News wrap 23-02-2026 | "ಮೊದಲ ಬಾರಿಗೆ ಶಾಸಕರಾದವರಿಗೆ ಮಂತ್ರಿಗಿರಿ ಕೊಡಿ": ಕಾಂಗ್ರೆಸ್ ಹೈಕಮಾಂಡ್ ಗೆ ಹೊಸ ತಲೆನೋವು!; ಕಾಡಾನೆ ದಾಳಿಗೆ ಇಬ್ಬರು ಸಾವು; ಪುಂಡಾನೆ ಸೆರೆ

News wrap 23-02-2026 | "ಮೊದಲ ಬಾರಿಗೆ ಶಾಸಕರಾದವರಿಗೆ ಮಂತ್ರಿಗಿರಿ ಕೊಡಿ": ಕಾಂಗ್ರೆಸ್ ಹೈಕಮಾಂಡ್ ಗೆ ಹೊಸ ತಲೆನೋವು!; ಕಾಡಾನೆ ದಾಳಿಗೆ ಇಬ್ಬರು ಸಾವು; ಪುಂಡಾನೆ ಸೆರೆ

1. ಮೊದಲ ಬಾರಿಗೆ ಶಾಸಕರಾದವರಿಗೆ ಮಂತ್ರಿಗಿರಿ ಕೊಡಿ: ಹೈ ಕಮಾಂಡ್ ಗೆ ಶಾಸಕರ ಪತ್ರ

ಅಧಿಕಾರ ಹಂಚಿಕೆ ಗದ್ದಲ ನಡುವೆ ಕಾಂಗ್ರೆಸ್ ಶಾಸಕರು ಹೈಕಮಾಂಡ್ ಗೆ ಪತ್ರ ಬರೆದಿದ್ದು, ರಾಜ್ಯ ಸಂಪುಟ ಪುನಾರಚನೆಗೆ ಮನವಿ ಮಾಡಿದ್ದಾರೆ. ಮೊದಲ ಬಾರಿಗೆ ಗೆದ್ದಿರುವ ಕಾಂಗ್ರೆಸ್ನ 31 ಶಾಸಕರು ಕಾಂಗ್ರೆಸ್ ಹೈಕಮಾಂಡ್ ನಾಯಕರಿಗೆ ಪತ್ರ ಬರೆದಿದ್ದು, ಸಂಪುಟ ವಿಸ್ತರಣೆ ಮಾಡಿ, ನಮಗೂ ಅವಕಾಶ ಕೊಡಿ ಎಂದು ಧ್ವನಿ ಎತ್ತಿದ್ದಾರೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲ ಕರ್ನಾಟಕ ಪ್ರವಾಸದಲ್ಲಿರುವಾಗಲೇ ಸಂಪುಟ ಪುನರ್‌ ರಚನೆ ಬೇಡಿಕೆ ಬಂದಿದೆ. ಮೊದಲ ಬಾರಿ ಗೆದ್ದಿರುವ ಐವರು ಶಾಸಕರಿಗೆ ಸಚಿವ ಸ್ಥಾನ ನೀಡಿ. ಬೇರೆ ಸರ್ಕಾರದಲ್ಲಿ ಮೊದಲ ಬಾರಿ ಶಾಸಕರು ಸಿಎಂ ಆಗಿದ್ದಾರೆ. ಹೊಸಬರಿಗೆ ಅವಕಾಶ ನೀಡಿದರೆ ಮುಂದಿನ ಚುನಾವಣೆ ಗೆಲ್ಲಲು ಸಹಕಾರಿಯಾಗಲಿದೆ. ಪಕ್ಷ ನಿಷ್ಠೆ, ಸೈದ್ದಾಂತಿಕವಾಗಿ ಗಟ್ಟಿಯಾಗಿರುವವರಿಗೆ ಅವಕಾಶ ನೀಡಿ ಎಂದು ಶಾಸಕರು ಪತ್ರದಲ್ಲಿ ಬರೆದಿದ್ದಾರೆ.

