

ಗದಗ: ನಿಲುಗಡೆ ಅಲ್ಲದಿದ್ದರೂ ಬಸ್ ಹತ್ತಿದ ವಿದ್ಯಾರ್ಥಿನಿಯರನ್ನು ಬಸ್ ನಿಂದ ಕೆಳಗಿಳಿಸಿದ ಆರೋಪದ ಮೇರೆಗೆ ಮಹಿಳಾ ಕಂಡಕ್ಟರ್ ಮೇಲೆ ಹಲ್ಲೆ ಮಾಡಿರುವ ಘಟನೆ ಗದಗದಲ್ಲಿ ವರದಿಯಾಗಿದೆ.
ಹೌದು.. ಬಸ್ ನಿಲುಗಡೆ ವಿಚಾರವಾಗಿ ಕೆಎಸ್ಆರ್ಟಿಸಿ ಸಂಸ್ಥೆಯ ಮಹಿಳಾ ಕಂಡಕ್ಟರ್ ಮೇಲೆ ವಿದ್ಯಾರ್ಥಿನಿಯರ ಪೋಷಕರು ಹಲ್ಲೆ ಮಾಡಿರುವ ಘಟನೆ ಗದಗ-ಮುಂಡರಗಿ ರಸ್ತೆಯ ಪಾಪನಾಶಿ ಟೋಲ್ ಬಳಿ ನಡೆದಿದೆ.
ಮೂಲಗಳ ಪ್ರಕಾರ ನಿಲುಗಡೆ ಅಲ್ಲದ ಪ್ರದೇಶದಲ್ಲಿ ವಿದ್ಯಾರ್ಥಿನಿಯರು ಬಸ್ ಹತ್ತಿದ್ದಕ್ಕೆ ಮಹಿಳಾ ಬಸ್ ಕಂಡಕ್ಟರ್ ಕೋಪ ಮಾಡಿಕೊಂಡು ಅವರನ್ನು ಕೆಳಗಿಳಿಸಿದ್ದಾರೆ.
ಇದರಿಂದ ಆಕ್ರೋಶಕೊಂಡ ವಿದ್ಯಾರ್ಥಿನಿಯರ ಪೋಷಕರು ಬಸ್ ತಡೆದು ಮಹಿಳಾ ಕಂಡಕ್ಟರ್ ಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ವೇಳೆ ಸಹ ಪ್ರಯಾಣಿಕರು ಮತ್ತು ಬಸ್ ಚಾಲಕ ಮೂಕಪ್ರೇಕ್ಷಕರಾಗಿದ್ದರು ಎನ್ನಲಾಗಿದೆ.
ಆಗಿದ್ದೇನು?
ಗದಗ ಸಾರಿಗೆ ಘಟಕಕ್ಕೆ ಸೇರಿದ NWKRTC ಬಸ್ (KA-26-F-852) ಇಂದು ಬೆಳಗ್ಗೆ ಸುಮಾರು 9:30ರ ವೇಳೆಗೆ ಗದಗ ನಗರದಿಂದ ಕದಾಂಪುರ ಮಾರ್ಗವಾಗಿ ಶಿಂಗಟರಾಯನಕೇರಿ ಗ್ರಾಮಕ್ಕೆ ತೆರಳುತ್ತಿತ್ತು. ಈ ವೇಳೆ ಪಾಪನಾಶಿ ಟೋಲ್ ಬಳಿ 2–3 ವಿದ್ಯಾರ್ಥಿನಿಯರು ಬಸ್ ಹತ್ತಿದ್ದಾರೆ ಎನ್ನಲಾಗಿದೆ.
ಆದರೆ, ಈ ಸ್ಥಳದಲ್ಲಿ ಬಸ್ ನಿಲುಗಡೆಗೆ ಅಧಿಕೃತ ಅನುಮತಿ ಇಲ್ಲದ ಕಾರಣ, ಮಹಿಳಾ ಕಂಡಕ್ಟರ್ ಅವರು ವಿದ್ಯಾರ್ಥಿನಿಯರನ್ನು ಬಸ್ನಿಂದ ಇಳಿಸಿ, ಬಸ್ ಮುಂದಕ್ಕೆ ಚಲಾಯಿಸಿದ್ದಾರೆ.
ಈ ವಿಷಯ ತಿಳಿದ ವಿದ್ಯಾರ್ಥಿನಿಯರ ಪೋಷಕರು ಬಸ್ ಬೆನ್ನಟ್ಟಿ ಬಂದು, ಪಾಪನಾಶಿ ಟೋಲ್ ಬಳಿ ಬಸ್ ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ಬಳಿಕ ಬಸ್ನಲ್ಲಿದ್ದ ಮಹಿಳಾ ಕಂಡಕ್ಟರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ನೋಡ ನೋಡುತ್ತಲೇ ಅವರ ಕಪಾಳಕ್ಕೆ ಹೊಡೆದು ಹಲ್ಲೆ ನಡೆಸಿದ್ದಾರೆ.
