

ಬೆಂಗಳೂರು: ನಾವು ಕಾಂಗ್ರೆಸ್ ನಾಯಕರು ಊಟ-ತಿಂಡಿ ಮಾಡಲು ಕೂಡ ಒಟ್ಟು ಸೇರಬಾರದಾ, ಅದಕ್ಕೂ ನಿರ್ಬಂಧವೇ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರು ಸಂಪುಟ ವಿಸ್ತರಣೆಯ ಹೊತ್ತಿನಲ್ಲಿ ಒಕ್ಕಲಿಗ ಶಾಸಕರು ಒಟ್ಟಿಗೆ ಸೇರಿ ಡಿನ್ನರ್ ಸಭೆ ಮಾಡಿದ್ದರು ಎಂದು ಹೇಳಿದಾಗ, ಸೇರಬಾರದು ಎಂಬ ನಿಯಮ ಇದೆಯೇ, ನಾವು ಕಾಫಿ ಕುಡಿಯೋದಿಕ್ಕೆ ಹೋದರೂ ಸಂಘಟಿತರಾಗುತ್ತಿದ್ದಾರೆ ಎಂದು ಬ್ರೇಕಿಂಗ್ ನ್ಯೂಸ್ ಹಾಕಿದರೆ ಹೇಗೆ ಎಂದು ಕೇಳಿದರು.
ಮೊನ್ನೆ ನಾನು ದೆಹಲಿಗೆ ಹೋಗಿದ್ದಾಗ ನಮ್ಮ ಮನೆಗೇ ಹೋಗಿದ್ದೆ. ಅಂದರೆ ನನ್ನ ತಂದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಮನೆಗೆ. ಮಾಧ್ಯಮದವರು ಪ್ರಿಯಾಂಕ್ ಖರ್ಗೆ ಎಐಸಿಸಿ ಅಧ್ಯಕ್ಷರ ಮನೆಗೆ ಹೋಗ್ತಾ ಇದ್ದಾರೆ ಎಂದು ಬ್ರೇಕಿಂಗ್ ನ್ಯೂಸ್ ಹಾಕಿದರು. ನಾನು ದೆಹಲಿಗೆ ಹೋದರೆ ಅಲ್ಲೇ ಇರೋದಲ್ವಾ ಎಂದು ನಗುತ್ತಾ ಕೇಳಿದರು.
ಸಂಪೂರ್ಣ ಸಂಪುಟ ವಿಸ್ತರಣೆ ಸದ್ಯದಲ್ಲಿಯೇ ನಡೆಯಬಹುದು, ಇನ್ನೊಂದೆರಡು ವಾರದಲ್ಲಿ ನಡೆಯಬಹುದು ಎಂದರು.
ಸರ್ಕಾರದಲ್ಲಿ ಎನ್ ಐಆರ್ ಇಲಾಖೆ ಸ್ಥಾಪಿಸುವ ಬಗ್ಗೆ ಆಕ್ಷೇಪದ ಪ್ರಶ್ನೆಯಲ್ಲ, ಕರ್ನಾಟಕ ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ನಮ್ಮ ಮಾನವ ಸಂಪನ್ಮೂಲ ಜಗತ್ತಿನ ಎಲ್ಲಾ ಕಡೆ ಇದೆ, ಕೆಲವು ನೀತಿ ನಿಯಮಗಳನ್ನು ಸರ್ಕಾರದ ಮಟ್ಟದಲ್ಲಿ ತಂದಾಗ ಅದು ಬಂಡವಾಳ ಸಂಗ್ರಹ, ಉದ್ಯೋಗ ಸೃಷ್ಟಿಗೆ ಹೇಗೆ ಅನುಕೂಲ ಆಗಬಹುದು ಎಂದು ನೋಡಬೇಕು. ಬೇರೆ ಬೇರೆ ಇಲಾಖೆಗಳಲ್ಲಿ ನಡೆಯುತ್ತಿದೆ. ವಿದೇಶ ಬಂಡವಾಳ ಹರಿವಿಗೆ ಉತ್ತಮ ಇಲಾಖೆ ಬೇಕಾಗಿದೆ. ಇಂದು ಭೌಗೋಳಿಕ ಭೂದೃಶ್ಯ ಬದಲಾಗಿದೆ. ಹೋದ ವರ್ಷ 60 ದೇಶಗಳ ರಾಯಭಾರಿಗಳು ಬಂದಿದ್ದರು. ಕೊಡು-ಕೊಳ್ಳುವಿಕೆ ಆಗುತ್ತದೆ, ವ್ಯವಸ್ಥಿತವಾಗಿ ಇಲಾಖೆ ಮಾಡಿದಾಗ ಸಂಪರ್ಕವಾಗುತ್ತದೆ, ಇಲಾಖೆ ಸ್ಥಾಪನೆ ಪ್ರಕ್ರಿಯೆಯಲ್ಲಿದೆ ಎಂದು ವಿವರಿಸಿದರು.