೆ ಮೊಬೈಲ್ ಫೋನನ್ನೇ ಸ್ವಿಚ್ ಆಫ್ ಮಾಡಿಕೊಂಡಿದ್ದೆ. ನನ್ನ ಬೆಂಬಲಿಗರು ಹಾಗೂ ಕ್ಷೇತ್ರದ ಜನರ ನಿರೀಕ್ಷೆ ದೊಡ್ಡದಾಗಿತ್ತು. ಅವರಿಗೆ ಏನು ಉತ್ತರ ನೀಡಬೇಕೆಂಬ ಗೊಂದಲ ಇತ್ತು," ಎಂದರು.
ಈ ಹಿಂದೆ ಬಿಜೆಪಿ ನಾಯಕರಿಂದ ತಮ್ಮನ್ನು ಪಕ್ಷಕ್ಕೆ ಆಹ್ವಾನಿಸಿದ್ದ ವಿಚಾರವನ್ನೂ ಸುಬ್ಬಾರೆಡ್ಡಿ ಪ್ರಸ್ತಾಪಿಸಿದರು. ಆದರೆ, ಪಕ್ಷ ಬದಲಾವಣೆಯ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. "ಸಚಿವ ಸ್ಥಾನ ನೀಡುವ ಪ್ರಸ್ತಾಪಗಳು ಕೂಡ ಬಂದಿದ್ದವು. ಆದರೆ ನಾನು ಕಾಂಗ್ರೆಸ್ನಲ್ಲೇ ಇದ್ದೇನೆ. ಮುಂದಿನ ರಾಜಕೀಯ ಬೆಳವಣಿಗೆಗಳನ್ನು ಕಾದು ನೋಡುತ್ತೇನೆ," ಎಂದು ಹೇಳಿದರು.
ಬಾಗೇಪಲ್ಲಿಗೆ ಸ್ವಾತಂತ್ರ್ಯ ಬಂದಾಗಿನಿಂದಲೂ ಸಚಿವ ಸ್ಥಾನ ಸಿಕ್ಕೇ ಇಲ್ಲವೆಂದು ನೋವು ತೋಡಿಕೊಂಡಿದ್ದಾರೆ. ಆಪರೇಷನ್ ಕಮಲದ ವೇಳೆ ನಾನು ಅಡ್ಡದಾರಿನಲ್ಲಿ ಹೋಗಿದ್ದರೆ ಮಂತ್ರಿ ಆಗ್ತಿದ್ದೆ. ಆದರೆ ನನ್ನ ಮನಸ್ಸು ಅದಕ್ಕೆ ಒಪ್ಪಲಿಲ್ಲ. ಯಾವತ್ತಾದರೂ ಪಕ್ಷಕ್ಕೆ ನಿಷ್ಠೆ ತೋರಿದರೆ ಒಳ್ಳೇದಾಗುತ್ತೆ ಎಂದು ನಂಬಿದ್ದೆ. ಆದರೆ ನಾನು ತೋರಿಸಿದ ನಿಷ್ಠೆಯನ್ನು ಪಕ್ಷ ನನಗೆ ತೋರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯವರು ಆಪರೇಷನ್ ಕಮಲ ಮಾಡಿದಾಗ ನನ್ನ ಸ್ನೇಹಿತ ಡಾಕ್ಟರ್ ಸುಧಾಕರ್ ಅವರು ನನ್ನನ್ನು ಬಿಜೆಪಿಗೆ ಆಹ್ವಾನಿಸಿದ್ದರು. ಆಗ ಇಬ್ಬರೂ ಜೊತೆಯಾಗಿ ಚಿಕ್ಕಬಳ್ಳಾಪುರ ಮತ್ತು ಕೋಲಾರಕ್ಕೆ ಉಸ್ತುವಾರಿ ಆಗ್ತೀವಿ ಎಂದಿದ್ದರು. ಆದರೆ ನಾನು ಹೋಗಲಿಲ್ಲ ಎಂದಿದ್ದಾರೆ.
ತಮಗೆ ಲಕ್ ಇಲ್ಲ ಎಂದ ಸುಬ್ಬಾ ರೆಡ್ಡಿ, ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಾಜ್ಯ ನಾಯಕರು ತಾವು ಶಾಸಕನಾಗಲು ಯಾವುದೇ ಕ್ಯಾನ್ವಾಸ್ ಮಾಡಿಲ್ಲ. ಒಂದು ರೂಪಾಯಿ ಕೂಡ ಪಾರ್ಟಿ ಫಂಡ್ ನೀಡಿಲ್ಲ ಎಂದು ಹೇಳಿದ್ದಾರೆ. ತಮ್ಮ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.