

ಬೆಂಗಳೂರು: ಸಿದ್ದರಾಮಯ್ಯ ಒಬ್ಬ ಜನ ನಾಯಕ. ಅವರನ್ನು ದೂರ ಇಟ್ಟು ಪಕ್ಷ ಸಂಘಟನೆ ಮಾಡುತ್ತೇವೆಂದರೆ, ಅದು ಒಂದು ದೊಡ್ಡ ಪ್ರಮಾದವಾಗಲಿದೆ ಎಂದು ಶಾಸಕ ಕೆ.ಎನ್. ರಾಜಣ್ಣ ಅಭಿಪ್ರಾಯಪಟ್ಟರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋದರೆ ಮಾತ್ರ ನಾವು 2028ರ ಚುನಾವಣೆ ಗೆಲ್ಲುತ್ತೇವೆ ಎಂದೂ ಹೇಳಿದರು. ಸದ್ಯದಲ್ಲಿಯೇ ಪಾಲಿಕೆ ಚುನಾವಣೆ ಎದುರಿಸಬೇಕಾಗುತ್ತದೆ.
ಸಿದ್ದರಾಮಯ್ಯ ಅವರನ್ನು ಕಡೆಗಣಿಸಲು ಸಾಧ್ಯವೇ ಇಲ್ಲ. ಜನ ನಾಯಕರೆಂದು ಗುರುತಿಸಿಕೊಂಡ ವರ ಶಕ್ತಿ, ಜನಪ್ರಿಯತೆಯನ್ನು ತುಳಿಯಲು ಸಾಧ್ಯವೂ ಇಲ್ಲ ಎಂದರು.
ಇನ್ನೂ ಸಚಿವ ಸ್ಥಾನಕ್ಕಾಗಿ ಶಾಸಕರು ಲಾಭಿ ನಡೆಸುತ್ತಿರುವ ನಡುವೆ ನನಗೆ ಮಂತ್ರಿ ಸ್ಥಾನ ಬೇಡ ಎಂದು ಶಾಸಕ ರಾಜಣ್ಣ ಹೇಳಿದ್ದಾರೆ. ನನಗೆ ಕೊಟ್ಟರೂ ಸಚಿವ ಸ್ಥಾನ ಬೇಡ. ಹಾಗೆಂದು ವೈರಾಗ್ಯ ಎಂದೇನೂ ಇಲ್ಲ. ನಾನು ಎರಡು ವರ್ಷ ಸಚಿವನಾಗಿ ನನ್ನ ಕೆಲಸವನ್ನು ಪ್ರಾಮಾಣಿಕವಾಗಿ, ದಕ್ಷತೆಯಿಂದ ಮಾಡಿದ್ದೇನೆ. ಹೀಗಾಗಿ, ಬೇರೆಯವರಿಗೂ ಅವಕಾಶ ಕೊಡಲಿ ಎಂದರು.