ಜಾಗೃತರಾಗದ ಸೈಟ್ ಮಾಲೀಕರು; ಕೇವಲ ಶೇ. 30 ರಷ್ಟು ಖಾಲಿ ನಿವೇಶನ ಮಾತ್ರ ಸ್ವಚ್ಛ; ಇನ್ಮುಂದೆ GBAಯಿಂದಲೇ ಕ್ಲೀನಿಂಗ್, ಬೀಳಲಿದೆ ಭಾರಿ ಆಸ್ತಿ ತೆರಿಗೆ..!

ಜಿಬಿಎ ಸ್ವಚ್ಛಗೊಳಿಸುವವರೆಗೆ ಕಾಯುವುದಕ್ಕಿಂತ ಕಡಿಮೆ ವೆಚ್ಚದಲ್ಲಿ ನೀವೇ ಕೆಲಸ ಮಾಡಿಸಿಕೊಳ್ಳಬಹುದು. ನಿಮ್ಮ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ ಹಾಗೂ ನಗರವನ್ನು ಸ್ವಚ್ಛವಾಗಿಡುವ ಪ್ರಯತ್ನಕ್ಕೆ ಕೈಜೋಡಿಸಿ.
Garbage dumped near a vacant plot at Guddadahalli
ಗುಡ್ಡದಹಳ್ಳಿಯ ಖಾಲಿ ಜಾಗದ ಬಳಿ ಸುರಿದಿರುವ ಕಸ.
Updated on

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಖಾಲಿ ಬಿದ್ದಿರುವ ಸೈಟ್‌ಗಳ ಮಾಲೀಕರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಬಿಗ್ ಶಾಕ್ ನೀಡಿದೆ. ಸರ್ಕಾರದ ಸರಣಿ ಗಡುವುಗಳ ಹೊರತಾಗಿಯೂ ಬೆಂಗಳೂರಿನ ಕೇವಲ ಶೇ. 30 ರಷ್ಟು ಖಾಲಿ ನಿವೇಶನಗಳನ್ನು ಮಾತ್ರ ಮಾಲೀಕರು ಸ್ವಚ್ಛಗೊಳಿಸಿದ್ದು, ಬಾಕಿ ಉಳಿದಿರುವ ಶೇ. 70 ರಷ್ಟು ಜಾಗಗಳಿಗಾಗಿ ಜಿಬಿಎ ಇಂದಿನಿಂದ ಕಡ್ಡಾಯ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದೆ.

ಇನ್ಮುಂದೆ ಅಧಿಕಾರಿಗಳೇ ಖಾಲಿ ಸೈಟ್‌ಗಳನ್ನು ಸ್ವಚ್ಛಗೊಳಿಸಲಿದ್ದು, ಅದರ ಸಂಪೂರ್ಣ ವೆಚ್ಚವನ್ನು ಮಾಲೀಕರ ಆಸ್ತಿ ತೆರಿಗೆಯಲ್ಲೇ ವಸೂಲಿ ಮಾಡಲಾಗುವುದು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಖಡಕ್ ಎಚ್ಚರಿಕೆ ನೀಡಿದ್ದಾರೆ.

ದೊಮ್ಮಲೂರಿನಲ್ಲಿ ಖಾಲಿ ನಿವೇಶನಗಳ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಮಾಲೀಕರು ತಮ್ಮ ನಿವೇಶನಗಳನ್ನು ಸ್ವತಃ ಸ್ವಚ್ಛಗೊಳಿಸುವುದು ಉತ್ತಮ. ಜಿಬಿಎ ಕ್ರಮ ಕೈಗೊಂಡು ಸ್ವಚ್ಛಗೊಳಿಸುವುದಕ್ಕಿಂತ ಕಡಿಮೆ ವೆಚ್ಚದಲ್ಲಿ ಮಾಲೀಕರೇ ಈ ಕೆಲಸ ಮಾಡಿಸಿಕೊಳ್ಳಬಹುದು ಎಂದು ಹೇಳಿದರು.

ಖಾಲಿ ನಿವೇಶನಗಳನ್ನು ಜಿಬಿಎ ಸ್ವಚ್ಛಗೊಳಿಸಿದರೆ, ಅದರ ಸ್ವಚ್ಛತೆ ಹಾಗೂ ತ್ಯಾಜ್ಯ ಸಾಗಣೆ ವೆಚ್ಚವನ್ನು ಆಸ್ತಿ ತೆರಿಗೆಯೊಂದಿಗೆ ಮಾಲೀಕರಿಂದಲೇ ವಸೂಲಿ ಮಾಡಲಾಗುವುದು. ಆದರೆ, ಪದೇಪದೆ ನಿಯಮ ಉಲ್ಲಂಘಿಸುವವರ ವಿರುದ್ಧ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.