2. "ರಾಜ್ಯದ ಶೇಕಡಾ 30ರಷ್ಟು ಜನ ಪ್ರತಿನಿಧಿಗಳು ಭ್ರಷ್ಟರು: CM ಕೇಳಿದರೆ ಪಟ್ಟಿ ಕೊಡ್ತೀವಿ": ಗುತ್ತಿಗೆದಾರರ ಸಂಘದ ಅಧ್ಯಕ್ಷ

ರಾಜ್ಯದ ಶೇಕಡಾ 30ರಷ್ಟು ಚುನಾಯಿತ ಪ್ರತಿನಿಧಿಗಳು ಭ್ರಷ್ಟರಾಗಿದ್ದಾರೆ ಎಂದು ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ಮಂಜುನಾಥ್ ಅವರು ಆರೋಪಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಳಿದರೆ ಭ್ರಷ್ಟರ ಹೆಸರಿನ ಪಟ್ಟಿಯನ್ನು ನೀಡಲು ಸಿದ್ಧರಾಗಿದ್ದೇವೆ ಎಂದೂ ಹೇಳಿದ್ದಾರೆ. ಚಿತ್ರದುರ್ಗದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ್, ರಾಜ್ಯದಾದ್ಯಂತ ಗುತ್ತಿಗೆದಾರರಿಗೆ ಪಾವತಿಸಬೇಕಿರುವ 37,000 ಕೋಟಿ ರೂಪಾಯಿ ಬಾಕಿ ಇದೆ ಎಂದು ಹೇಳಿ, ತಕ್ಷಣವೇ ಹಣ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದರು. ಗುತ್ತಿಗೆದಾರರ ಸಂಘದ ಬಾಕಿ ಪಾವತಿ ಸಮಸ್ಯೆಯನ್ನು ಹಲವು ಸಭೆಗಳು ನಡೆದಿದ್ದರೂ ಮುಖ್ಯಮಂತ್ರಿ ಪರಿಹರಿಸಿಲ್ಲ ಎಂದು ಟೀಕಿಸಿದರು.

3. ಕಾಡಾನೆ ದಾಳಿಗೆ ಇಬ್ಬರು ಸಾವು; ಪುಂಡಾನೆ ಸೆರೆ

ಚಿಕ್ಕಮಗಳೂರಿನ ಕಾಫಿ ಎಸ್ಟೇಟ್ ಗಳಲ್ಲಿ ವ್ಯಾಪಕ ಆತಂಕ ಮೂಡಿಸಿದ್ದ ಕಾಡಾನೆ ದಾಳಿಗೆ ಒಂದೇ ವಾರದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ನಾಗೇಶ್ ಗೌಡ ಅವರಿಗೆ ಸೇರಿದ ಕಾಫಿ ತೋಟದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಮಹಿಳೆ ಮೇಲೆ ಏಕಾಏಕಿ ಕಾಡಾನೆ ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಬೋರಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದೇ ತೋಟದಲ್ಲಿ ಹಾವೇರಿ ಮೂಲದ ಕಾರ್ಮಿಕ ಯಲ್ಲಪ್ಪ ಕಾಡಾನೆ ದಾಳಿಗೆ ಬಲಿಯಾಗಿದ್ದರು. ಮಹಿಳೆಯ ಮೃತದೇಹವನ್ನು ಸಾಗಿಸುತ್ತಿದ್ದ ವಾಹನವನ್ನು ಚಿಕ್ಕಮಗಳೂರು ತಾಲೂಕಿನ ಕಡಬಗೆರೆ ಗ್ರಾಮದಲ್ಲಿ ಸ್ಥಳೀಯರು ತಡೆದು ಆಕ್ರೋಶ ವ್ಯಕ್ತಪಡಿಸಿದರು ಪೀಡಿತ ಕುಟುಂಬಕ್ಕೆ ಸಮರ್ಪಕ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಈಮಧ್ಯೆ, ಅರಣ್ಯ ಇಲಾಖೆ ಪುಂಡಾನೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಅರಣ್ಯದಂಚಿನ ಪ್ರದೇಶಗಳಲ್ಲಿ ಕಾಡು ಪ್ರಾಣಿಗಳ ಓಡಾಟದ ಬಗ್ಗೆ ಮಾಹಿತಿ ಕಮಾಂಡ್ ಸೆಂಟರ್‌ಗೆ ತಲುಪಿದ ತಕ್ಷಣ ತೋಟಗಾರಿಕಾ ಬೆಳೆಗಾರರ ಸಂಘಗಳು, ಕಾರ್ಮಿಕ ಸಂಘಗಳು ಮತ್ತು ಸ್ಥಳೀಯ ನಾಯಕರೊಂದಿಗೆ ಹಂಚಿಕೊಳ್ಳುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

