

ಗದಗ: ಈ ಹಿಂದೆ ಮಡಿಕೆಯಲ್ಲಿ ಹಳೆಯ ಚಿನ್ನಾಭರಣ ಪತ್ತೆಯಾಗಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಇದೀಗ ಮತ್ತೆ ನಿಧಿ ಪತ್ತೆಯಾಗಿದೆ ಎಂದು ಹೇಳಲಾಗಿದೆ.
ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಮತ್ತೆ ಪುರಾತನ ವಸ್ತುಗಳು ಮತ್ತು ಆಭರಣ ವಸ್ತುಗಳು ಪತ್ತೆಯಾಗಿದ್ದು, ಲಕ್ಕುಂಡಿ ಗ್ರಾಮದ ಬಸಪ್ಪ ಬಡಿಗೇರ ಎಂಬವರಿಗೆ ಮುತ್ತು, ಹವಳ, ನೀಲಮಣಿ, ಸ್ಫಟಿಕ, ಬಿಳಿ ಹವಳ, ಕರಿಪುಕ್ಕಾ ಸೇರಿದಂತೆ ಹಲವು ವಸ್ತುಗಳುಳ್ಳ ನಿಧಿ ದೊರೆತಿದೆ.
ಬಸಪ್ಪ ಬಡಿಗೇರ ಗ್ರಾಮದಲ್ಲಿ ಹಲವು ವರ್ಷಗಳಿಂದ ಶೋಧ ಕಾರ್ಯ ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ಮಳೆ ಬಂದ ನಂತರ ಗ್ರಾಮದಲ್ಲಿ ಶೋಧ ಮಾಡುತ್ತಾರೆ. ಈ ಹಿಂದೆ ಸಾಕಷ್ಟು ಪುರಾತನ ಕಾಲದ ವಸ್ತುಗಳು ಅವರಿಗೆ ಸಿಕ್ಕಿದ್ದವು ಎನ್ನಲಾಗಿದೆ. ಅವುಗಳನ್ನೆಲ್ಲ ಅವರು ಸರ್ಕಾರಕ್ಕೆ ಹಸ್ತಾಂತರ ಮಾಡಿದ್ದರು.
ಇದೀಗ, ಲಕ್ಕುಂಡಿಯಲ್ಲಿ ಅಪಾರ ಚಿನ್ನ ಇದೆ ಎನ್ನುವ ನಂಬಿಕೆ ಬೆನ್ನಲ್ಲೇ ಪುರಾತನ ವಸ್ತುಗಳು ಪತ್ತೆಯಾಗಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ಅರ್ಧ ಕೆಜಿ ಚಿನ್ನಾಭರಣಗಳ ನಿಧಿ ಸಿಕ್ಕಿ ರಾಜ್ಯವೇ ಕುತೂಹಲದಿಂದ ನೋಡುತ್ತಿದೆ. ಮನೆ ಪಾಯದ ಕೆಲಸದ ವೇಳೆ ಚಿನ್ನದ ನಿಧಿ ಸಿಕ್ಕಿದ ವಿಚಾರ ಹತ್ತಾರು ರೀತಿಯ ಚರ್ಚೆಗಳಿಗೆ ಕಾರಣವಾಗಿತ್ತು.
ಈವರೆಗೆ ಅರ್ಧ ಕೆಜಿ ಚಿನ್ನದ ನಿಧಿ ದೊರೆತಿದ್ದು, ಈ ಪೈಕಿ ಕೈ ಕಡಗ, ಕಂಠದ ಹಾರ, ಚೈನ್, ವಂಕಿ ಉಂಗುರ, ಕಿವಿ ಹ್ಯಾಂಗಿಂಗ್ ಸೇರಿ ಹಲವು ಆಭರಣಗಳು ಪತ್ತೆಯಾಗಿದ್ದವು.
ಚಿನ್ನಾಭರಣ ಮಾತ್ರವಲ್ಲದೆ ತಾಮ್ರದ ಶಿಥಿಲಗೊಂಡ 1 ಮಡಿಕೆ, 1 ಮುಚ್ಚಳ ಹಾಗೂ 3 ಸಣ್ಣ ತುಂಡು ಸಹಿತ 634 ಗ್ರಾಂ ತಾಮ್ರದ ತೆಂಬಿಗೆ ದೊರೆತಿದ್ದವು.
ಗ್ರಾಮಸ್ಥರಿಗೆ ತಲೆನೋವು
ಇನ್ನು ಲಕ್ಕುಂಡಿ ಗ್ರಾಮದಲ್ಲಿ ನಿಧಿ ಪತ್ತೆಯಾದ ಬಳಿಕ ಅಧಿಕಾರಿಗಳ ದಂಡೇ ಗ್ರಾಮಕ್ಕೆ ದೌಡಾಯಿಸುತ್ತಿದ್ದು, ಗ್ರಾಮದಲ್ಲಿನ ಕಾಮಗಾರಿಗಳು ಸ್ಥಗಿತಗೊಂಡಿದೆ. ಇದು ಗ್ರಾಮಸ್ಥರ ತಲೆನೋವಿಗೆ ಕಾರಣವಾಗಿದೆ.
Advertisement