

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ನೀಡಿದ ಅಂಕಿಅಂಶಗಳು, ಅವರದೇ ಸರ್ಕಾರದ ಅಧಿಕೃತ ದಾಖಲೆಗಳಿಗೆ ವಿರುದ್ಧವಾಗಿವೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ಗ್ಯಾರಂಟಿ ಯೋಜನೆಗಳಡಿ ಇದುವರೆಗೆ ಖರ್ಚು ಮಾಡಿರುವ ಪ್ರತಿಯೊಂದು ರೂಪಾಯಿ ಹಾಗೂ ಫಲಾನುಭವಿಗಳ ಸಂಪೂರ್ಣ ವಿವರಗಳನ್ನು ಒಳಗೊಂಡ ಶ್ವೇತಪತ್ರವನ್ನು ಸರ್ಕಾರ ಹೊರಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸ್ವಾತಂತ್ರ್ಯ ದಿನವು ಜನರ ಮುಂದೆ ಸತ್ಯವನ್ನು ಹೇಳುವ ದಿನವಾಗಿದ್ದು, ಅನುಕೂಲಕರ ಅಂಕಿಅಂಶಗಳನ್ನು ಸೃಷ್ಟಿಸುವ ದಿನವಲ್ಲ ಎಂದು ಹೇಳಿರುವ ಬಿಜೆಪಿ ನಾಯಕರು, ಮುಖ್ಯಮಂತ್ರಿ ಕರ್ನಾಟಕದ ಜನರಿಗೆ ವಿವರಣೆ ನೀಡಬೇಕಿದೆ ಎಂದು ಆರೋಪಿಸಿದ್ದಾರೆ.
ಗ್ಯಾರಂಟಿ ಗೋಲ್ಮಾಲ್: ಕರ್ನಾಟಕದ ಅಂಕಿಅಂಶಗಳು ತಾಳೆಯಾಗುತ್ತಿಲ್ಲ. ಸ್ವಾತಂತ್ರ್ಯ ದಿನದಂದೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮದೇ ಸರ್ಕಾರದ ಅಧಿಕೃತ ದಾಖಲೆಗಳಿಗೆ ವಿರುದ್ಧವಾದ ಅಂಕಿಅಂಶಗಳನ್ನು ನೀಡಿ ಕರ್ನಾಟಕದ ಜನರನ್ನು ದಾರಿ ತಪ್ಪಿಸಲು ಮುಂದಾಗಿದ್ದಾರೆ. ಇದು ಇನ್ನು ರಾಜಕೀಯ ವಾಕ್ಚಾತುರ್ಯದ ಪ್ರಶ್ನೆಯಲ್ಲ. ಇದು ಸಾರ್ವಜನಿಕ ಹೊಣೆಗಾರಿಕೆ ಮತ್ತು ತೆರಿಗೆದಾರರ ಹಣಕ್ಕೆ ಸಂಬಂಧಿಸಿದ ಮೂಲಭೂತ ಪ್ರಶ್ನೆಯಾಗಿದೆ, ಎಂದು ಅಶೋಕ ಹೇಳಿದ್ದಾರೆ.
ಪ್ರತಿ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ತಿಂಗಳಿಗೆ 2,000 ರೂ. ನೆರವು ನೀಡುವ ಗೃಹಲಕ್ಷ್ಮಿ ಯೋಜನೆ ಕುರಿತು ಅಶೋಕ ಅವರು, ಕರ್ನಾಟಕ ಸರ್ಕಾರ ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧಿಕೃತ ಮಾಹಿತಿಯ ಪ್ರಕಾರ ಫಲಾನುಭವಿಗಳ ಸಂಖ್ಯೆ 1.24 ಕೋಟಿ (1,24,48,000) ಎಂದು ತಿಳಿಸಿದ್ದಾರೆ.
