

ತೊಂದರೆಗೆ ಸಿಲುಕಿರುವ ನಾಗರಿಕರು ಪೊಲೀಸ್ ಠಾಣೆಗೆ ತೆರಳುವ ಅಗತ್ಯವಿಲ್ಲದೆ ತ್ವರಿತವಾಗಿ ಮೊದಲ ಮಾಹಿತಿ ವರದಿ (FIR) ದಾಖಲಿಸಲು ಸಹಾಯ ಮಾಡುವ ಏಜೆಂಟಿಕ್ ಕೃತಕ ಬುದ್ಧಿಮತ್ತೆ (AI) ವ್ಯವಸ್ಥೆಯನ್ನು ಅಳವಡಿಸುವ ಕುರಿತು ಸರ್ಕಾರ ಪರಿಶೀಲಿಸುತ್ತಿದೆ.
ಪೊಲೀಸಿಂಗ್ನಲ್ಲಿ ಎಐ ಬಳಕೆಯಾಗಬಹುದಾದ ಹಲವು ಮಾರ್ಗಗಳಲ್ಲಿ ಇದು ಒಂದು ಉದಾಹರಣೆಯಾಗಬಹುದು. ಗೃಹ, ಐಟಿ ಮತ್ತು ಇ-ಆಡಳಿತ ಇಲಾಖೆ ಈಗಾಗಲೇ ಆಂಥ್ರೋಪಿಕ್ ಮತ್ತು ಸರ್ವಂ ಸೇರಿದಂತೆ ತಂತ್ರಜ್ಞಾನ ಕಂಪನಿಗಳೊಂದಿಗೆ ಈ ಕುರಿತು ಮಾತುಕತೆ ನಡೆಸುತ್ತಿದೆ.
ನಾಗರಿಕರಿಗೆ ತಕ್ಷಣ ಏನು ಮಾಡಬೇಕು ಎಂಬುದು ತಿಳಿಯದಂತಹ ಸಂದರ್ಭಗಳಲ್ಲಿ ಅವರು ಬಳಸಬಹುದಾದ ಏಜೆಂಟಿಕ್ ಎಐ ವ್ಯವಸ್ಥೆಯನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಹಿಟ್ ಆಂಡ್ ರನ್ ಪ್ರಕರಣ ಅಥವಾ ಕಳ್ಳತನ ನಡೆದಾಗ, ನಾಗರಿಕರು ಏಜೆಂಟಿಕ್ ಎಐ ಬಳಸಿ ಜೀರೋ ಎಫ್ಐಆರ್ ಅಥವಾ ಇ-ಎಫ್ಐಆರ್ ದಾಖಲಿಸಬಹುದು. ಬಳಿಕ ಹೆಚ್ಚಿನ ಪ್ರಕ್ರಿಯೆಗಳಿಗಾಗಿ ದೂರುದಾರರಿಗೆ 24ರಿಂದ 48 ಗಂಟೆಗಳ ಒಳಗಾಗಿ ಪೊಲೀಸ್ ಠಾಣೆಗೆ ಭೇಟಿ ನೀಡುವ ಅವಕಾಶ ಇರುತ್ತದೆ ಎಂದು ಅವರು ಹೇಳಿದರು.
ಪ್ರಸ್ತಾವಿತ ಸೌಲಭ್ಯವನ್ನು ಬಳಸಲು ನಾಗರಿಕರಿಗೆ ಯಾವ ರೀತಿಯ ತಂತ್ರಜ್ಞಾನ ಒದಗಿಸಬೇಕು ಎಂಬುದನ್ನು ಸರ್ಕಾರ ಇನ್ನೂ ಅಂತಿಮಗೊಳಿಸುತ್ತಿದೆ. ಸುಳ್ಳು ದೂರುಗಳು ದಾಖಲಾಗುವ ಸಾಧ್ಯತೆಯನ್ನೂ ಸರ್ಕಾರ ಪರಿಗಣಿಸುತ್ತಿದೆ. ಈ ಯೋಜನೆ ಇನ್ನೂ ಚರ್ಚಾ ಹಂತದಲ್ಲಿದೆ ಎಂದು ಅವರು ತಿಳಿಸಿದರು.
ಈ ಸುಧಾರಣೆಯನ್ನು ಅಂತಿಮಗೊಳಿಸಿದ ಬಳಿಕ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸರ್ಕಾರದ ನಾಗರಿಕರ ಅಹವಾಲು ನಿರ್ವಹಣಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಿಸುವ ಹಾಗೂ ಸರ್ಕಾರಿ ಪ್ರಕ್ರಿಯೆಗಳನ್ನು ಮರು ವಿನ್ಯಾಸಗೊಳಿಸುವ ಉದ್ದೇಶದಿಂದ ರಚಿಸಿರುವ ಹೊಸ ‘ಪ್ರಜಾಸೇವಾ’ ಇಲಾಖೆಯ ವ್ಯಾಪ್ತಿಗೆ ಇದು ಬರುವ ಸಾಧ್ಯತೆ ಇದೆ.
