

ಬೆಂಗಳೂರು: ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಕಳಂಕಿತ ಸಚಿವರನ್ನು ಸಂಪುಟದಿಂದ ವಜಾಗೊಳಿಸಬೇಕು. ಇಲ್ಲದಿದ್ದರೆ ನಾವು ವಿಧಾನಸಭೆ ಕಲಾಪ ನಡೆಯಲು ಬಿಡುವುದಿಲ್ಲ ಎಂದು ಗುಡುಗಿದ ಬೆನ್ನಲ್ಲೇ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ನೂತನ ಸಚಿವ ಬಿ ನಾಗೇಂದ್ರ ಅವರಿಗೆ ಹೈಕೋರ್ಟ್ ಸೋಮವಾರ ಬಿಗ್ ರಿಲೀಫ್ ನೀಡಿದೆ.
ದೆಹಲಿಗೆ ತೆರಳಲು ಅನುಮತಿ ಕೋರಿದ್ದ ಬಿ.ನಾಗೇಂದ್ರ ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ನಾಗೇಂದ್ರ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಕೋರ್ಟ್ ಅನುಮತಿಯಿಲ್ಲದೆ ಕರ್ನಾಟಕ ಬಿಟ್ಟು ತೆರಳದಂತೆ ವಿಧಿಸಿದ್ದ ಷರತ್ತಿಗೆ ತಡೆ ನೀಡಿದೆ.
ರಾಜ್ಯ ಬಿಟ್ಟು ತೆರಳದಂತೆ ಇದ್ದ ಷರತ್ತಿಗೆ ತಡೆ ನಿಡಿದ್ದು, ಕೋರ್ಟ್ ಅನುಮತಿ ಇಲ್ಲದೇ ದೇಶ ಬಿಟ್ಟು ತೆರಳುವಂತಿಲ್ಲ ಎಂಬ ಷರತ್ತು ಮಾರ್ಪಾಡು ಮಾಡಿ ಆದೇಶ ಹೊರಡಿಸಿದೆ. ಅಲ್ಲದೇ ಈ ಸಂಬಂಧ ಆಕ್ಷೇಪಣೆ ಸಲ್ಲಿಸಲು ಇಡಿಗೆ ಆಗಸ್ಟ್ 12ರವರೆಗೆ ಕಾಲಾವಕಾಶ ನೀಡಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಜಾಮೀನಿನ ಮೇಲೆ ಹೊರಗಿರುವ ನಾಗೇಂದ್ರ ಅವರು, ಇತ್ತೀಚಿಗೆ ವಿಸ್ತರಣೆಯಾದ ಡಿಕೆ ಶಿವಕುಮಾರ್ ನೇತೃತ್ವದ ಸಂಪುಟದಲ್ಲಿ ಸಚಿವ ಸ್ಥಾನ ಪಡೆದಿದ್ದಾರೆ. ನಾಗೇಂದ್ರ ಇಡಿ ತನಿಖೆ ಎದುರಿಸುತ್ತಿದ್ದು, ಜಾಮೀನಿನ ಮೇಲೆ ಹೊರಗಿದ್ದಾರೆ.
ಆದರೆ ನಾಗೇಂದ್ರ ಅವರು ಜಾಮೀನು ಷರತ್ತು ಉಲ್ಲಂಘಿಸಿ ದೆಹಲಿಗೆ ಭೇಟಿ ನೀಡಿದ್ದಾರೆ. ಅನುಮತಿಯನ್ನೇ ಪಡೆಯದೆ ನಾಗೇಂದ್ರ ಅವರು ಕಳೆದ ಜುಲೈ 17ರಂದು ದೆಹಲಿಗೆ ಹೋಗಿದ್ದರ ಮಾಹಿತಿ ಲಭ್ಯವಾಗಿದೆ. ಸಂಬಂಧ ವಿಪಕ್ಷ ಬಿಜೆಪಿ ಧ್ವನಿ ಎತ್ತಿದ್ದು, ಕೋರ್ಟ್ ಷರತ್ತು ಉಲ್ಲಂಘಿಸಿದ ನಾಗೇಂದ್ರರನ್ನು ಕ್ಯಾಬಿನೆಟ್ನಿಂದ ವಜಾ ಮಾಡುವಂತೆ ಆಗ್ರಹಿಸುತ್ತಿದೆ.
ನಾಗೇಂದ್ರ ಎರಡು ಬಾರಿ ದೆಹಲಿಗೆ ಭೇಟಿ ನೀಡಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದು, ಸಚಿವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.