2026ರ ಮೇ 25ರಂದು ಮುಖ್ಯಮಂತ್ರಿಗಳ ಕಚೇರಿಯೂ ಇದೇ ಅಂಕಿಅಂಶವನ್ನು ಉಲ್ಲೇಖಿಸಿತ್ತು. ಆದರೆ ನಿನ್ನೆ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಡಿ ಕೆ ಶಿವಕುಮಾರ್ ಅವರು 1.28 ಕೋಟಿ ಫಲಾನುಭವಿಗಳಿದ್ದಾರೆ ಎಂದು ಹೇಳಿದ್ದಾರೆ ಎಂದು ಅಶೋಕ ಆರೋಪಿಸಿದ್ದಾರೆ.
ಹಾಗಾದರೆ ಈ ಹೆಚ್ಚುವರಿ 4 ಲಕ್ಷ ಫಲಾನುಭವಿಗಳು ಏಕಾಏಕಿ ಎಲ್ಲಿಂದ ಬಂದರು? ಅವರು ಯಾರು? ಈ ಹೆಚ್ಚುವರಿ ಹಣ ಪಾವತಿಗೆ ಅನುಮತಿ ನೀಡಿದವರು ಯಾರು? ಮುಖ್ಯವಾಗಿ, ಯಾರ ಖಾತೆಗಳಿಗೆ ಈ ಹಣ ಜಮೆಯಾಗಿದೆ? ಎಂದು ಅವರು ಪ್ರಶ್ನಿಸಿದ್ದಾರೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ನೀಡುವ ಶಕ್ತಿ ಯೋಜನೆ ಕುರಿತು ಅಶೋಕ ಅವರು, 2026ರ ಜೂನ್ 11ರಂದು ಮುಖ್ಯಮಂತ್ರಿಗಳ ಕಚೇರಿ ಯೋಜನೆಗೆ 19,771 ಕೋಟಿ ರೂ. ವೆಚ್ಚವಾಗಿದೆ ಎಂದು ತಿಳಿಸಿತ್ತು ಎಂದಿದ್ದಾರೆ.
ಇದಕ್ಕೂ ಮುನ್ನ ಮೇ 25ರಂದು ಮುಖ್ಯಮಂತ್ರಿಗಳ ಕಚೇರಿ ನೀಡಿದ್ದ ಮಾಹಿತಿಯಲ್ಲಿ ವೆಚ್ಚ 18,943 ಕೋಟಿ ರೂ. ಎಂದು ಹೇಳಲಾಗಿತ್ತು.
ಆದರೆ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಮುಖ್ಯಮಂತ್ರಿ ಕೇವಲ 14,875 ಕೋಟಿ ರೂ. ವೆಚ್ಚವಾಗಿದೆ ಎಂದು ಹೇಳಿದ್ದಾರೆ. ಒಂದೇ ಸರ್ಕಾರ. ಒಂದೇ ಯೋಜನೆ. ಮೂರು ವಿಭಿನ್ನ ಅಂಕಿಅಂಶಗಳು — ಸಾವಿರಾರು ಕೋಟಿ ರೂಪಾಯಿಗಳ ವ್ಯತ್ಯಾಸ ಎಂದು ಅಶೋಕ್ ಹೇಳಿದ್ದಾರೆ.
ಹಾಗಾದರೆ ಯಾವ ಅಂಕಿಅಂಶ ಸರಿಯಾಗಿದೆ? ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಪ್ಪು ಹೇಳುತ್ತಿದ್ದಾರೆಯೇ? ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಪ್ಪು ಹೇಳುತ್ತಿದ್ದಾರೆಯೇ? ಅಥವಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ತಪ್ಪು ಹೇಳುತ್ತಿದ್ದಾರೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.
ಕರ್ನಾಟಕದ ತೆರಿಗೆದಾರರಿಗೆ ಮತ್ತೊಂದು ದಾರಿತಪ್ಪಿಸುವ ಸ್ಪಷ್ಟನೆಯ ಬದಲು ಉತ್ತರ ಬೇಕಾಗಿದೆ ಎಂದು ಅಶೋಕ ಹೇಳಿದ್ದಾರೆ.
