

ಶಿವಮೊಗ್ಗ: ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಒಂದು ದೂರದ ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯೊಬ್ಬರು, 'ಪರಿಸರ'ವನ್ನು ಬೋಧನಾ ಮಾಧ್ಯಮವನ್ನಾಗಿ ಬಳಸಿಕೊಂಡು ಶಿಕ್ಷಣ ನೀಡುವಲ್ಲಿ ತೋರಿದ ಶ್ರೇಷ್ಠತೆಗಾಗಿ 'ರಾಷ್ಟ್ರೀಯ ಶ್ರೇಷ್ಠ ಶಿಕ್ಷಕ ಪ್ರಶಸ್ತಿ'ಗೆ ಆಯ್ಕೆಯಾಗಿದ್ದಾರೆ.
ಹೊಸನಗರ ತಾಲೂಕಿನ ಸಮಟಗಾರಿನ ಗ್ರಾಮದವರಾದ ರತ್ನಕುಮಾರಿ ಎಸ್. ಅವರನ್ನು ಕೇಂದ್ರ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ. ದೇಶಾದ್ಯಂತ ಈ ಗೌರವಕ್ಕೆ ಆಯ್ಕೆಯಾದ 48 ಶಿಕ್ಷಕರಲ್ಲಿ ಇವರೂ ಒಬ್ಬರು.
TNSE ಜೊತೆಗೆ ಮಾತನಾಡಿದ ರತ್ನಾಕುಮಾರಿ, ಇದು ಸುಮಾರು 56 ಮಕ್ಕಳು ವ್ಯಾಸಂಗ ಮಾಡುತ್ತಿರುವ (ಅದರಲ್ಲಿ ಕಾಲು ಭಾಗದಷ್ಟು ಮಕ್ಕಳು ಸಮಟಗಾರಿನ ಗ್ರಾಮದವರೇ ಆಗಿದ್ದಾರೆ) ನನ್ನ ಈ ದೂರದ ಹಳ್ಳಿಯ ಶಾಲೆಗೆ ಸಂದ ಗೌರವ ಎಂದು ಹೇಳಿದ್ದಾರೆ.
ಪೋಷಕರು, ಸಹ ಶಿಕ್ಷಕರು, ಎಸ್ಡಿಎಂಸಿ (SDMC) ಸದಸ್ಯರು ಮತ್ತು ಹಳೆಯ ವಿದ್ಯಾರ್ಥಿಗಳ ನಿರಂತರ ಬೆಂಬಲದಿಂದಾಗಿ ಶಾಲೆಯು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಶಾಲೆಯ ಮತ್ತು ಮಕ್ಕಳಲ್ಲಿನ ಈ ಬದಲಾವಣೆಗೆ ಸಾಮೂಹಿಕ ಪ್ರಯತ್ನವೇ ಕಾರಣ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಬಿ.ಕಾಂ (B.Com) ಪದವಿ ಪೂರೈಸಿದ ನಂತರ, ರತ್ನಕುಮಾರಿ ತಮ್ಮ ಬಾಲ್ಯದ ಕನಸಾಗಿದ್ದ ಟಿಸಿಎಚ್ (TCH - Teacher Certificate Higher) ಕೋರ್ಸ್ಗೆ ಸೇರಿದರು. ಅವರು ಕಳೆದ 24 ವರ್ಷಗಳಿಂದ ಈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಪ್ರಕೃತಿಯನ್ನು ಬೋಧನಾ ಸಾಧನವನ್ನಾಗಿ ಬಳಸಿಕೊಂಡು ಮಕ್ಕಳ-ಕೇಂದ್ರಿತ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ.
ಪೂರ್ಣಚಂದ್ರ ತೇಜಸ್ವಿ ಅವರ ಪುಸ್ತಕಗಳಿಂದ ಪ್ರೇರೇಪಿತರಾದ ರತ್ನಕುಮಾರಿ, ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಯೂ ಮಧ್ಯಾಹ್ನದ ಸಮಯದಲ್ಲಿ ಪುಸ್ತಕಗಳನ್ನು ಓದುವಂತೆ ನೋಡಿಕೊಳ್ಳುತ್ತಾರೆ. ಶಾಲೆಯ ಗ್ರಂಥಾಲಯದ ನಿರ್ವಹಣೆಯನ್ನೂ ವಿದ್ಯಾರ್ಥಿಗಳೇ ಮಾಡುತ್ತಾರೆ.