

ತುಮಕೂರು: ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕನಿಕಲಬಂಡೆ ಗ್ರಾಮದ ರೈತರೊಬ್ಬರ ಹೊಲದಲ್ಲಿ ಬೋರ್ವೆಲ್ ಮೋಟಾರ್ ಆನ್ ಮಾಡುತ್ತಿದ್ದಂತೆ ನಾಡ ಬಾಂಬ್ ಸ್ಫೋಟಗೊಂಡಿದ್ದು, ಮತ್ತೊಂದು ಜೀವಂತ ನಾಡ ಬಾಂಬ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ರೈತ ಗಿರಿಯಪ್ಪ ತಮ್ಮ ಜಮೀನಿನಲ್ಲಿ ಬೋರ್ವೆಲ್ ಮೋಟಾರ್ ಆನ್ ಮಾಡಿದ ತಕ್ಷಣ ಈ ಸ್ಫೋಟ ಸಂಭವಿಸಿದೆ. ಅದೃಷ್ಟವಶಾತ್ ಗಿರಿಯಪ್ಪ ಅವರು ಅಪಾಯದಿಂದ ಪಾರಾಗಿದ್ದಾರೆ. ಆದರೆ ಘಟನೆಯಿಂದ ಗ್ರಾಮಸ್ಥರು ತೀವ್ರ ಆತಂಕಗೊಂಡಿದ್ದಾರೆ.
ಪಂಪ್ಹೌಸ್ನ ಮೂಲೆಯಲ್ಲಿ ಪರಿಶೀಲಿಸಿದಾಗ ಮತ್ತೊಂದು ಬಾಂಬ್ ಪತ್ತೆಯಾಗಿದೆ. ಘಟನೆ ಬಗ್ಗೆ ಮಾತನಾಡಿದ ರೈತ ಗಿರಿಯಪ್ಪ, ಕಳೆದ 3 ತಿಂಗಳ ಹಿಂದೆ ವೆಂಕಟೇಶ್ ಎನ್ನುವರು ತಮ್ಮ ಜಮೀನಿಗೆ ಪ್ರವೇಶಿಸಿ ಈ ಜಮೀನು ನಮಗೆ ಸೇರಿದ್ದು ಎಂದು ಪ್ರಾಣ ಬೆದರಿಕೆ ಹಾಕಿದ್ದ ಎಂದು ಆರೋಪಿಸಿದ್ದಾರೆ. ಅಲ್ಲದೆ ಈ ಸಂಬಂಧ ಪಾವಗಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದೇ ದ್ವೇಷದಿಂದ ಆತನೇ ಪಂಪ್ಹೌಸ್ನಲ್ಲಿ ಬಾಂಬ್ ಇಟ್ಟಿರುವ ಶಂಕೆ ಇದೆ ಎಂದು ರೈತ ತಿಳಿಸಿದ್ದಾನೆ.
ಇನ್ನು ಕನಿಕಲಬಂಡೆ ನಿವಾಸಿ ವೆಂಕಟೇಶ್ ಅವರೇ ಗಿರಿಯಪ್ಪ ಅವರ ಬೋರ್ವೆಲ್ನ ಮೋಟಾರ್ ಸ್ಟಾರ್ಟರ್ನಲ್ಲಿ ಬಾಂಬ್ ಇರಿಸಿದ್ದ ಆರೋಪಿ ಎಂದು ಪೊಲೀಸರು ಗುರುತಿಸಿದ್ದಾರೆ.
ಪೊಲೀಸರ ಪ್ರಕಾರ, ಆರೋಪಿ ವೆಂಕಟೇಶ್, ಗಿರಿಯಪ್ಪ ಅವರನ್ನು ಕೊಲ್ಲುವ ಉದ್ದೇಶದಿಂದ ನಾಡ ಬಾಂಬ್ ಇಟ್ಟಿದ್ದಾನೆ ಎಂದು ಹೇಳಲಾಗಿದೆ. ಅಲ್ಲದೆ ವೆಂಕಟೇಶ್ ಗ್ರಾಮಸ್ಥರಿಗೆ ಪಿಸ್ತೂಲ್ ಮತ್ತು ಬಾಂಬ್ಗಳಿಂದ ಬೆದರಿಕೆ ಹಾಕಿ ಹಣ ಮತ್ತು ಆಹಾರ ಧಾನ್ಯಗಳನ್ನು ಸುಲಿಗೆ ಮಾಡುತ್ತಿದ್ದನೆಂದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ನಂತರ ಆರೋಪಿ ತಲೆಮರೆಸಿಕೊಂಡಿದ್ದು, ಮಧುಗಿರಿ ಉಪ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಯ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಆರೋಪಿಯನ್ನು ಪತ್ತೆಹಚ್ಚುವ ಪ್ರಯತ್ನಗಳು ನಡೆಯುತ್ತಿವೆ.