

ಬೆಂಗಳೂರು: ಸಿದ್ದರಾಮಯ್ಯ ನನ್ನ ಹೆಸರನ್ನು ಮುಖ್ಯಮಂತ್ರಿ ಹುದ್ದೆಗೆ ಶಿಫಾರಸು ಮಾಡಿದ್ದರು, ಆದರೆ ಹೈಕಮಾಂಡ್ ಸ್ಕೀಮ್ ಬೇರೆಯೇ ಇತ್ತು ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿ ಮಾಡಿದ್ದು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದರು, ಸಿದ್ದರಾಮಯ್ಯ ಮತ್ತು ನಾನು ಹಲವು ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ.
ನಾನು 8 ವರ್ಷಗಳ ಕಾಲ ಪಿಸಿಸಿ ಅಧ್ಯಕ್ಷನಾಗಿದ್ದೆ. ನಾವು ಒಟ್ಟಿಗೆ ಕೆಲಸ ಮಾಡಿದ್ದೇವೆ. ನಂತರ ನಾನು 2015 ರಲ್ಲಿ ಗೃಹ ಸಚಿವರಾಗಿ ಅವರ ಸಂಪುಟಕ್ಕೆ ಸೇರಿದೆ. 2023 ರಲ್ಲಿ ನಾನು ಅವರ ಮಂತ್ರಿ ಮಂಡಲ ಸೇರಿದೆ. ನಾವು ಒಟ್ಟಿಗೆ ಕೆಲಸ ಮಾಡಿದ್ದೇವೆ, ಅವರಿಗೆ ನನ್ನ ಬಗ್ಗೆ ಚೆನ್ನಾಗಿ ತಿಳಿದಿದೆ ಎಂದಿದ್ದಾರೆ.
ನಿನ್ನೆ ಅವರು ನನ್ನನ್ನು ಸಿಎಂ ಹುದ್ದೆಗೆ ಶಿಫಾರಸು ಮಾಡಿದ್ದಾರೆಂದು ಹೇಳಿದ್ದರಲ್ಲಿ ನನಗೆ ಆಶ್ಚರ್ಯವಿಲ್ಲ. ನಾಲ್ಕೈದು ಉಪಮುಖ್ಯ ಮಂತ್ರಿಗಳನ್ನು ಮಾಡುವ ಯೋಜನೆಯಿತ್ತು, ಆದರೆ ಸಿದ್ದರಾಮಯ್ಯ ಅವರು ಕೇವಲ ಒಬ್ಬರಿಗೆ ಡಿಸಿಎಂ ಹುದ್ದೆ ನೀಡಬೇಕೆಂದು ಹೇಳಿ ನನ್ನ ಹೆಸರನ್ನು ಹೈಕಮಾಂಡ್ ಬಳಿ ಶಿಫಾರಸು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಕೇಂದ್ರಕ್ಕೆ ಬರ ಅಧ್ಯಯನಕ್ಕೆ ಮನವಿ ಸಲ್ಲಿಸುವ ವಿಚಾರದ ಬಗ್ಗೆ ಮಾತನಾಡಿದ ಡಿಸಿಎಂ ಪರಮೇಶ್ವರ್, ಕೇಂದ್ರ ಸರ್ಕಾರದ 2020ರ ಮಾರ್ಗಸೂಚಿ ಪ್ರಕಾರವೇ ಬರ ಪೀಡಿತ ಪ್ರದೇಶ ಘೋಷಿಸಬೇಕಾಗುತ್ತದೆ. ಸದ್ಯ 102 ತಾಲೂಕುಗಳಲ್ಲಿ ನಿಯಮದಡಿ ವರದಿ ಬಂದಿದ್ದು, ವಸ್ತುಸ್ಥಿತಿ ಅಧ್ಯಯನ ನಡೆಸಲಾಗಿದೆ. ಈ ತಿಂಗಳ ಅಂತ್ಯದಲ್ಲಿ ಸಚಿವ ಸಂಪುಟದಲ್ಲಿ ಚರ್ಚಿಸಿ, ಕೇಂದ್ರಕ್ಕೆ ಅಧಿಕೃತ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ನೂರು ಕೇಸ್ ಸಿಐಡಿಗೆ ಹಸ್ತಾಂತರ ವಿಚಾರದ ಬಗ್ಗೆ ಮಾತನಾಡಿದ ಅವರು, ರೆಗ್ಯೂಲರ್ ಆಗಿ ಇಂಥಾ ಘಟನೆ ಆದಾಗ, ಸರ್ಕಾರಕ್ಕೆ ಅನುಮಾನ, ಡೌಟ್ ಬಂದಾಗ ಅದನ್ನ ಸಿಐಡಿಗೆ ಕೊಡ್ತಾರೆ. ಅದೇ ರೀತಿ ಮಾಡಿದ್ದಾರೆ, ಇದರಲ್ಲಿ ಹೊಸದೇನೂ ಇಲ್ಲ ಎಂದು ಸ್ಪಷ್ಟನೆ ಕೊಟ್ಟರು