ಈ ಬಾರಿ ಮುಂಗಾರು ಕೊರತೆ: ಅಣೆಕಟ್ಟು ನೀರು ನಂಬಿಕೊಂಡು ಬೆಳೆ ಹಾಕಬೇಡಿ, ರೈತರಿಗೆ ಸಿಎಂ ಡಿಕೆ ಶಿವಕುಮಾರ್ ಸೂಚನೆ

ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ಈ ವರ್ಷ ಅಣೆಕಟ್ಟುಗಳು ಸಂಪೂರ್ಣವಾಗಿ ಭರ್ತಿಯಾಗುವವರೆಗೂ ರೈತರು ಅವುಗಳ ಮೇಲೆ ಅವಲಂಬನೆ ಆಗಬಾರದು.
CM DK Shivakumar
ಸಿಎಂ ಡಿಕೆ ಶಿವಕುಮಾರ್
Updated on

ಬೆಂಗಳೂರು: ಈ ವರ್ಷ ದೇಶದಲ್ಲಿ ಬರಗಾಲ ಎದುರಾಗುವ ಮುನ್ಸೂಚನೆ ಇದೆ. ರಾಜ್ಯದ ಬಹುತೇಕ ಅಣೆಕಟ್ಟುಗಳಲ್ಲಿನ ಒಳಹರಿವು ಶೂನ್ಯಕ್ಕೆ ತಲುಪಿದೆ. ಹೀಗಾಗಿ ರೈತರು ಅಣೆಕಟ್ಟು ನೀರು ನಂಬಿಕೊಂಡು ಬೆಳೆ ಹಾಕಬೇಡಿ ಎಂದು ಸಿಎಂ ಡಿ ಕೆ ಶಿವಕುಮಾರ್ ಗುರುವಾರ ರೈತರಿಗೆ ಸೂಚಿಸಿದ್ದಾರೆ.

ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ಈ ವರ್ಷ ಅಣೆಕಟ್ಟುಗಳು ಸಂಪೂರ್ಣವಾಗಿ ಭರ್ತಿಯಾಗುವವರೆಗೂ ರೈತರು ಅವುಗಳ ಮೇಲೆ ಅವಲಂಬನೆ ಆಗಬಾರದು ಎಂದರು.

ರಾಜ್ಯದಲ್ಲಿ ಬರ ಪರಿಸ್ಥಿತಿ ಗಂಭೀರವಾಗುತ್ತಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಅಣೆಕಟ್ಟುಗಳಲ್ಲಿ ಒಳಹರಿವಿನ ಪ್ರಮಾಣ ಶೇ.20ಕ್ಕೆ ಕುಸಿದಿದೆ. ತುಂಗಭದ್ರಾ, ಘಟ್ಟಪ್ರಭಾ, ಮಲಪ್ರಭಾ, ನಾರಾಯಣಪುರ, ವಾಣಿವಿಲಾಸ ಅಣೆಕಟ್ಟುಗಳ ಒಳಹರಿವಿನ ಪ್ರಮಾಣ ಶೂನ್ಯವಾಗಿದೆ. ಕಾವೇರಿ ಪಾತ್ರದಲ್ಲಿ ಮಳೆ ಪ್ರಮಾಣ ಕುಸಿದಿದೆ ಎಂದು ಮಾಹಿತಿ ನೀಡಿದರು.

ಕಳೆದ ವರ್ಷ ಈ ಸಮಯದಲ್ಲಿ ಹೇಮಾವತಿಯಲ್ಲಿ 80 ಅಡಿ ಇತ್ತು, ಈ ವರ್ಷ 40 ಅಡಿಗೆ ಕುಸಿದಿದೆ. ಕೆಆರ್ ಎಸ್ ನಲ್ಲಿ 100 ಅಡಿ ಇದ್ದ ನೀರಿನ ಪ್ರಮಾಣ ಈಗ 22 ಅಡಿಯಷ್ಟಿದೆ. ಕಬಿನಿಯಲ್ಲಿ 79 ಅಡಿ ಇತ್ತು. ಈಗ 26 ಅಡಿಯಷ್ಟಿದೆ. ಹೀಗಾಗಿ ಸಮಸ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ವಿವರಿಸಿದರು.

ನೀರು ಬಿಡುವ ವಿಚಾರದಲ್ಲಿ ರೈತರು ಒತ್ತಡ ಹಾಕಬೇಡಿ. ಮುಂದಿನ ದಿನಗಳಲ್ಲಿ ಮಳೆ ಗಮನದಲ್ಲಿಟ್ಟುಕೊಂಡು ಬೆಳೆ ಹಾಕಿ. ಮಳೆ ಬಂದರೆ ನಾವು ನೀರನ್ನು ಒದಗಿಸಿಕೊಡುತ್ತೇವೆ. ಸಚಿವರುಗಳಿಗೆ 2-3 ಜಿಲ್ಲೆಗಳ ಉಸ್ತುವಾರಿ ವಹಿಸಲಾಗಿದ್ದು, ನಾನು ನಾಲ್ಕು ವಿಭಾಗಗಳಿಗೆ ತೆರಳಿ ಪರಿಶೀಲನೆ ಮಾಡುತ್ತೇನೆ ಎಂದು ತಿಳಿಸಿದರು.

ಪ್ರಧಾನ ಮಂತ್ರಿಗಳು ಈಗಾಗಲೇ ನೀರು ಹಾಗೂ ವಿದ್ಯುತ್ ವಿಚಾರವಾಗಿ ಎಚ್ಚರಿಕೆ ನೀಡಿದ್ದಾರೆ. ದೇಶದಲ್ಲೇ ಭೀಕರ ಬರಗಾಲ ಬರಲಿದೆ ಎಂದು ಕೇಂದ್ರ ಸರ್ಕಾರ ಸಂದೇಶ ನೀಡಿದೆ. ವಿದ್ಯುತ್ ವಿಚಾರವಾಗಿ ಇಂಧನ ಇಲಾಖೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ನಾವು ಈ ಸಂದರ್ಭದಲ್ಲಿ ಎಚ್ಚರಿಕೆಯಿಂದ ಇರಬೇಕು ಎಂದರು.

CM DK Shivakumar
ಕೃಷ್ಣಾ ಮೇಲ್ದಂಡೆ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆ: ಆಲಮಟ್ಟಿ, ನಾರಾಯಣಪುರ ಜಲಾಶಯಗಳ ನೀರಿನ ಮಟ್ಟ ತೀರಾ ಕುಸಿತ!

ಮೇವು ಹಾಗೂ ಕುಡಿಯುವ ನೀರಿನ ವಿಚಾರವಾಗಿ ಜಿಲ್ಲಾ ಸಚಿವರಿಗೆ ಪ್ರವಾಸ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ತುರ್ತಾಗಿ ಕೊಳವೆ ಬಾವಿ ಕೊರೆಯಲು ಸೂಚಿಸಲಾಗಿದೆ. ನಾನು ಕೂಡ ನಾಲ್ಕು ವಿಭಾಗಕ್ಕೆ ಪ್ರವಾಸ ಮಾಡಲಿದ್ದು, ನಂತರ ಜಿಲ್ಲಾ ಕೇಂದ್ರಗಳಿಗೆ ತೆರಳುತ್ತೇನೆ ಎಂದು ಕರೆ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com