

ನವದೆಹಲಿ: ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಯನ್ನು ವಿರೋಧಿಸಿರುವ ಸಂಸದ ತೇಜಸ್ವಿ ಸೂರ್ಯ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಫೆಬ್ರವರಿ 9 ರಿಂದ ಕರ್ನಾಟಕದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಮೆಟ್ರೋ ಪ್ರಯಾಣ ದರ ಏರಿಕೆಯನ್ನು ಜಾರಿಗೆ ತಂದಿದ್ದು, ವ್ಯಾಪಕ ಸಾರ್ವಜನಿಕ ವಿರೋಧವನ್ನು ಕಡೆಗಣಿಸಿ ಪ್ರಯಾಣಿಕರ ಮೇಲೆ ಅನಗತ್ಯ ಹೊರೆಯನ್ನು ಹೇರಿದೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಇಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿ ಮಾಡಿ ಈ ವಿಷಯದ ಬಗ್ಗೆ ಅವರಿಗೆ ತಿಳಿಸಲಾಯಿತು ಮತ್ತು ದರ ನಿಗದಿ ಸಮಿತಿಯನ್ನು ಪುನರ್ರಚಿಸುವಂತೆ ಕೋರಲಾಯಿತು ಎಂದು ತೇಜಸ್ವಿ ಸೂರ್ಯ ಎಕ್ಸ್ ಪೋಸ್ಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಸಮಿತಿಯ ಮುಂದೆ ಇರಿಸಲಾದ ದರ ಲೆಕ್ಕಾಚಾರಗಳಲ್ಲಿನ ಬಹು ವೈಪರೀತ್ಯಗಳನ್ನು ಎತ್ತಿ ತೋರಿಸಲಾಯಿತು, ತಪ್ಪಾದ base year ಬಳಕೆಯಿಂದ ಪ್ರಯಾಣಿಕರಿಂದ ಅಧಿಕ ಶುಲ್ಕ ವಸೂಲಿಯಾಗುತ್ತಿದೆ; ಗರಿಷ್ಠ ದರ ₹95ಕ್ಕೆ ಏರಿಸಲಾಗಿದೆ.
ಈ ದೋಷಪೂರಿತ ದರ ಪರಿಷ್ಕರಣೆ ಜಾರಿಗೆ ಬರಬಾರದು. ವಾರ್ಷಿಕ ದರ ಏರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಅಗತ್ಯವಿದ್ದರೆ ಹೊಸ ಸಮಿತಿಯ ಮೂಲಕ ಸಾರ್ವಜನಿಕ ಹಿತದೃಷ್ಟಿಯಿಂದ ನೂತನ ಮತ್ತು ಕೈಗೆಟಕುವ ದರ ನಿಗದಿಗೆ ಮನವಿ ಮಾಡಿದ್ದೇನೆ.
ಈ ದೋಷಪೂರಿತ ದರ ಪರಿಷ್ಕರಣೆಯನ್ನು ಮುಂದುವರಿಸಲು ರಾಜ್ಯ ಸರ್ಕಾರವನ್ನು ಅನುಮತಿಸಬಾರದು. ವಾರ್ಷಿಕ ದರ ಏರಿಕೆಯನ್ನು ತಡೆಹಿಡಿಯಬೇಕು ಮತ್ತು ಅಗತ್ಯವಿದ್ದರೆ, ಸಾರ್ವಜನಿಕ ಹಿತಾಸಕ್ತಿಯಲ್ಲಿ ದರಗಳಲ್ಲಿ ಸುಧಾರಣೆ ಜಾರಿಗೆ ತರಲು ಹೊಸ ದರ ನಿಗದಿ ಸಮಿತಿಯನ್ನು ರಚಿಸಬೇಕು ಎಂದು ವಿನಂತಿಸಲಾಗಿದೆ. ಈ ವಿಷಯವನ್ನು ಸಕಾರಾತ್ಮಕವಾಗಿ ಪರಿಗಣಿಸಲಾಗುವುದು ಎಂದು ಗೌರವಾನ್ವಿತ ಸಚಿವರು ಭರವಸೆ ನೀಡಿದರು. ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
Advertisement