

ಬೆಂಗಳೂರು: ಸಾರ್ವಜನಿಕರ ಅಹವಾಲುಗಳನ್ನು ಒಂದೇ ಸೂರಿನಡಿ ತ್ವರಿತವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಮಹತ್ತರ ಹೆಜ್ಜೆಯಿಟ್ಟ ರಾಜ್ಯ ಸರ್ಕಾರ, ಜನರ ಕಷ್ಟ ಆಲಿಸಲು ಹೊಸದಾಗಿ ‘ಪ್ರಜಾಸೇವೆ’ ಎಂಬ ಇಲಾಖೆಯನ್ನು ಆರಂಭಿಸಿದೆ.
ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಪ್ರಜಾಸೇವೆ ಇಲಾಖೆ ಆರಂಭ, ಕಲಬುರಗಿಯಲ್ಲಿ ಜವಳಿ ಪಾರ್ಕ್ ಸ್ಥಾಪನೆ ಹಾಗೂ ದೇವನಳ್ಳಿಯಲ್ಲಿ ಏರೋ ಪಾರ್ಕ್ ಸ್ಥಾಪಗೆ ಒಪ್ಪಿಗೆ ನೀಡಲಾಗಿದೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಎಂ ಶಿವಕುಮಾರ್, ಇನ್ಮುಂದೆ ಸಾರ್ವಜನಿಕರು ತಮ್ಮ ಸಮಸ್ಯೆಗಳು, ದೂರುಗಳು ಅಥವಾ ಪ್ರತಿಭಟನೆಯ ಅರ್ಜಿಗಳನ್ನು ಹಿಡಿದು ಅಲ್ಲಿ-ಇಲ್ಲಿ ಅಲೆಯುವ ಅಗತ್ಯವಿಲ್ಲ. ಜನರ ಕಷ್ಟ ಆಲಿಸಲು ಸರ್ಕಾರ ಹೊಸದಾಗಿ ‘ಪ್ರಜಾಸೇವೆ’ ಎಂಬ ವ್ಯವಸ್ಥೆಯನ್ನು ತಂದಿದ್ದು, ಒಬ್ಬ ಸಚಿವರಿಗೆ ಇದರ ಸಂಪೂರ್ಣ ಜವಾಬ್ದಾರಿ ವಹಿಸಲಾಗುತ್ತಿದೆ ಎಂದರು.
ಪ್ರತಿ ಜಿಲ್ಲಾ ಉಸ್ತುವಾರಿ ಸಚಿವರು ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ತಿಂಗಳಿಗೆ ಕಡ್ಡಾಯವಾಗಿ ಎರಡು ದಿನ ಈ ಪ್ರಜಾಸೇವೆ ಅಭಿಯಾನ ನಡೆಸಬೇಕೆಂದು ಸಿಎಂ ಆದೇಶಿಸಿದ್ದಾರೆ.
ಇನ್ನು ರಾಜ್ಯದಲ್ಲಿ ಈ ಬಾರಿ ಶೇ. 20 ಕ್ಕಿಂತ ಹೆಚ್ಚು ಮಳೆ ಕೊರತೆಯಾಗಲಿದ್ದು, ಭೀಕರ ಜಲಕ್ಷಾಮ ಎದುರಾಗುವ ಲಕ್ಷಣಗಳಿವೆ ಎಂದು ಡಿ.ಕೆ.ಶಿವಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸುವಂತೆ ಸಚಿವರಿಗೆ ಸೂಚಿಸಿರುವುದಾಗಿ ತಿಳಿಸಿದರು.
ಬೆಂಗಳೂರಿನಲ್ಲಿ ಒಸಿ (OC) ಮತ್ತು ಸಿಸಿ (CC) ವಿಚಾರದಲ್ಲಿ ಕೋರ್ಟ್ ವಿನಾಯಿತಿ ನೀಡಿದ ಬೆನ್ನಲ್ಲೇ, ಕಟ್ಟಡ ಕಟ್ಟಿದವರು ಅರ್ಜಿ ಸಲ್ಲಿಸಲು ಆಗಸ್ಟ್ 15ರವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ.
ಕಲಬುರಗಿಲ್ಲಿ ಜವಳಿ ಪಾರ್ಕ್
ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಸಹಭಾಗಿತ್ವದಲ್ಲಿ ಕಲಬುರಗಿಯಲ್ಲಿ ಸುಮಾರು 1,700 ಕೋಟಿ ರೂ. ವೆಚ್ಚದಲ್ಲಿ ಬೃಹತ್ ಜವಳಿ ಪಾರ್ಕ್ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ. ಇದರಿಂದ ಸಾವಿರಾರು ಉದ್ಯೋಗ ಸೃಷ್ಟಿಯಾಗಲಿದೆ ಎಂದರು.
ಇನ್ನು ಬೆಂಗಳೂರಿನ ಎನ್ಜಿಇಎಫ್ (NGEF) ಆವರಣದಲ್ಲಿ 26.23 ಕೋಟಿ ವೆಚ್ಚದಲ್ಲಿ ಟ್ರೀ ಪಾರ್ಕ್ ನಿರ್ಮಾಣಕ್ಕೆ ಅನುಷ್ಠಾನ ಅನುಮೋದನೆ ನೀಡಲಾಗಿದೆ. ದೇವನಹಳ್ಳಿಯಲ್ಲಿ ಏರೋ ಪಾರ್ಕ್ ನಿರ್ಮಾಣಕ್ಕೆ 30 ಕೋಟಿ ಮಂಜೂರು ಮಾಡಲಾಗಿದೆ ಎಂದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ವಸತಿ ಶಾಲೆ/ಕಾಲೇಜು(ಮೌಲಾನ ಆಜಾದ್ ಶಾಲೆ)ಗಳ ವಿದ್ಯಾರ್ಥಿಗಳ ಸಮವಸ್ತ್ರ, ಶೂ ಮತ್ತು ಕ್ರೀಡಾ ಸಾಮಗ್ರಿಗಳಿಗೆ 33.06 ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು.