

ದಾವಣಗೆರೆ: ಸಿದ್ದರಾಮಯ್ಯ ಅವರು ಇನ್ನೂ ಎರಡು ವರ್ಷ ಮುಖ್ಯಮಂತ್ರಿಯಾಗಿ ಇರುತ್ತಾರೆ ಅಂದುಕೊಂಡಿದ್ದೆವು, ಕಾರಣಾಂತರಗಳಿಂದ ಆ ಸ್ಥಾನದಿಂದ ಕೆಳಗಿಳಿದಿದ್ದಾರೆ. ಅದರೆ, ಅವರ ಕನಸಿನ ಕೂಸು ಜಾತಿಗಣತಿ ಸ್ವೀಕರಿಸಿದ್ದೇವೆ, ಜಾರಿ ಮಾಡುತ್ತೇವೆ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಜಾತಿಗಣತಿ ವರದಿಯನ್ನು ಜಾರಿಗೊಳಿಸಬೇಕು ಎಂದುಕೊಂಡಿದ್ದರು, ಅದನ್ನು ನಾವು ಜಾರಿ ಮಾಡುತ್ತೇವೆ. ಅದು ಕ್ಯಾಬಿನೆಟ್ ಮುಂದೆ ಚರ್ಚೆಗೆ ಬರಬೇಕಿದೆ. ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಜಾತಿಗಣತಿ ಬಿಡುಗಡೆ ಮಾಡುವುದಾಗಿ ಹೇಳಿದ್ದೆವು, ಬಿಡುಗಡೆ ಮಾಡುತ್ತೇವೆ ಎಂದರು.
ನಿನ್ನೆ ನಡೆದ ಕ್ಯಾಬಿನೆಟ್ನಲ್ಲಿ 23 ಅಜೆಂಡಾಗಳು ಇದ್ದವು. ಮುಖ್ಯಮಂತ್ರಿಗಳು ಹೊಸದಾಗಿ ಪ್ರಜಾಸೇವೆ ಇಲಾಖೆ ಆರಂಭಿಸಿದ್ದಾರೆ. ಭಾರತ್ ಜೋಡೋ ಯುವಕರ ಸಂಘದಿಂದ ಪಕ್ಷ ಸಂಘಟಿಸುವ ನಿರ್ಧಾರ ಮಾಡಲಾಗಿದೆ. ಅಲ್ಲದೇ ಎಸ್ಐಆರ್ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆದವು ಎಂದು ಹೇಳಿದರು.
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿ, ಅದು ಹೈಕಮಾಂಡ್ಗೆ ಬಿಟ್ಟ ವಿಚಾರ. ಎರಡು ವಾರದಲ್ಲಿ ಸಂಪುಟ ವಿಸ್ತರಣೆಯಾಗುವ ನಿರೀಕ್ಷೆ ಇದೆ. ಸಂಪುಟದಲ್ಲಿ ಹೊಸಬರು ಹಾಗೂ ಹಳಬರು ಕೂಡ ಇರಬೇಕು. ಎಲ್ಲ ವಿಚಾರವನ್ನು ಹೈಕಮಾಂಡ್ಗೆ ಬಿಟ್ಟಿದ್ದೇವೆ, ಅವರೇ ತೀರ್ಮಾನ ತೆಗೆದುಕೊಳ್ಳುತ್ತಾರೆ.
ಹೊಸ ಸಿಎಂ ಪ್ರಮಾಣ ವಚನ ಸ್ವೀಕಾರ ಮಾಡಿ ಒಂದು ತಿಂಗಳಾಗಿದೆ. ನೂರು ದಿನಗಳ ಅಜೆಂಡಾ ಇದೆ. ಯಾರು ಬಡವರು, ಅರ್ಹರಿದ್ದಾರೆ ಅವರಿಗೆ ಗ್ಯಾರಂಟಿ ಕೊಡುತ್ತೇವೆ. ಜಾತಿ ಆಧಾರಿತವಾಗಿ ಗ್ಯಾರಂಟಿ ಯೋಜನೆ ನೀಡಿಲ್ಲ. ಯಾವ ಸಮುದಾಯದವರು ಎಷ್ಟು ಫಲಾನುಭವಿಗಳು ಇದ್ದಾರೆ ಅನ್ನೋ ನಿಟ್ಟಿನಲ್ಲಿ ಇರಬೇಕು ಎಂದು ಹೇಳಿದರು.