

ಬೆಂಗಳೂರು: ಸರ್ಕಾರಿ ಗುತ್ತಿಗೆದಾರರಾಗಿ ಗೌತಮ್ ಅದಾನಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಡಿ.ಕೆ. ಶಿವಕುಮಾರ್- ಅದಾನಿ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದಾನಿ ಬಗ್ಗೆ ನಮ್ಮ ಅಭಿಪ್ರಾಯ ಏನೇ ಇರಬಹುದು. ಚಿತ್ತಾಪುರದಲ್ಲಿ ಎಸಿಸಿ ಸಿಮೆಂಟ್ ಕಾರ್ಖಾನೆಯನ್ನು ಅದಾನಿ ಖರೀದಿಸಿದ್ದಾರೆ. ಕಾನೂನುಬದ್ಧವಾಗಿ ಉತ್ಪಾದನೆ ಮತ್ತು ವ್ಯವಹಾರ ನಡೆಸುವುದಕ್ಕೆ ಸರ್ಕಾರದ ಯಾವುದೇ ಆಕ್ಷೇಪಣೆ ಇಲ್ಲ. ಅದೇ ರೀತಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡುವುದರಲ್ಲೂ ತಪ್ಪಿಲ್ಲ ಎಂದರು.
ಸರ್ಕಾರದ ಎರಡು ಯೋಜನೆಗಳಲ್ಲಿ ಅದಾನಿ ಎಲ್-1 ಆಗಿದ್ದಾರೆ. ನಮ್ಮ ರಾಜ್ಯಕ್ಕೆ ಆ ಯೋಜನೆಗಳು ಮುಖ್ಯವಾಗಿವೆ. ನಾವು ಟೆಂಡರ್ ಮೇಲೆ ಪರಿಣಾಮ ಬೀರಲು ಆಗುವುದಿಲ್ಲ. ಎಲ್-1 ಆಗಿರುವುದರಿಂದ ಸೌಜನ್ಯಕ್ಕಾಗಿ ಭೇಟಿ ಆಗಿರಬಹುದು. ನಮಗೆ ಅವರು ಗುತ್ತಿಗೆದಾರ ಅಷ್ಟೇ ಎಂದರು.
ಕೇಂದ್ರ ಸರ್ಕಾರ ಅಂಬಾನಿ, ಅದಾನಿ ಗುಲಾಮರು ಎಂಬುದು ನಮ್ಮ ಅಭಿಪ್ರಾಯ. ಆದರೆ, ನ್ಯಾಯಯುತವಾಗಿ ಟೆಂಡರ್ ಪಡೆದಿದ್ದರೆ ಏನು ಮಾಡುವುದು, ನಮಗೆ ಕೆಲಸ ಮಾಡಿಸುವುದು ಮುಖ್ಯ. ಅದು ಅಂಬಾನಿ, ಅದಾನಿ ಅಥವಾ ಅಂಬರೀಷ್ ಯಾರೇ ಆಗಿರಬಹುದು.
ನಾವು ಬೇರೆಯವರಿಗೆ ಟೆಂಡರ್ ಕೊಟ್ಟಿದ್ದರೆ ಹಗರಣ ಎನ್ನುತ್ತಿದ್ದೀರಿ. ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿದೆ. ಅದಕ್ಕಾಗಿ ಅವರು ಭೇಟಿ ಆಗಿರಬಹುದು ಎಂದು ಸಮರ್ಥಿಸಿಕೊಂಡರು.
ಬಿಜೆಪಿ ನಾಯಕರು ಸುರಂಗ ಮಾರ್ಗ ಮಾಡಬೇಕೆಂದು ಹೇಳುತ್ತಾರೊ, ಬೇಡ ಎನ್ನುತ್ತಾರಾ? ಸಂಸದರು ಈ ಹಿಂದೆ ಬಾಯಿ ಬಡಿದುಕೊಳ್ಳುತ್ತಿದ್ದರು. ಈಗ ಅವರ ನೆಂಟರಿಗೆ ಸಿಕ್ಕಿದೆ. ನೆಂಟರು, ಬೀಗರು ಟೆಂಡರ್ ಹಾಕಬಹುದು. ನಾವು ಬೇಡ ಎನ್ನಲು ಆಗುತ್ತದೆಯೇ ಎಂದೂ ಪ್ರಶ್ನಿಸಿದರು.