ಸರ್ಕಾರವು ತನ್ನದೇ ಇಲಾಖೆಗಳು, ಸಚಿವರು, ಅಧಿಕೃತ ಪ್ರಕಟಣೆಗಳು ಮತ್ತು ಅನುಷ್ಠಾನ ಸಮಿತಿಗಳು ಪರಸ್ಪರ ವಿರುದ್ಧವಾದ ಲೆಕ್ಕಗಳನ್ನು ನೀಡುತ್ತಿರುವಾಗ, ಇಷ್ಟೊಂದು ದೊಡ್ಡ ಗ್ಯಾರಂಟಿ ಯೋಜನೆಗಳ ಮೂಲಕ ಸಾರ್ವಜನಿಕ ಹಣವನ್ನು ಖರ್ಚು ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಇದು ಕೇವಲ ಲೆಕ್ಕಪತ್ರದ ವ್ಯತ್ಯಾಸವಾಗಿದ್ದರೆ, ಸರಿಪಡಿಸಿದ ಅಂಕಿಅಂಶಗಳನ್ನು ತಕ್ಷಣ ಪ್ರಕಟಿಸಬೇಕು. ಹಾಗಿಲ್ಲದಿದ್ದರೆ, ಪ್ರತಿಯೊಂದು ರೂಪಾಯಿ ಎಲ್ಲಿಗೆ ಹೋಗಿದೆ ಎಂಬುದನ್ನು ಕರ್ನಾಟಕದ ಜನರು ತಿಳಿದುಕೊಳ್ಳುವ ಹಕ್ಕು ಹೊಂದಿದ್ದಾರೆ ಎಂದು ಅಶೋಕ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರವು ಘೋಷಣೆಗಳು ಮತ್ತು ಜಾಹೀರಾತುಗಳಿಂದ ಕರ್ನಾಟಕದ ತೆರಿಗೆದಾರರನ್ನು ಮರುಳುಗೊಳಿಸಬಹುದು ಎಂಬಂತೆ ವರ್ತಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ ಅವರು, ಗ್ಯಾರಂಟಿ ಯೋಜನೆಗಳಡಿ ಖರ್ಚಾದ ಪ್ರತಿಯೊಂದು ರೂಪಾಯಿ ಮತ್ತು ಒಳಗೊಂಡಿರುವ ಪ್ರತಿಯೊಬ್ಬ ಫಲಾನುಭವಿಯ ವಿವರಗಳನ್ನು ಒಳಗೊಂಡ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದರ ಜತೆಗೆ, ಪ್ರತಿಯೊಂದು ಗ್ಯಾರಂಟಿ ಯೋಜನೆಯ ಸಂಪೂರ್ಣ ಲೆಕ್ಕಪರಿಶೋಧಿತ ವರದಿ, ನಿಖರವಾದ ಫಲಾನುಭವಿಗಳ ಡೇಟಾಬೇಸ್ ಹಾಗೂ ವೆಚ್ಚದ ಅಂಕಿಅಂಶಗಳನ್ನು ಪ್ರಕಟಿಸಬೇಕು. ಸರ್ಕಾರದ ವಿವಿಧ ಇಲಾಖೆಗಳು, ಗ್ಯಾರಂಟಿ ಅನುಷ್ಠಾನ ಸಮಿತಿ ಮತ್ತು ಮುಖ್ಯಮಂತ್ರಿಗಳ ಹೇಳಿಕೆಗಳ ನಡುವಿನ ಪ್ರತಿಯೊಂದು ವ್ಯತ್ಯಾಸಕ್ಕೂ ಸ್ಪಷ್ಟನೆ ನೀಡಬೇಕು ಎಂದು ಅಶೋಕ ಒತ್ತಾಯಿಸಿದ್ದಾರೆ.