ಬಾಲಕಿ ತಂದೆಯಿಂದ ಹಲ್ಲೆ
ಕಂಡಕ್ಟರ್ ಮೇಲೆ ಹಲ್ಲಿ ಮಾಡಿದ ಆರೋಪಿಯನ್ನುಬಾಲಕಿಯ ತಂದೆ ಪ್ರಕಾಶ ಹಾಗೂ ನೀಲಪ್ಪ ಅಲಿಯಾಸ್ ಮುತ್ತಣ್ಣ ಎಂದು ಗುರುತಿಸಲಾಗಿದ್ದು, ಬಸ್ ನೊಳಗೆ ಬಂದ ಈ ಇಬ್ಬರು ಕಂಡಕ್ಟರ್ ಅವರನ್ನು ಅವಾಚ್ಯ ಶಬ್ದಗಳಿಂದ ಬೈದು, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಕಪಾಳಕ್ಕೆ ಹೊಡೆದಿದ್ದಾರೆ ಎನ್ನಲಾಗಿದೆ.
ದೂರು ದಾಖಲು
ಘಟನೆಯ ನಂತರ ಮಹಿಳಾ ಕಂಡಕ್ಟರ್ ಅವರು ಗದಗ ಶಹರ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದು, ಪ್ರಕರಣ ದಾಖಲು ಪ್ರಕ್ರಿಯೆ ನಡೆಯುತ್ತಿದೆ. ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಲು ಶಹರ ಪೊಲೀಸರು ಬಲೆ ಬೀಸಿದ್ದಾರೆ.
ಈ ಘಟನೆ ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸರ್ಕಾರಿ ಸಾರಿಗೆ ಸಂಸ್ಥೆಯ ಮಹಿಳಾ ಸಿಬ್ಬಂದಿಯ ಮೇಲೆ ನಡೆದ ಹಲ್ಲೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಹಲ್ಲೆ ಸಂಬಂಧ ಗದಗ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.
ಕೆಲಸಕ್ಕೆ ತೊಂದರೆಯಾಗುತ್ತದೆ: ಕಂಡಕ್ಟರ್ ಅಳಲು
ಇನ್ನು ಈ ಬಗ್ಗೆ ಮಾತನಾಡಿರುವ ಹಲ್ಲೆಗೊಳಗಾದ ಮಹಿಳಾ ಕಂಡಕ್ಟರ್, 'ಇಲ್ಲಿ ಬಸ್ ನಿಲುಗಡೆಗೆ ಅಧಿಕೃತ ಅನುಮತಿ ಇಲ್ಲದ ಕಡೆ ಪ್ರಯಾಣಿಕರು ಬಸ್ ಹತ್ತಿದರೆ ಆ ವೇಳೆ ಚೆಕಿಂಗ್ ಸಿಬ್ಬಂದಿ ಬಂದರೆ ನಿರ್ವಾಹಕರನ್ನು ಕೂಡಲೇ ಅಮಾನತು ಮಾಡಿ ಪ್ರಕರಣ ದಾಖಲಿಸುತ್ತಾರೆ ಎಂದು ಅಳಲು ತೋಡಿಕೊಂಡಿದ್ದಾರೆ.
ಅಂತೆಯೇ ಇದೇ ವಿಚಾರವಾಗಿ ಸಾರಿಗೆ ನೌಕರರು ಕೂಡ ಆಗ್ರಹ ವ್ಯಕ್ತಪಡಿಸಿದ್ದು, 'ನಿರ್ವಾಹಕರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ. ಅದನ್ನು ತಿಳಿಯದ ಪೋಷಕರು ಮಹಿಳಾ ನಿರ್ವಾಹಕರು ಎಂಬುದನ್ನು ನೋಡದೆ ದೈಹಿಕ ಹಲ್ಲೆ ಮಾಡಿರುವುದಕ್ಕೆ ತಕ್ಕ ಶಿಕ್ಷೆ ಆಗಬೇಕು' ಎಂದು ಒತ್ತಾಯಿಸಿದ್ದಾರೆ.
ಸಾರಿಗೆ ಸಂಸ್ಥೆಯ ಚಾಲನಾ ಸಿಬ್ಬಂದಿಗಳು ಘಟಕಕಗಳಲ್ಲೂ ದೈಹಿಕ ಮತ್ತು ಮಾನಸಿಕ ಹಿಂಸೆ ಅನುಭವಿಸುತ್ತಿದ್ದು, ಇದನ್ನು ಕೇಳಬೇಕಾದ ಬಹುತೇಕ ಅಧಿಕಾರಿಗಳೇ ಕಿರುಕುಳ ನೀಡುತ್ತಿರುವುದು ಇನ್ನಷ್ಟು ಒತ್ತಡದಲ್ಲಿ ನೌಕರರು ಕೆಲಸ ಮಾಡುವಂತಾಗಿದೆ ಎಂದು ಹೇಳಿದ್ದಾರೆ.
Advertisement