

ದಕ್ಷಿಣ ಕನ್ನಡ: ಹೌದು ಇದು ಅಚ್ಚರಿ ಅನಿಸಿದರು ನಿಜ. ಪೌರಕಾರ್ಮಿಕರೊಬ್ಬರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಕೇಂದ್ರದ ಬಿ.ಸಿ. ರೋಡ್ಗೆ ಕಸ ಗುಡಿಸಲು ಐಷರಾಮಿ ಫಾರ್ಚೂನರ್ ಕಾರಿನಲ್ಲಿ ಬರುತ್ತಿದ್ದಾರೆ.
ಸ್ವತಃ ತಾವೇ ಕಾರು ಚಾಲನೆ ಮಾಡುತ್ತಾ ಬರುವ ಪೌರಕಾರ್ಮಿಕ ಸೇಸಪ್ಪಣ್ಣ (ಸೇಸಪ್ಪ ನಾವೂರು), ತಮ್ಮ ಫಾರ್ಚೂನರ್ ಅನ್ನು ಪೊಲೀಸ್ ಸ್ಟೇಷನ್ ಹತ್ತಿರ ನಿಲ್ಲಿಸಿ ಕೆಳಗಿಳಿದು ನೇರ ಪೊರಕೆ ತೆಗೆದುಕೊಂಡು ಊರೆಲ್ಲಾ ಸ್ವಚ್ಛ ಮಾಡಲು ಹೊರಡುತ್ತಾರೆ. ಇಡೀ ಬಿ.ಸಿ. ರೋಡಿನ ಪೇಟೆಯ ಸ್ವಚ್ಛತೆ ಮಾಡಿದ ಬಳಿಕ ತನ್ನ ಕರ್ತವ್ಯ ನಿರ್ವಹಿಸಿ, ಮಧ್ಯಾಹ್ನ ಆಗುತ್ತಿದ್ದಂತೆ ಮತ್ತೆ ಅದೇ ಕಾರಿನಲ್ಲಿ ತಮ್ಮ ಮನೆಗೆ ಮರಳುತ್ತಾರೆ.
ಇದನ್ನು ನೀವು ನಂಬಲು ಸಾಧ್ಯವಿಲ್ಲದಿದ್ದರೂ ಇದು ಅಕ್ಷರಶಃ ನಿಜ.. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಇಂತಹದೊಂದು ಅಪರೂಪದ ದೃಶ್ಯ ಪ್ರತಿದಿನ ಕಂಡುಬರುತ್ತೆ.
ಯಾರು ಈ ಪೌರಕಾರ್ಮಿಕ?
ಸೇಸಪ್ಪ ವೃತ್ತಿಯಲ್ಲಿ ಪೌರಕಾರ್ಮಿಕರು. ಆದರೆ ಇವರ ಹತ್ತಿರ ಇರೋದು ಮಾತ್ರ 35 ಲಕ್ಷ ರೂಪಾಯಿ ಮೌಲ್ಯದ ಫಾರ್ಚೂನರ್ ಕಾರು.. 50 ರೂಪಾಯಿ ದಿನಗೂಲಿಯಿಂದ ಬದುಕು ಆರಂಭಿಸಿದ ಈ ವ್ಯಕ್ತಿ, ಇಂದು ಐಷಾರಾಮಿ ಕಾರಿನಲ್ಲಿ ಓಡಾಡುವ ಹಂತಕ್ಕೆ ಬೆಳೆದಿದ್ದು ಹೇಗೆ? ತಂದೆಯ ಅಂತ್ಯಸಂಸ್ಕಾರಕ್ಕೂ ಹಣವಿಲ್ಲದೆ ಪರದಾಡಿದ್ದ ಈ ಜೀವ, ಇಂದು ಇಡೀ ರಾಜ್ಯಕ್ಕೆ ಮಾದರಿಯಾಗಿದ್ದು ಹೇಗೆ? ಸೇಸಪ್ಪ ಅವರ ಈ ರೋಚಕ ಜರ್ನಿ ಹೇಗಿತ್ತು? ಒಂದು ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.