ಜಿಬಿಎ ಸ್ವಚ್ಛಗೊಳಿಸುವವರೆಗೆ ಕಾಯುವುದಕ್ಕಿಂತ ಕಡಿಮೆ ವೆಚ್ಚದಲ್ಲಿ ನೀವೇ ಕೆಲಸ ಮಾಡಿಸಿಕೊಳ್ಳಬಹುದು. ನಿಮ್ಮ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ ಹಾಗೂ ನಗರವನ್ನು ಸ್ವಚ್ಛವಾಗಿಡುವ ಪ್ರಯತ್ನಕ್ಕೆ ಕೈಜೋಡಿಸಿ. ತಮ್ಮ ನಿವೇಶನಗಳನ್ನು ಸ್ವಚ್ಛಗೊಳಿಸಿರುವವರಿಗೆ ನಾನು ವೈಯಕ್ತಿಕವಾಗಿ ಧನ್ಯವಾದ ಪತ್ರ ಕಳುಹಿಸುತ್ತೇನೆ’ ಎಂದು ಹೇಳಿದರು.

Garbage dumped near a vacant plot at Guddadahalli
GBA: ಖಾಲಿ ನಿವೇಶನ ಸ್ವಚ್ಛಗೊಳಿಸದ, ಡೆಬ್ರಿಸ್ ತೆರವುಗೊಳಿಸದ ಮಾಲೀಕರೆ ಎಚ್ಚರ! 19 ಸಾವಿರ ರೂ ನಿಂದ 1.28 ಲಕ್ಷವರೆಗೂ ಬೀಳಲಿದೆ ದಂಡ!

ನಿರ್ದೇಶನದ ಹೊರತಾಗಿಯೂ ಅನೇಕ ಮಾಲೀಕರು ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಿಲ್ಲ. ಇದರಿಂದ ಅಲ್ಲಿ ಕಳೆ-ಗಿಡಗಳು ಬೆಳೆದು ವಿವಿಧ ಸಮಸ್ಯೆಗಳು ಉಂಟಾಗುತ್ತಿವೆ. ಇಂತಹ ನಿವೇಶನಗಳು ಸೊಳ್ಳೆ, ನೊಣ, ಹಾವು ಹಾಗೂ ಇಲಿಗಳಿಗೆ ಆಶ್ರಯ ತಾಣಗಳಾಗಿವೆ.

ನಗರವನ್ನು ಸ್ವಚ್ಛವಾಗಿಡುವ ಉದ್ದೇಶದಿಂದ ಈ ಕಾರ್ಯಾಚರಣೆ ಆರಂಭಿಸಲಾಗಿದೆ. ಟಿಪ್ಪರ್‌ಗಳ ಸಂಚಾರಕ್ಕೆ ಇರುವ ನಿರ್ಬಂಧಗಳ ಹಿನ್ನೆಲೆಯಲ್ಲಿ ತ್ಯಾಜ್ಯವನ್ನು ದಿನಕ್ಕೆ ಒಂದು ಬಾರಿ ಮಾತ್ರ ಸಾಗಿಸಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.

ನಿವೇಶನದ ವಿಸ್ತೀರ್ಣಕ್ಕೆ ಅನುಗುಣವಾಗಿ ಎಸ್‌ಆರ್‌ ದರದ ಆಧಾರದ ಮೇಲೆ ಸ್ವಚ್ಛತಾ ವೆಚ್ಚವನ್ನು ನಿಗದಿಪಡಿಸಲಾಗಿದೆ. ಆಗಸ್ಟ್‌ 1ರಂದು ‘ತ್ಯಾಜ್ಯದಿಂದ ಮುಕ್ತಿ’ ಅಭಿಯಾನ ಆರಂಭಿಸಿದ ಬಳಿಕ ಜಿಬಿಎ 67,152 ಟನ್‌ ನಿರ್ಮಾಣ ಮತ್ತು ಕಟ್ಟಡ ತ್ಯಾಜ್ಯ (ಸಿ&ಡಿ) ತೆರವುಗೊಳಿಸಿದೆ ಎಂದು ಮಾಹಿತಿ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com