4. ಇಂಜೆಕ್ಷನ್ ಪಡೆದ ಕೆಲವೇ ಕ್ಷಣಗಳಲ್ಲಿ ಮಹಿಳೆ ಸಾವು

ಚನ್ನಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಇಂಜೆಕ್ಷನ್ ಪಡೆದ ಕೆಲವೇ ಕ್ಷಣಗಳಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಜಿಲ್ಲೆಯ ಚನ್ನಗಿರಿ ತಾಲೂಕಿನ ತಿಪ್ಪಗೊಂಡನಹಳ್ಳಿ ನಿವಾಸಿ ಅನುಷಾ ಇಂಜೆಕ್ಷನ್ ಪಡೆದ ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿದ್ದಾರೆ. ಹೃದಯ ಸಂಬಂಧಿ ಕಾಯಿಲೆಗಾಗಿ ಅನುಷಾ ಅವರು ಪ್ರತಿ ತಿಂಗಳು ಇಂಜೆಕ್ಷನ್ ಪಡೆಯುತ್ತಿದ್ದರು. ಇಂಜೆಕ್ಷನ್ ಅನ್ನು ಸಂಬಂಧಿಕರು ಖಾಸಗಿ ಔಷಧೀಯ ಮಳಿಗೆಯಿಂದ ಖರೀದಿಸಿ ತಂದಿದ್ದು, ನಂತರ ಆಸ್ಪತ್ರೆಯಲ್ಲಿ ಅನುಷಾಗೆ ನೀಡಲಾಗಿದೆ. ಇಂಜೆಕ್ಷನ್ ನೀಡಿದ ಸುಮಾರು 15 ನಿಮಿಷಗಳ ನಂತರ ಅಸ್ವಸ್ಥರಾಗಿದ್ದು, ಬಳಿಕ ಮೃತಪಟ್ಟಿದ್ದಾರೆ. ಘಟನೆ ಬೆನ್ನಲ್ಲೇ ಇದು ವೈದ್ಯರ ಮತ್ತು ಸಿಬ್ಬಂದಿಯ ಘೋರ ಎಡವಟ್ಟು ಎಂದು ಆರೋಪಿಸಿರುವ ಕುಟುಂಬಸ್ಥರು ಆಸ್ಪತ್ರೆಯ ಮುಂದೆ ಶವವಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಎಫ್‌ಎಸ್‌ಎಲ್ ವರದಿ ಬಂದ ನಂತರ ಪ್ರಕರಣವನ್ನು ವೈದ್ಯಕೀಯ ಮಂಡಳಿಗೆ ಶಿಫಾರಸು ಮಾಡಲಾಗುವುದು ಎಂದು ದಾವಣಗೆರೆ SP ಎಚ್.ಟಿ. ಶೇಖರ್ ಹೇಳಿದ್ದಾರೆ.

5. ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ: ಬಾಗಲಕೋಟೆಯಲ್ಲಿ ಬೃಹತ್ ಪ್ರತಿಭಟನೆಗೆ ಕರೆ

ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆಯಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದೆ. ಹಿಂದೂ ಸಮುದಾಯವು ಇದೇ 26 ರಂದು ಹೋರಾಟ ನಡೆಸಲು ಸಿದ್ಧತೆ ನಡೆಸಿದೆ. ಹಿಂದೂ ಸಕಲ ಸಮಾಜದ ಮುಖಂಡರು ಮತ್ತು ರಾಜಕೀಯ ನಾಯಕರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಅಪರಾಧಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಲಾಯಿತು. ಆರೋಪಿಗಳನ್ನು ಬಂಧಿಸದಿದ್ದರೆ, ಇದೇ ಫೆಬ್ರವರಿ 26 ರಂದು ಅಂಬಾಬಾಯಿ ದೇವಸ್ಥಾನದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಘೋಷಿಸಲಾಗಿದೆ. ಫೆಬ್ರವರಿ 26 ರಂದು ಬೆಳಗ್ಗೆ 10,30 ಗಂಟೆಗೆ ಅಂಬಾಬಾಯಿ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಹೊರಡಲಿದೆ. ಈ ಹೋರಾಟದ ಮೂಲಕ ಆರೋಪಿಗಳ ಬಂಧನಕ್ಕೆ ಒತ್ತಾಯಿಸಲು ಹಿಂದೂ ಸಮುದಾಯ ಮುಂದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com