ಬೆಂಗಳೂರಿನಲ್ಲಿ ನಕಲಿ ಔಷಧ ದಂಧೆ ಹಿಂದೆ ದುಬೈ ಕಿಂಗ್‌ಪಿನ್ ಸಂಪರ್ಕ: ಆರೋಗ್ಯ ಸಚಿವ ಯು.ಟಿ ಖಾದರ್

ಈ ದಂಧೆಯ ಪ್ರಮುಖ ನಿರ್ವಾಹಕ ದುಬೈನಲ್ಲಿ ಇದ್ದಾನೆ ಎಂದು ತಿಳಿದುಬಂದಿದ್ದು, ದಂಧೆಯ ಹಿಂದೆ ಇರುವ ಶಂಕಿತ ಜಾಲದ ತನಿಖೆಗಾಗಿ ಕೇಂದ್ರ ಸರ್ಕಾರದ ಮಧ್ಯಸ್ಥಿಕೆ ಕೋರಲು ರಾಜ್ಯ ಸರ್ಕಾರ ಮುಂದಾಗಿದೆ.
U T Khader
ಯು ಟಿ ಖಾದರ್
Updated on

ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದಲ್ಲಿ ಬಹುರಾಷ್ಟ್ರೀಯ ಔಷಧ ಕಂಪನಿಗಳ ಲೇಬಲ್‌ಗಳನ್ನು ಬಳಸಿರುವ ನಕಲಿ ಔಷಧಗಳ ದಂಧೆ ಪತ್ತೆಯಾಗಿದ್ದು, 5 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ನಕಲಿ ಔಷಧಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಬುಧವಾರ ತಿಳಿಸಿದ್ದಾರೆ.

ಅಂತಾರಾಜ್ಯ ತನಿಖೆಗೆ ಆಗ್ರಹಿಸಿರುವ ಅವರು, ದೇಶದ ಇತರ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಕಲಿ ಔಷಧ ತಯಾರಿಕಾ ಘಟಕಗಳೊಂದಿಗೆ ಈ ದಂಧೆಗೆ ಸಂಪರ್ಕ ಇರುವ ಸಾಧ್ಯತೆ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ.

ಈ ದಂಧೆಯ ಪ್ರಮುಖ ನಿರ್ವಾಹಕ ದುಬೈನಲ್ಲಿ ಇದ್ದಾನೆ ಎಂದು ತಿಳಿದುಬಂದಿದ್ದು, ದಂಧೆಯ ಹಿಂದೆ ಇರುವ ಶಂಕಿತ ಜಾಲದ ತನಿಖೆಗಾಗಿ ಕೇಂದ್ರ ಸರ್ಕಾರದ ಮಧ್ಯಸ್ಥಿಕೆ ಕೋರಲು ರಾಜ್ಯ ಸರ್ಕಾರ ಮುಂದಾಗಿದೆ. ದೇಶಾದ್ಯಂತ ನಕಲಿ ಔಷಧಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

ನಿನ್ನೆ ಸಾಯಂಕಾಲ ಬೀಟ್ ಪೊಲೀಸರಿಗೆ ಈ ದಂಧೆಯ ಬಗ್ಗೆ ಮಾಹಿತಿ ಲಭಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಮಾಹಿತಿ ದೊರೆತ ತಕ್ಷಣ ಔಷಧ ನಿಯಂತ್ರಣ ಇಲಾಖೆ ಹಾಗೂ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆಯುಕ್ತಾಲಯದ ಅಧಿಕಾರಿಗಳು ಬಿಡದಿಯಲ್ಲಿರುವ ಫಾರ್ಮ್‌ಹೌಸ್‌ವೊಂದರ ಮೇಲೆ ದಾಳಿ ನಡೆಸಿದರು. ಇಲ್ಲಿ ನಕಲಿ ಔಷಧಗಳನ್ನು ಸಂಗ್ರಹಿಸಿ, ಮರುಪ್ಯಾಕಿಂಗ್ ಮಾಡಿ ಔಷಧ ಮಳಿಗೆಗಳು ಹಾಗೂ ಆಸ್ಪತ್ರೆಗಳಿಗೆ ಪೂರೈಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.

U T Khader
ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಕಲಿ ಔಷಧಿ ಮರುಪ್ಯಾಕಿಂಗ್ ಬೃಹತ್ ಜಾಲ ಪತ್ತೆ: 5 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ!

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಭುದೇವ್ ಎಂಬಾತನನ್ನು ಬಂಧಿಸಲಾಗಿದೆ. ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

ತೆಲಂಗಾಣ, ಹಿಮಾಚಲ ಪ್ರದೇಶ ಸೇರಿದಂತೆ ದೇಶದ ಇತರ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಕಲಿ ಔಷಧ ತಯಾರಿಕಾ ಘಟಕಗಳೊಂದಿಗೆ ಈ ದಂಧೆಗೆ ಸಂಪರ್ಕ ಇರುವ ಸಾಧ್ಯತೆ ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ ಎಂದು ಹೇಳಿದರು.

