

ಧಾರವಾಡ: ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ಗರಗ ಗ್ರಾಮದ ಮೌಲಾಸಾಬ್(28) ಎಂಬ ವ್ಯಕ್ತಿ ತನ್ನ ಪತ್ನಿ ಸಲ್ಮಾಳನ್ನು(21) ಕೊಲೆ ಮಾಡಿ, ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತನ್ನ ಒಂದೂವರೆ ವರ್ಷದ ಮಗುವಿನ ಎದುರೇ ಮೌಲಾಸಾಬ್ ಪತ್ನಿಯನ್ನು ಕೊಲೆ ಮಾಡಿ ನೇಣಿಗೆ ಶರಣಾಗಿದ್ದಾನೆ. ಮೂರು ವರ್ಷಗಳ ಹಿಂದಷ್ಟೇ ಇವರ ಮದುವೆಯಾಗಿತ್ತು. ಇದೀಗ ತಂದೆ-ತಾಯಿಯನ್ನು ಕಳೆದುಕೊಂಡು ಮಗು ಅನಾಥವಾಗಿದೆ.
ತಡರಾತ್ರಿವರೆಗೂ ಮನೆಯಲ್ಲಿ ಏನೂ ಶಬ್ದ ಬಾರದೇ ಇದ್ದಿದ್ದರಿಂದ ವೃದ್ಧೆಯೊಬ್ಬರು ಹೋಗಿ ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ನಮ್ಮ ಮಗಳು ಸಲ್ಮಾಗೆ ಅತ್ತೆ, ಮಾವನ ಕಾಟ ಇತ್ತು. ಈ ಕಾಟಕ್ಕೆ ತನ್ನ ಮಗಳನ್ನೇ ಬಲಿ ಪಡೆದುಕೊಂಡಿದ್ದಾರೆ. ಅಳಿಯನ ಕಾಟ ಏನೂ ಇರಲಿಲ್ಲ. ಕೂಲಿ ಮಾಡುತ್ತಿದ್ದ ಆತನಿಗೆ ನಾವೇ ಸಹಾಯ ಮಾಡುತ್ತಿದ್ದೆವು. ನನ್ನ ಮಗಳು ಸಣ್ಣವಳು. ಆಕೆಯಲ್ಲಿ ಚುರುಕುತನ ಇರಲಿಲ್ಲ ಎಂದು ಸಲ್ಮಾ ತಾಯಿ ಆರೋಪಿಸಿದ್ದಾರೆ.
ಘಟನೆ ನಡೆದ ತಕ್ಷಣ ಸ್ಥಳಕ್ಕೆ ಎಸ್ಪಿ ಗುಂಜನ್ ಆರ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.