ಸೇಸಪ್ಪಣ್ಣ ಅವರಿಗೆ ಕಾರುಗಳ ಕುರಿತು ಮೊದಲಿನಿಂದಲೂ ಸಿಕ್ಕಾಪಟ್ಟೆ ವ್ಯಾಮೋಹ ಇತ್ತು. ಹಿಂದೆ ಸೈಕಲ್ನಲ್ಲಿ ಸಂಚರಿಸುತ್ತಿದ್ದಾಗಲೇ, ಕಾರುಗಳನ್ನು ಖರೀದಿಸಬೇಕು ಎಂಬ ಹಂಬಲವಿತ್ತು. ಸ್ವಲ್ಪ ಹಣ ಕೂಡಿಟ್ಟು ಮಾರುತಿ 800 ಖರೀದಿಸಿದರು. ಬಳಿಕ ಓಮ್ನಿ, ರಿಜ್ಝ್ ತೆಗೆದುಕೊಂಡು ಬಳಿಕ ಒಂದೊಂದಾಗಿ ಮಾರಿದರೂ ತಾನು ಖರೀದಿಸಿದ ಆಲ್ಟೊ ಮತ್ತು ಸ್ಕಾರ್ಪಿಯೋ ಒಟ್ಟಿಗೆ ಇಟ್ಟುಕೊಂಡಿದ್ದರು. ಇದೀಗ ಇವೆರಡನ್ನೂ ಮಾರಿ ಕಳೆದ ಎಂಟು ದಿನಗಳ ಹಿಂದೆ ಸೆಕೆಂಡ್ ಹ್ಯಾಂಡ್ ಫಾರ್ಚೂನರ್ ಕಾರು ಖರೀದಿಸುವ ಮೂಲಕ ಗಮನ ಸೆಳೆದಿದ್ದಾರೆ.
ಕೃಷಿ, ಹೈನುಗಾರಿಕೆಯೊಂದಿಗೆ ಆರ್ಥಿಕವಾಗಿ ಗಟ್ಟಿಯಾಗಿರುವ ಸೇಸಪ್ಪಣ್ಣ, ಫಾರ್ಚೂನರ್ ಕಾರಲ್ಲಿ ಬರುವುದು ಅಚ್ಚರಿಯೇನಲ್ಲ. ಆದರೆ ಲವಲೇಶವೂ ಅಹಂಕಾರ ತೋರದೇ, ತಮ್ಮ ಪಾಡಿಗೆ ಸ್ವಚ್ಛತಾ ಕಾರ್ಯ ನಡೆಸುವ ಸ್ಥಿತಪ್ರಜ್ಞತೆ ಹೊಂದಿರುವುದು ಇತರರಿಗೆ ಮಾದರಿಯಾಗಿದೆ.
ಫಾರ್ಚೂನರ್ ಇದ್ದರೂ ಕಾಯಕ ಮರೆಯದ ಕಾರ್ಮಿಕ
ಸೇಸಪ್ಪಣ್ಣ ಅವರು ತಮ್ಮ ಬಳಿ ಫಾರ್ಚೂನರ್ ಕಾರಿದೆ ಎಂದು ಅವರು ತಮ್ಮ ಕೆಲಸಕ್ಕೆ ವಿದಾಯ ಹೇಳಿಲ್ಲ. ಕಾಯಕವೇ ಕೈಲಾಸ ಎಂದು ನಂಬಿರುವ ಅವರು, ಎಂದಿನಂತೆ ಬೆಳಗ್ಗೆ 5 ಗಂಟೆಗೆ ಬಿ.ಸಿ. ರೋಡಿನ ಕೋರ್ಟ್ ಬಳಿ ಕಾರಿನಲ್ಲಿ ಬಂದು ಪೊರಕೆ ಹಿಡಿದು ನೇರವಾಗಿ ಸ್ವಚ್ಛತಾ ಕಾರ್ಯಕ್ಕೆ ಇಳಿಯುತ್ತಾರೆ.
ಕೃಷಿ, ಹೈನುಗಾರಿಕೆಯನ್ನೂ ಅಷ್ಟೇ ಅಚ್ಚುಕಟ್ಟಾಗಿ ನಿರ್ವಹಿಸುವ ನಾವೂರು ಮೂಲದ ಸೇಸಪ್ಪಣ್ಣ ಅವರು ಕಷ್ಟದ ಹಾದಿಯಲ್ಲೇ ಮುನ್ನಡೆದವರು. ಕಳೆದ ಮೂವತ್ತು ವರ್ಷಗಳಲ್ಲಿ ಅವರು ಮಾಡದ ಕೆಲಸವಿಲ್ಲ. ಯಾವ ಕೆಲಸವೂ ಸಣ್ಣದಲ್ಲ, ಯಾವುದೂ ದೊಡ್ಡದಲ್ಲ ಎಂಬುದೇ ಅವರ ಪಾಲಿಸಿ.