Bandipur-Nagarahole ಸಫಾರಿ ಮತ್ತೆ ಆರಂಭ: ಕಟ್ಟುನಿಟ್ಟಿನ ನಿರ್ಬಂಧಗಳೊಂದಿಗೆ ಅನುಮತಿ, GPA ಟ್ರ್ಯಾಕಿಂಗ್ ಕಡ್ಡಾಯ..!

ಮಾನವ–ವನ್ಯಜೀವಿ ಸಂಘರ್ಷ ಹೆಚ್ಚಾದ ಹಿನ್ನೆಲೆಯಲ್ಲಿ, ಸಿಬ್ಬಂದಿ ಮತ್ತು ವಾಹನ ದುರುಪಯೋಗ ತಡೆಗಟ್ಟಲು ಹಾಗೂ ಇತರ ಮಹತ್ವದ ಅರಣ್ಯ ಕಾರ್ಯಗಳಿಗೆ ಒತ್ತು ನೀಡಲು ನವೆಂಬರ್ 7ರಿಂದ ಸಫಾರಿ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.
Tiger Attacks Jeep Carrying Family In Pilibhit Reserve
ಸಫಾರಿ ವಾಹನದ ಮೇಲೆ ಹುಲಿ ದಾಳಿ (ಸಂಗ್ರಹ ಚಿತ್ರ)
Updated on

ಬೆಂಗಳೂರು: 100 ದಿನಗಳ ಬಳಿಕ ಬಂಡಿಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಸಫಾರಿಯನ್ನು ಪುನರಾರಂಭಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಸಫಾರಿ ಪುನರಾರಂಭಿಸಲು ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ಅವರು ಅನುಮೋದನೆ ನೀಡಿದ್ದು, ಇನ್ನೆರಡು ದಿನಗಳಲ್ಲಿ ಸಫಾರಿ ಆರಂಭವಾಗಲಿದೆ.

ಮಾನವ–ವನ್ಯಜೀವಿ ಸಂಘರ್ಷ ಹೆಚ್ಚಾದ ಹಿನ್ನೆಲೆಯಲ್ಲಿ, ಸಿಬ್ಬಂದಿ ಮತ್ತು ವಾಹನ ದುರುಪಯೋಗ ತಡೆಗಟ್ಟಲು ಹಾಗೂ ಇತರ ಮಹತ್ವದ ಅರಣ್ಯ ಕಾರ್ಯಗಳಿಗೆ ಒತ್ತು ನೀಡಲು ನವೆಂಬರ್ 7ರಿಂದ ಸಫಾರಿ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.

ಇದೀಗ ಸಫಾರಿಯನ್ನು ಪುನರಾರಂಭಿಸಲಾಗುತ್ತಿದ್ದು, ಕಟ್ಟುನಿಟ್ಟಿನ ನಿರ್ಬಂಧಗಳೊಂದಿಗೆ ಅನುಮತಿ ನೀಡಲಾಗಿದೆ. ಪ್ರಾಯೋಗಿಕ ಹಂತದಲ್ಲಿ ದಿನಕ್ಕೆ ಗರಿಷ್ಠ 50 ಸಫಾರಿ ವಾಹನಗಳಿಗೆ ಮಾತ್ರ ಅನುಮತಿ ನೀಡಲಾಗುತ್ತಿದ್ದು, ಖಾಸಗಿ ವಾಹನಗಳಿಗೆ ನಿರ್ಬಂಧ ಹೇರಿ, ಸಫಾರಿ ಬಸ್‌ಗಳಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ.

‘ಬಂಡೀಪುರದಲ್ಲಿ ನವೆಂಬರ್‌ವರೆಗೆ ನಡೆಯುತ್ತಿದ್ದ ಟ್ರಿಪ್‌ ಸಮಯ ಮತ್ತು ವಾಹನ ಸಂಖ್ಯೆಯಲ್ಲಿ ಕಡಿತ ಮಾಡಿ ಪುನರಾರಂಭಕ್ಕೆ ಸಮ್ಮತಿಸಲಾಗಿದೆ. ಈ ಹಿಂದೆ ಬಂಡೀಪುರದಲ್ಲಿ 8 ಗಂಟೆಗಳ ಕಾಲ ಸಫಾರಿ ನಡೆಯುತ್ತಿತ್ತು. ಈಗ ಅದನ್ನು 5 ಗಂಟೆಗೆ ತಗ್ಗಿಸಲಾಗಿದೆ. ಅದೇ ರೀತಿ ಸುಂಕದಕಟ್ಟೆಯಲ್ಲಿ 6 ಗಂಟೆ ಹಾಗೂ ನಾಗರಹೊಳೆಯಲ್ಲಿ 4 ಗಂಟೆ ಕಾಲ ಮಾತ್ರ ಸಫಾರಿಗೆ ಮೊದಲ ಹಂತದಲ್ಲಿ ಅನುಮತಿ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tiger Attacks Jeep Carrying Family In Pilibhit Reserve
ಹುಲಿ ದಾಳಿಗೆ ವ್ಯಕ್ತಿ ಸಾವು: ನಾಗರಹೊಳೆ-ಬಂಡೀಪುರ ಸಫಾರಿ ಬಂದ್ ಮಾಡಿ, ಕಾರ್ಯಾಚರಣೆಗೆ ಸಿಬ್ಬಂದಿಗಳ ನಿಯೋಜಿಸಿ; ಅಧಿಕಾರಿಗಳಿಗೆ ಸಚಿವ ಖಂಡ್ರೆ ಸೂಚನೆ

