

ನವದೆಹಲಿ: ಉತ್ತರಾಖಂಡದಲ್ಲಿ ಭಾರೀ ಮಳೆಯಿಂದ ನದಿಯಲ್ಲಿ ನೀರಿನ ಮಟ್ಟ ಏರಿದ್ದರಿಂದ ಉಂಟಾದ ಬಲವಾದ ಪ್ರವಾಹದಿಂದ ಕಣಿವೆ ಪ್ರದೇಶದಲ್ಲಿ ಸೇತುವೆ ಕೊಚ್ಚಿ ಹೋಗಿದೆ.
ಘಟನೆಯ ವೀಡಿಯೊ ಲಭ್ಯವಾಗಿದ್ದು, ಮಣ್ಣು ಮಿಶ್ರಿತ ಬೃಹತ್ ಪ್ರಮಾಣದ ನೀರು ಧುಮುಕಿದ್ದು, ಚಮೋಲಿ ಜಿಲ್ಲೆಯ ಅಡಿಯಲ್ಲಿ ಬರುವ ಕಣಿವೆಯಲ್ಲಿರುವ ಲೋಹದ ಸೇತುವೆಗೆ ಅಪ್ಪಳಿಸಿದೆ. ಕೆಲವೇ ಸೆಕೆಂಡುಗಳಲ್ಲಿ, ನೀರಿನ ರಭಸಕ್ಕೆ ಸೇತುವೆ ಕೊಚ್ಚಿ ಹೋಗಿದೆ.
ನದಿಯ ಉದ್ದಕ್ಕೂ ರಸ್ತೆಯಲ್ಲಿದ್ದ ಟ್ರಕ್ ಮತ್ತು ಎಸ್ಯುವಿ ಸಕಾಲದಲ್ಲಿ ವಿಪತ್ತಿನಿಂದ ದೂರ ಸರಿಯುವಲ್ಲಿ ಯಶಸ್ವಿಯಾಗಿರುವುದು, ವೀಡಿಯೊದಲ್ಲಿ ಸೆರೆಯಾಗಿದೆ.
ಸೇತುವೆ ಕೊಚ್ಚಿ ಹೋಗಿದ್ದರ ಕಾರಣ, ಪ್ರದೇಶ ಮುಖ್ಯ ಪಟ್ಟಣದಿಂದ ಸಂಪರ್ಕ ಕಡಿತಗೊಂಡಿದೆ. ಅಧಿಕಾರಿಗಳು ಈ ಪ್ರದೇಶದಲ್ಲಿ ಪ್ರಯಾಣಿಸದಂತೆ ಜನರಿಗೆ ಮನವಿ ಮಾಡಿದ್ದಾರೆ. ಪರಿಸ್ಥಿತಿ ಸುಧಾರಿಸುವವರೆಗೆ ಮತ್ತು ಆಡಳಿತ ಸ್ಪಷ್ಟ ಸಂದೇಶವನ್ನು ನೀಡುವವರೆಗೆ ಜನರು ತಮ್ಮ ಪ್ರಯಾಣವನ್ನು ಮುಂದೂಡಬೇಕು ಎಂದು ಮನವಿ ಮಾಡಿದ್ದಾರೆ.
ಭಾರೀ ಮಳೆಯಿಂದಾಗಿ ನೀರಿನ ಮಟ್ಟ ಏರುವ ಅಪಾಯ ಇರುವುದರಿಂದ, ಕಣಿವೆಯಲ್ಲಿ ನದಿಗಳು ಮತ್ತು ಹೊಳೆಗಳ ದಡದಲ್ಲಿ ವಾಸಿಸುವ ಜನರು ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಲು ಸೂಚಿಸಲಾಗಿದೆ.
ಉತ್ತರಾಖಂಡ ವಿಪತ್ತು ನಿರ್ವಹಣೆ ಮತ್ತು ಪುನರ್ವಸತಿ ಕಾರ್ಯದರ್ಶಿ ವಿನೋದ್ ಕುಮಾರ್ ಸುಮನ್ ಭಾನುವಾರ ರಾತ್ರಿಯಿಂದ ನಿರಂತರವಾಗಿ ಮಳೆಯಾಗುತ್ತಿದೆ ಎಂದು ಹೇಳಿದ್ದಾರೆ. ಡೆಹ್ರಾಡೂನ್, ಬಾಗೇಶ್ವರ್, ನೈನಿತಾಲ್ ಮತ್ತು ಚಂಪಾವತ್ ಪೀಡಿತ ಪ್ರದೇಶಗಳಾಗಿವೆ.
"ಇಡೀ ರಾಜ್ಯದಲ್ಲಿ ಮಳೆಯಾಗಲಿದೆ. ಮತ್ತು ಮಳೆ ನಿರಂತರವಾಗಿ ಮುಂದುವರಿಯುತ್ತದೆ. ಸಂಜೆ ಸ್ವಲ್ಪ ಸಮಯದ ಅಂತರವಿರುತ್ತದೆ. ಇದಾದ ನಂತರ, ರಾತ್ರಿಯೂ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತದೆ" ಎಂದು ಸುಮನ್ ಸುದ್ದಿ ಸಂಸ್ಥೆ ANI ಗೆ ತಿಳಿಸಿದರು.
ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಮತ್ತು ಅಂತಹ ಪರಿಸ್ಥಿತಿಗಳಲ್ಲಿ ಏನು ಮಾಡಬೇಕೆಂದು ಜನರಿಗೆ ತಿಳಿಸಲಾಗುತ್ತಿದೆ ಎಂದು ಅವರು ಹೇಳಿದರು.