ಪೊಲೀಸ್ ಠಾಣೆಗೆ ಭೇಟಿ ನೀಡದೆ ನಾಗರಿಕರಿಗೆ ಎಫ್ಐಆರ್ ದಾಖಲಿಸುವ ಅವಕಾಶ ಕಲ್ಪಿಸುವ ಸರ್ಕಾರದ ಇದು ಎರಡನೇ ಪ್ರಯತ್ನವಾಗಿದೆ.
2014ರಲ್ಲಿ ಬೆಂಗಳೂರಿನ ಮಲ್ಲೇಶ್ವರಂನ ಮಂತ್ರಿ ಮಾಲ್ನಲ್ಲಿ ಪೊಲೀಸರು ಭಾರತದ ಮೊದಲ ರಿಮೋಟ್ ಎಫ್ಐಆರ್ ಕೇಂದ್ರ ಎಂದು ಹೇಳಲಾಗಿದ್ದ ವ್ಯವಸ್ಥೆಯನ್ನು ಆರಂಭಿಸಿದ್ದರು. ಇದಕ್ಕೆ Cisco ತಂತ್ರಜ್ಞಾನ ಸಹಾಯ ಒದಗಿಸಿತ್ತು.
ಎಟಿಎಂ ಮಾದರಿಯ ಕಿಯೋಸ್ಕ್ಗೆ ನಾಗರಿಕರು ತೆರಳಿ, ವಿಡಿಯೋ ಮೂಲಕ ಟ್ರಾಫಿಕ್ ಮ್ಯಾನೇಜ್ಮೆಂಟ್ ಸೆಂಟರ್ನಲ್ಲಿದ್ದ ಪೊಲೀಸ್ ಅಧಿಕಾರಿಯೊಂದಿಗೆ ಮಾತನಾಡಿ ದೂರು ನೀಡಬಹುದಾಗಿತ್ತು. ಬಳಿಕ ಡಿಜಿಟಲ್ ಸಹಿ ಹೊಂದಿದ ಎಫ್ಐಆರ್ ನ್ನು ಪಡೆಯಬಹುದಾಗಿತ್ತು.
ಆದರೆ 2016ರ ಜನವರಿಯ ವೇಳೆಗೆ ಆಡಳಿತಾತ್ಮಕ ಸಮಸ್ಯೆಗಳ ಕಾರಣ ಈ ಯೋಜನೆಯನ್ನು ಸ್ಥಗಿತಗೊಳಿಸಲಾಯಿತು.
ಪೊಲೀಸ್ ಸುಧಾರಣೆ, ಆಧುನೀಕರಣದ ಪರಿಶೀಲನೆ ಹಾಗೂ ಕ್ಯಾಡರ್ ಮತ್ತು ನೇಮಕಾತಿ ನಿಯಮಗಳ ಮರುಪರಿಶೀಲನೆಗಾಗಿ ಪ್ರಿಯಾಂಕ್ ಖರ್ಗೆ ಮೂರು ಸಮಿತಿಗಳನ್ನು ರಚಿಸಲಿದ್ದಾರೆ.
ಈ ಸಮಿತಿಗಳ ನೇತೃತ್ವವನ್ನು ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರು ವಹಿಸಲಿದ್ದಾರೆ ಎಂದು ಅವರು ಹೇಳಿದರು.
ಸೈಬರ್ ಅಪರಾಧಗಳ ಹೆಚ್ಚಳ ಹಾಗೂ ಫೋರೆನ್ಸಿಕ್ ಕ್ಷೇತ್ರದಲ್ಲಿನ ಪ್ರಗತಿಯಿಂದ ಪೊಲೀಸರ ಕೆಲಸದ ಸ್ವರೂಪ ಬದಲಾಗಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಗೆ ಹೊಸ ಕ್ಯಾಡರ್ ಮತ್ತು ನೇಮಕಾತಿ ನಿಯಮಗಳ ಅಗತ್ಯವಿದೆ ಎಂದು ಸರ್ಕಾರ ಭಾವಿಸಿದೆ. ಇದರ ಜೊತೆಗೆ ನೇಮಕಾತಿ ವೇಳಾಪಟ್ಟಿಯನ್ನೂ ಸಿದ್ಧಪಡಿಸುವ ಯೋಜನೆ ರೂಪಿಸಲಾಗುತ್ತಿದೆ.