ಸಫಾರಿ ವಾಹನಗಳನ್ನು ಕತ್ತಲಾದ ಬಳಿಕ ಹಾಗೂ ಹೆಚ್ಚುವರಿ ಅವಧಿಗೆ ಓಡಿಸುವುದು ಸೇರಿ ಎಲ್ಲ ಬಗೆಯ ದುರ್ಬಳಕೆ ತಡೆಗಟ್ಟಲು ಎರಡು ತಿಂಗಳಲ್ಲಿ ಎಲ್ಲ ಸಫಾರಿ ವಾಹನಗಳಿಗೆ ಎಂಜಿನ್‌ ಸಂಪರ್ಕಿತ ಜಿಪಿಎಸ್‌ ಮತ್ತು ಡ್ಯಾಷ್‌ ಕ್ಯಾಮ್ ಅಳವಡಿಸಬೇಕು ಎಂದು ಸೂಚಿಸಲಾಗಿದೆ ಎಂದು ಸಚಿವ ಈಶ್ವರ್ ಖಂಡ್ರೆಯವರು ಹೇಳಿದ್ದಾರೆ.

ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಭಾರತೀಯ ವನ್ಯಜೀವಿ ಸಂಸ್ಥೆ, ಭಾರತೀಯ ಅರಣ್ಯ ನಿರ್ವಹಣಾ ಸಂಸ್ಥೆಯ ಅಧಿಕಾರಿಗಳು ಮತ್ತು ತಜ್ಞರನ್ನು ಒಳಗೊಂಡ ತಾಂತ್ರಿಕ ಸಮಿತಿಯು ಸಲ್ಲಿಸಿದ ವರದಿಯ ಆಧಾರದ ಮೇಲೆ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಒಂದು ತಿಂಗಳ ಅವಧಿಯ ಪ್ರಯೋಗದ ಸಮಯದಲ್ಲಿ ಸಫಾರಿಗಳನ್ನು ಹಂತ ಹಂತವಾಗಿ ತೆರೆಯಲಾಗುತ್ತಿದೆ. ಸಮಿತಿಯು ಸಫಾರಿಗಳನ್ನು ತೆರೆಯುವುದರ ಪರಿಣಾಮಗಳನ್ನು ಪರಿಶೀಲಿಸುತ್ತದೆ. ನಂತರ ಅಂತಿಮ ವರದಿಯನ್ನು ಸಲ್ಲಿಸುತ್ತದೆ. ಇದನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದೊಂದಿಗೆ ಹಂಚಿಕೊಳ್ಳಲಾಗುತ್ತದೆ. ಅವರು ನೀಡುವ ಮಾಹಿತಿಗಳ ಆಧಾರದ ಮೇಲೆ, ಅನುಮತಿಸಲಾದ ವಾಹನಗಳ ಸಂಖ್ಯೆಯ ಕುರಿತು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.

ಸಫಾರಿ ಸ್ಥಗಿತಗೊಂಡಿದ್ದ ಅಕ್ಟೋಬರ್–ನವೆಂಬರ್ 2025 ಅವಧಿಯಲ್ಲಿ 28 ಹುಲಿಗಳನ್ನು ಹಿಡಿದು ಸ್ಥಳಾಂತರಿಸಲಾಗಿದೆ, ಅವುಗಳಲ್ಲಿ 13 ವಯಸ್ಕ ಹುಲಿಗಳಾಗಿವೆ. ಸಂಘರ್ಷ ಪ್ರದೇಶಗಳಲ್ಲಿ ಗ್ರಾಮ ಮಟ್ಟದ ಇಕೋ-ಡೆವಲಪ್‌ಮೆಂಟ್ ಸಮಿತಿಗಳನ್ನು ಪುನರುಜ್ಜೀವನಗೊಳಿಸಲು ನಿರ್ಧರಿಸಲಾಗಿದೆ. ಬಂಡಿಪುರದ ಸುಮಾರು 100 ಕಿ.ಮೀ ಅರಣ್ಯ ಗಡಿಯಲ್ಲಿನ ಸಂಘರ್ಷ ಪ್ರದೇಶಗಳಲ್ಲಿ ವಿಶೇಷ ನಾಲ್ಕು ಸದಸ್ಯರ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ಸಫಾರಿ ಆದಾಯದ ಮೂರನೇ ಒಂದು ಭಾಗವನ್ನು ಅರಣ್ಯ ಅಂಚಿನ ಗ್ರಾಮಗಳಲ್ಲಿ ಜಾಗೃತಿ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಸಲಾಗುತ್ತದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com