ಆರೋಪಿಗಳು ಅತ್ಯಂತ ಕಡಿಮೆ ಬೆಲೆಗೆ ಔಷಧಗಳನ್ನು ಖರೀದಿಸಿ, ಬಹುರಾಷ್ಟ್ರೀಯ ಔಷಧ ಕಂಪನಿಗಳ ಹೆಸರು ಮತ್ತು ಲೇಬಲ್‌ಗಳನ್ನು ಅಂಟಿಸಿ ಮರುಪ್ಯಾಕಿಂಗ್ ಮಾಡುತ್ತಿದ್ದರು. ಬಳಿಕ ಅವುಗಳನ್ನು ಆಸ್ಪತ್ರೆಗಳು ಮತ್ತು ಔಷಧ ಮಳಿಗೆಗಳಿಗೆ ಪೂರೈಸುತ್ತಿದ್ದರು ಎಂದು ಆರೋಪಿಸಲಾಗಿದೆ.

ಐಸಿಯುಗಳಲ್ಲಿ ಬಳಸುವ ಮಾತ್ರೆಗಳನ್ನೂ ನಕಲು ಮಾಡಿ ಬಹುರಾಷ್ಟ್ರೀಯ ಕಂಪನಿಗಳ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದೆ. 20,000 ರೂಪಾಯಿ ಬೆಲೆಯ ಇಂಜೆಕ್ಷನ್‌ವೊಂದನ್ನು 5,000 ರೂಪಾಯಿಗಳಿಂದ 6,000 ರೂಪಾಯಿಗೆ ಆಸ್ಪತ್ರೆಗಳಿಗೆ ಪೂರೈಸಲಾಗುತ್ತಿದೆ. ಇದು ಕರ್ನಾಟಕಕ್ಕೆ ಮಾತ್ರ ಸೀಮಿತವಾದ ಸಮಸ್ಯೆಯಲ್ಲ ಎಂದು ವಿವರಿಸಿದರು.

ನಕಲಿ ಔಷಧಗಳನ್ನು ಸಂಗ್ರಹಿಸಿದ್ದ ಸ್ಥಳವು ಮಾನ್ಯ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿತ್ತು ಎಂದು ಸಚಿವರು ತಿಳಿಸಿದರು. ನಕಲಿ ಔಷಧಗಳಿಗೆ ಬಳಸಲಾದ ಲೇಬಲ್‌ಗಳು ಮತ್ತು ಸ್ಟಿಕ್ಕರ್‌ಗಳನ್ನು ಸ್ಥಳೀಯವಾಗಿಯೇ ತಯಾರಿಸಲಾಗಿತ್ತೇ ಅಥವಾ ಬೇರೆ ಮೂಲಗಳಿಂದ ತರಲಾಗಿತ್ತೇ ಎಂಬ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಆರೋಪಿಗಳು ಆಸ್ಪತ್ರೆಗಳಿಂದಲೇ ಲೇಬಲ್‌ಗಳು ಮತ್ತು ಸ್ಟಿಕ್ಕರ್‌ಗಳನ್ನು ಪಡೆದು ಅವುಗಳನ್ನು ನಕಲಿ ಔಷಧಗಳಿಗೆ ಬಳಸಿರುವ ಸಾಧ್ಯತೆಯಿದೆ ಎಂದು ನಾವು ಶಂಕಿಸುತ್ತಿದ್ದೇವೆ ಎಂದು ಖಾದರ್ ಹೇಳಿದರು.

ಈ ದಂಧೆಯಲ್ಲಿ ಹಲವು ಹಂತಗಳಿವೆ ಎಂದು ಸಚಿವರು ತಿಳಿಸಿದರು. ಕಚ್ಚಾ ವಸ್ತುಗಳು ಮತ್ತು ಔಷಧಗಳ ಖರೀದಿ, ಸಾಗಣೆ, ಮರುಪ್ಯಾಕಿಂಗ್, ವಿತರಣೆ ಹಾಗೂ ಆಸ್ಪತ್ರೆಗಳಿಗೆ ಪೂರೈಕೆ ಸೇರಿದಂತೆ ಹಲವು ಹಂತಗಳನ್ನು ಒಳಗೊಂಡಿರುವ ಸಾಧ್ಯತೆಯಿದೆ. ಇದೀಗ ಮಧ್ಯವರ್ತಿಗಳು ಯಾರು ಹಾಗೂ ಯಾವ ಆಸ್ಪತ್ರೆಗಳು ಮತ್ತು ಔಷಧ ಮಳಿಗೆಗಳು ಈ ನಕಲಿ ಔಷಧಗಳನ್ನು ಪಡೆದಿವೆ ಎಂಬುದನ್ನು ಪತ್ತೆಹಚ್ಚಲು ಅಧಿಕಾರಿಗಳು ಮುಂದಾಗಿದ್ದಾರೆ.

ಮುಖ್ಯ ಆರೋಪಿ ಪ್ರಶಾಂತ್ ದುಬೈನಲ್ಲಿ ಇರುವ ಸಾಧ್ಯತೆಯಿದೆ. ತೇಜಸ್ ಸ್ಥಳೀಯವಾಗಿ ಕಾರ್ಯಾಚರಣೆ ನಡೆಸುತ್ತಿದ್ದ ವ್ಯಕ್ತಿ ಎಂದು ಗುರುತಿಸಲಾಗಿದೆ. ಬಂಧಿತ ಪ್ರಭುದೇವ್‌ನನ್ನು ವಿಚಾರಣೆ ನಡೆಸಲಾಗುತ್ತಿದ್ದು, ಇಡೀ ಪೂರೈಕೆ ಜಾಲದ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಯು ಟಿ ಖಾದರ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com