

ತುಮಕೂರು: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ತವರಲ್ಲೇ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ದೇವರು ಬಂದಂತೆ ನಾಟಕವಾಡಿದ ಗ್ರಾಮಸ್ಥನೊಬ್ಬ ದಲಿತ ನವದಂಪತಿಗಳನ್ನು ದೇವಾಲಯದಿಂದ ಹೊರಗೆ ಕಳಿಸಿರುವ ಘಟನೆ ನಡೆದಿದೆ.
ತುಮಕೂರು (Tumakuru) ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಅರಸಮ್ಮ ದೇವಾಲಯದಲ್ಲಿ ಘಟನೆ ನಡೆದಿದ್ದು, ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಹೊಸದಾಗಿ ಮದುವೆಯಾಗಿದ್ದ ದಂಪತಿ ದೇವಾಲಯಕ್ಕೆ ಹೋಗಿದ್ದರು. ಈ ವೇಳೆ ದೇವಾಲಯದ ಒಳಗಿದ್ದ ವ್ಯಕ್ತಿಯೊಬ್ಬ ದಂಪತಿಗೆ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಿಲ್ಲ. ಬಳಿಕ ದೇವರು ಬಂದಂತೆ ನಟಿಸಿ ದಲಿತ ಕುಟುಂಬವನ್ನು ಹೊರಕಳಿಸಿದ್ದಾನೆ. ದಲಿತರು ನಿಮಗೆ ಪ್ರವೇಶವಿಲ್ಲ, ಪುಣ್ಯ ಮಾಡಿಸಬೇಕು’ ಎಂದ ಗದರಿ ಹೊರಕಳಿಸಿದ್ದಾನೆ.
ದೇವರು ಬಂದಂತೆ ನಟಿಸಿ ನಾಟಕವಾಡಿದ ಆರೋಪಿಯನ್ನು ನಾರಾಯಣಪ್ಪ ಎಂದು ಗುರುತಿಸಲಾಗಿದ್ದು, ಈತ ನವದಂಪತಿಗೆ ‘ನಡೀ ಆಚೆಗೆ’ ಎಂದು ಗದರಿಸಿ ಅವಮಾನ ಮಾಡಿದ್ದಾನೆ.
ಅಚ್ಚರಿಯ ವಿಚಾರವೆಂದರೆ, ದಲಿತ ಸಮುದಾಯದ ನವ ದಂಪತಿಗೆ ಅವಮಾನವಾಗುತ್ತಿದ್ದರೂ ಅಲ್ಲೇ ನಿಂತಿದ್ದ ಗ್ರಾಮದ ಇತರ ಮೇಲ್ಜಾತಿಯ ಮಹಿಳೆಯರು, ಪುರುಷರು ಯಾವುದೇ ನಾಚಿಕೆ ಇಲ್ಲದೆ ನಗುತ್ತಾ ನಿಂತಿರುವುದು ವೀಡಿಯೋದಲ್ಲಿ ಕಂಡು ಬಂದಿದೆ.
ಈ ನಡುವೆ ಗ್ರಾಮಸ್ಥರ ನಡವಳಿಕೆಗೆ ಬೇಸತ್ತು ದಂಪತಿಗಳು, ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಸಂಬಂಧ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ದೂರು ಹಿನ್ನೆಲೆಯಲ್ಲಿ ನಾರಾಯಣಪ್ಪ, ಪ್ರಭಾ, ಕಾಂತಣ್ಣ, ಅಮೂಲ್ಯ, ಪುಟ್ಟೇಗೌಡ, ಪದ್ಮ ಸೇರಿ ಇತರರ ಮೇಲೆ ಎಫ್ಐಆರ್ ದಾಖಲಾಗಿದೆ.
ಅಲ್ಲದೆ, ದೇವರ ಬಂದಂತೆ ನಾಟಕವಾಡಿದ್ದ ನಾರಾಯಣಪ್ಪನನ್ನು ಪೊಲೀಸರು ಬಂಧಿಸಿದ್ದು, ಉಳಿದವರಿಗಾಗಿ ಪೊಲೀಸರ ಹುಡುಕಾಟ ನಡೆಸುತ್ತಿದ್ದಾರೆ.
Advertisement